ಬೆಂಗಳೂರು (ಡಿ.1) ನಗರದ ಹಲಸೂರು ಕೆರೆ ಸಮೀಪದಲ್ಲಿ ದೇಶದಲ್ಲೇ ಮೊಟ್ಟ ಮೊದಲ ಬಾರಿಗೆ ಬಿದಿರಿನಿಂದ ನಿರ್ಮಾಣವಾಗಲಿರುವ ಅರಣ್ಯ ವಸತಿ ಮತ್ತು ವಿಹಾರಧಾಮಗಳ ಆಡಳಿತ ಕಚೇರಿ ‘ಪ್ರವಾಸಿ ಸೌಧ’ ಕಟ್ಟಡ ನಿರ್ಮಾಣಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗುರುವಾರ ಶಂಕು ಸ್ಥಾಪನೆ ನೆರವೇರಿಸಿದರು.
ಈ ಸಂದರ್ಭದಲ್ಲಿ ಪ್ರವಾಸೋದ್ಯಮ ಸಚಿವ ಎಚ್.ಕೆ.ಪಾಟೀಲ್, ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ಗೋವಿಂದರಾಜ್, ಶಾಸಕ ರಿಜ್ವಾನ್ ಅರ್ಷದ್, ಸೇರಿದಂತೆ ಮತ್ತಿತತರು ಉಪಸ್ಥಿತರಿದ್ದರು.
ಅರಣ್ಯ ವಸತಿ ಮತ್ತು ವಿಹಾರ ಧಾಮಗಳ ಸಂಸ್ಥೆಯು ₹12.36 ಕೋಟಿ ವೆಚ್ಚದಲ್ಲಿ ಹಲಸೂರು ಕೆರೆ ಸಮೀಪದಲ್ಲಿದ್ದ ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮದಿಂದ ಈ ಜಾಗವನ್ನು ಖರೀದಿ ಮಾಡಿತ್ತು. ಬಾಡಿಗೆ ಕಟ್ಟಡಗಳಲ್ಲಿರುವ ಪ್ರವಾಸೋದ್ಯಮ ಇಲಾಖೆಯ ಆಡಳಿತ ವ್ಯಾಪ್ತಿಯಲ್ಲಿರುವ ಪ್ರವಾಸೋದ್ಯಮ ನಿರ್ದೇಶನಾಲಯ, ಕೆಎಸ್ಟಿಡಿಸಿ, ಜಂಗಲ್ ಲಾಡ್ಜಸ್ ಆ್ಯಂಡ್ ರೆಸಾರ್ಟ್ಸ್ (ಜೆಎಲ್ಆರ್) ಮತ್ತು ಕರ್ನಾಟಕ ಟೂರಿಸಂ ಇನ್ಫಾಸ್ಟ್ರಕ್ಚರ್ ಲಿಮಿಟೆಡ್ (ಕೆಟಿಐಎಲ್) ಕಚೇರಿಗಳನ್ನು ಒಂದೇ ಕಟ್ಟಡದಲ್ಲಿ ಇರುವಂತೆ ಮಾಡುವ ಉದ್ದೇಶದಿಂದ ಪರಿಸರ ಸ್ನೇಹಿಯಾಗಿ ಪ್ರವಾಸಿಸೌಧ ನಿರ್ಮಾಣಕ್ಕೆ ಯೋಜಿಸಲಾಗಿದೆ.
ರಾಜ್ಯ ಸರ್ಕಾರ ಹಾಲಿ ಬಾಡಿಗೆ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ರವಾಸೋದ್ಯಮ ಇಲಾಖೆಯ ಎಲ್ಲಾ ಅಧೀನದ ಎಲ್ಲಾ ಕಚೇರಿಗಳನ್ನು ಒಂದೇ ಸೂರಿನಡಿ ತಂದು ಕಾರ್ಯ ನಿರ್ವಹಿಸುವಂತೆ ಮಾಡುವ ಸಲುವಾಗಿ ಪ್ರವಾಸಿ ಸೌಧ ನಿರ್ಮಾಣಕ್ಕೆ ಮುಂದಾಗಿದೆ. ಪ್ರಸ್ತುತ ಇರುವ ಹಳೆಯ ಕಟ್ಟಡವನ್ನು ಕೆಡವಿ ಜಿಎಲ್ಆರ್ ಸಂಸ್ಥೆ ಸ್ವಂತ ಸಂಪನ್ಮೂಲದಿಂದ ಈ ಸ್ಥಳದಲ್ಲಿ ₹18 ಕೋಟಿ ಅಂದಾಜು ವೆಚ್ಚದಲ್ಲಿ ಜಿ+3 (ನೆಲ ಮಹಡಿಯೊಂದಿಗೆ) ಮಹಡಿಗಳುಳ್ಳ ಪರಿಸರ ಸ್ನೇಹಿ ವಾಸ್ತುಶಿಲ್ಪಿ ಒಳಗೊಂಡಂತೆ ಅಡಿಪಾಯ ಹೊರತುಪಡಿಸಿ ಕಟ್ಟಡದ ಉಳಿದ ಭಾಗವನ್ನು ದೇಶದಲ್ಲೇ ಮೊದಲ ಬಾರಿಗೆ ಬಿದಿರಿನಿಂದ ವಿನ್ಯಾಸಗೊಳಿಸಿ ಪ್ರವಾಸಿ ಸೌಧ ನಿರ್ಮಿಸಲಿದೆ ಎಂದು ಪ್ರವಾಸೋದ್ಯಮ ಇಲಾಖೆ ಮಾಹಿತಿ ನೀಡಿದೆ.