– ಬಿಜೆಪಿ ರಾಜ್ಯ ಉಪಾಧ್ಯಕ್ಷ ಎನ್. ಮಹೇಶ್ ಆಗ್ರಹ
ಪ್ರತಿನಿಧಿ ವರದಿ ಮೈಸೂರು
ಮುಡಾ ಅಕ್ರಮ ನಿವೇಶನ ಸಂಬಂಧ ನಿಸ್ಪಕ್ಷಪಾತ ತನಿಖೆ ಆಗಬೇಕಾದರೆ, ಸಿದ್ದರಾಮಯ್ಯ ಅವರು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಲೇಬೇಕು ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಎನ್. ಮಹೇಶ್ ಆಗ್ರಹಿಸಿದರು.
ನಗರದ ಬಿಜೆಪಿ ಕಚೇರಿಯಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಡಾ ನಿವೇಶನ ಹಂಚಿಕೆಯಲ್ಲಿ ನಡೆದಿರುವ ಹಗರಣ ಸಂಬಂಧ 14 ನಿವೇಶನಗಳ ಬಗ್ಗೆ ಬಿಜೆಪಿ 3 ತಿಂಗಳ ಹಿಂದೆ ಪ್ರಶ್ನಿಸಿದ್ದಕ್ಕೆ 62 ಕೋಟಿ ನೀಡಿ, ವಾಪಾಸ್ ಕೊಡುತ್ತೇವೆ ಎಂದು ಸಿದ್ದರಾಮಯ್ಯ ಹೇಳಿದ್ದರು. ಆದರೆ ಈಗ ಪ್ರಕರಣದ ಕುರಿತು ಲೋಕಾಯುಕ್ತ ತನಿಖೆ ಆರಂಭಗೊಂಡ ಕಾರಣಕ್ಕೆ ಹಾಗೂ ಇಡಿಯಲ್ಲಿ ಪ್ರಕರಣ ದಾಖಲಾದ ಹಿನ್ನೆಲೆಯಲ್ಲಿ ಸಮಸ್ಯೆ ಆಗಲಿದೆ ಎಂಬುದನ್ನು ಅರಿತು ಮುಡಾಗೆ 14 ಸೈಟ್ಗಳನ್ನು ವಾಪಸ್ ನೀಡಲಾಗಿದೆ ಎಂದು ಟೀಕಿಸಿದರು.
ಅಲ್ಲದೇ ನಿವೇಶನ ವಾಪಾಸ್ ಪಡೆಯುವ ಬಗ್ಗೆ ಸಿಎಂ ಪತ್ನಿ ಪಾರ್ವತಿ ಅವರು ಮುಡಾಗೆ ಪತ್ರ ಬರೆದ 24 ಗಂಟೆಯೊಳಗೆ ಪಾರ್ವತಿನ ಅವರಿಗೆ ನೀಡಿದ್ದ ನಿವೇಶನಗಳನ್ನು ರದ್ದು ಪಡಿಸಲಾಗಿದೆ. ಇದರಲ್ಲಿ ಕನಿಷ್ಠ ಕಾನೂನು ಸಹ ನಿಯಮ ಪಾಲನೆಯಾಗಿಲ್ಲ, ಇದಕ್ಕೆ ಸಿದ್ದರಾಮಯ್ಯ ಅವರು ಸಿಎಂ ಸ್ಥಾನದಲ್ಲಿರುವುದೇ ಕಾರಣವಾಗಿದೆ. ಅವರು ಯಾವುದೇ ಪ್ರಭಾವ ಬೀರದಿದ್ದರೂ ಅವರ ಸ್ಥಾನ ಮತ್ತು ಅಧಿಕಾರದಿಂದ ಎಲ್ಲ ನಡೆಯುತ್ತದೆ. ಸಿಎಂ ಪತ್ನಿ ನಿವೇಶನಗಳನ್ನು ವಾಪಾಸ್ ನೀಡುವುದಾಗಿ ಹೇಳಿದ ಕೂಡಲೇ ಅಧಿಕಾರಿಗಳು ತರಾತುರಿಯಲ್ಲಿ ನಿವೇಶನವನ್ನು ವಾಪಸ್ ಪಡೆದಿದ್ದಾರೆ. ಪ್ರಕರಣ ತನಿಖೆಯಲ್ಲಿರುವಾಗ ಹೀಗೆ ಪಡೆಯಲು ಸಾಧ್ಯವೇ? ಎಂದು ಪ್ರಶ್ನಿಸಿದ ಅವರು, ಸಿದ್ದರಾಮಯ್ಯ ಅವರು ಎಲ್ಲಿಯವರೆಗೆ ಸಿಎಂ ಆಗಿ ಇರುತ್ತಾರೋ ಅಲ್ಲಿಯವರೆಗೆ ನಿಸ್ಪಕ್ಷಪಾತ ತನಿಖೆ ಸಾಧ್ಯವಿಲ್ಲ ಎಂದರು.
ಗೋಷ್ಠಿಯಲ್ಲಿ ಬಿಜೆಪಿ ನಗರಾಧ್ಯಕ್ಷ ಎಲ್. ನಾಗೇಂದ್ರ, ಜಿಲ್ಲಾಧ್ಯಕ್ಷ ಎಲ್.ಆರ್. ಮಹದೇವಸ್ವಾಮಿ, ಮುಖಂಡರಾದ ಪರಮಾನಂದ, ಕೇಬಲ್ ಮಹೇಶ್, ಮಹೇಶ್ ರಾಜೇ ಅರಸ್, ಕಿರಣ್, ರಾಕೇಶ್ ಇದ್ದರು.
================
ಬಾಕ್ಸ್
ಯತ್ನಾಳ್ ವಿರುದ್ಧ ಕ್ರಮವಹಿಸಲಿ
ವಿವಾದಾತ್ಮಕ ಹೇಳಿಕೆಯಿಂದ ಪಕ್ಷದ ಸಂಘಟನಾತ್ಮಕ ವಿಚಾರಗಳಿಗೆ ಧಕ್ಕೆ ಮಾಡುತ್ತಿರುವ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಕ್ರಮಕೈಗೊಳ್ಳುವಂತೆ ಎನ್. ಮಹೇಶ್ ಒತ್ತಾಯಿಸಿದರು. ಯತ್ನಾಳ್ ಅವರು ನೀಡುತ್ತಿರುವ ಹೇಳಿಕೆಗಳು ವಿಚಿತ್ರ, ವಿಪರ್ಯಾಸ ಅಹಂಕಾರದಿಂದ ಕೂಡಿದೆ. ಪಕ್ಷದ ಸದಸ್ಯತ್ವ ಅಭಿಯಾನ ನಡೆಯುತ್ತಿರುವ ಸಂದರ್ಭದಲ್ಲಿ ಯತ್ನಾಳ್ ಅವರು ಪಕ್ಷಕ್ಕೆ ಮುಜುಗರವಾಗುವ ರೀತಿಯಲ್ಲಿ ಪದೇ ಪದೇ ಮಾತನಾಡಬಾರದು. ಯತ್ನಾಳ್ ಅವರ ಹೇಳಿಕೆ ಇದೇ ರೀತಿ ಮುಂದುವರಿದರೆ ಕಾರ್ಯಕರ್ತರಲ್ಲಿ ನಿರುತ್ಸಾಹ ಉಂಟಾಗಲಿದೆ. ಹೀಗಾಗಿ ಯತ್ನಾಳ್ ಅವರ ವಿರುದ್ಧ ಪಕ್ಷದ ವರಿಷ್ಠರು ಕ್ರಮಕೈಗೊಳ್ಳಬೇಕು ಎಂದು ಹೇಳಿದರು.
==================
ಕೋಟ್
ಸಿದ್ದರಾಮಯ್ಯ ಅವರ ವಿರುದ್ಧ ಮುಡಾ ಪ್ರಕರಣದಿಂದ ಕಾಂಗ್ರೆಸ್ಗೆ ಮುಜುಗರವಾಗಿದೆ. ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ ತಪ್ಪು ಮಾಡಿರುವುದು ಮೊದಲಿಂದಲೂ ಸಾಬೀತಾಗಿದೆ. ಸಿದ್ದರಾಮಯ್ಯ ಅವರ ಪತ್ನಿ 14 ಸೈಟ್ಗಳನ್ನು ವಾಪಸ್ ನೀಡುವ ಬಗ್ಗೆ ಮುಡಾ ಸಭೆಯಲ್ಲಿ ಚರ್ಚಿಸಬೇಕಿತ್ತು. ಅದನ್ನು ಮಾಡದೆ ನಿವೇಶನಗಳನ್ನು ವಾಪಾಸ್ ನೀಡುವ ಮೂಲಕ ಸರ್ಕಾರ ತಪ್ಪನ್ನು ಒಪ್ಪಿಕೊಂಡಿದೆ. ಸಿದ್ದರಾಮಯ್ಯ ದಸರಾ ವೇಳೆ ಅಂಬಾರಿಯಲ್ಲಿ ಚಾಮುಂಡೇಶ್ವರಿಗೆ ಪುಷ್ಪಾರ್ಚನೆ ಮಾಡುವುದು ಅನುಮಾನ ಎಂದು ಸ್ವತಃ ಕಾಂಗ್ರೆಸ್ನಲ್ಲೇ ಚರ್ಚೆಗಳು ನಡೆಯುತ್ತಿವೆ.
– ಟಿ.ಎಸ್. ಶ್ರೀವತ್ಸ, ಶಾಸಕ
==================
ಬಾಕ್ಸ್
ಸಿಎಂ ರಾಜೀನಾಮೆ ನೀಡಲಿ: ಯದುವೀರ್
ಮೈಸೂರು: ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ರಾಜೀನಾಮೆ ನೀಡಬೇಕಿದೆ ಎಂದು ಸಂಸದ ಯದುವೀರ್ ಒಡೆಯರ್ ಆಗ್ರಹಿಸಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸೈಟ್ ವಾಪಸ್ ಕೊಟ್ಟಿರುವುದು ನೋಡಿದರೇ ತಪ್ಪಾಗಿದೆ ಎಂದರ್ಥ. ಸೈಟ್ಗೆ ಇರುವ ಬೆಲೆಗಿಂತ ಐದಾರು ಪಟ್ಟು ಹಣ ಕೇಳಿದ್ದರು. ಪ್ರಕರಣದಲ್ಲಿ ಖುದ್ದು ಸಿಎಂ ಅವರ ಹೆಸರೇ ಕೇಳಿ ಬಂದಿದೆ. ಹೀಗಾಗಿ ಪ್ರಕರಣದ ಸೂಕ್ತ ತನಿಖೆಯಾಗಬೇಕಿದ್ದು, ಸಿದ್ದರಾಮಯ್ಯ ಅವರು ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲೇಬೇಕು. ಇದು ಸಿಎಂಗೆ ಕಪ್ಪುಚುಕ್ಕೆ ತರುವ ವಿಚಾರವಾಗಿದ್ದು, ಅವರು ದುರಾಡಳಿತ ಮಾಡಿದ್ದಾರೆ. ನೇರವಾಗಿ ತಪ್ಪು ಮಾಡಿರುವ ಕಾರಣ ರಾಜೀನಾಮೆ ಕೊಡಬೇಕು ಎಂದು ಒತ್ತಾಯಿಸಿದರು.
ಅಧಿಕಾರಿಗಳ ಮೇಲೆ ಪ್ರಭಾವ ಬೀರುತ್ತಾರೆ. ಸಿಎಂ ಅಧಿಕಾರ ದುರುಪಯೋಗ ಮಾಡಿಕೊಂಡಿದ್ದಾರೆ. ಇದರ ಜೊತೆಗೆ ವಾಲ್ಮೀಕಿ ಹಗರಣದಲ್ಲೂ ಕೂಡ ತಪ್ಪಾಗಿದೆ. ಹೀಗಾಗಿ ಸಿದ್ದರಾಮಯ್ಯ ಅವರು ರಾಜೀನಾಮೆ ಕೊಡಲೇಬೇಕು. ಸಿಎಂ ಪತ್ನಿಯನ್ನ ರಾಜಕೀಯಕ್ಕೆ ತಂದಿಲ್ಲ. ಮುಖ್ಯಮಂತ್ರಿಯಾಗಲಿ, ಮಹಿಳೆಯಗಾಗಲಿ , ಯಾರೇ ಆಗಲಿ ಆರೋಪ ಬಂದಾಗ ಎದುರಿಸಬೇಕು. ಅವರ ಮೇಲೆ ಆರೋಪ ಬಂದಿದೆ ಹಾಗಾಗಿ ಅವರ ಪತ್ನಿ ತನಿಖೆಯಲ್ಲಿ ಭಾಗಿಯಾಗಲೇಬೇಕು. ಮುಡಾದ ಮೂಲ ಉದ್ದೇಶ ಬಡವರಿಗೆ ಸೈಟ್ ಸಿಗಬೇಕು ಎಂಬುದು. ಆದರೆ ಅದು ಒಂದು ವರ್ಗಕ್ಕೆ ಲಾಭ ಆಗುತ್ತಿದ್ದು, ಈ ಕಾರಣಕ್ಕೆ ಸಮಗ್ರ ತನಿಖೆ ಆಗಬೇಕು ಎಂದ ಅವರು, ಸಿಎಂ ಮೊದಲೇ ಸೈಟ್ ಕೊಟ್ಟಿದ್ದರೆ ಈ ಸಮಸ್ಯೆ ಆಗುತ್ತಿರಲಿಲ್ಲ ಎಂಬ ವಿಚಾರ ಕುರಿತು ಪ್ರತಿಕ್ರಿಯಿಸಿದ ಯದುವೀರ್, ಈಗ ಏನಾಗಿದೆ? ಏನಾಗಿಲ್ಲ ಅಂತ ಪರಾಮರ್ಶೆ ಮಾಡುವ ಸಂದರ್ಭವಲ್ಲ. ತಪ್ಪಂತೂ ಆಗಿದೆ , ಅದನ್ನ ಅವರೇ ಒಪ್ಪಿಕೊಂಡಿದ್ದಾರೆ. ಅವರ ಕೈ ಹಾಕಿದ್ದಾರಾ ನೋಡಬೇಕಿದೆ. ಹೀಗಾಗಿ ತಕ್ಷಣ ರಾಜೀನಾಮೆ ನೀಡಲೇಬೇಕು ಎಂದು ಆಗ್ರಹಿಸಿದರು.
(ಯದುವೀರ್ ಫೋಟೋ ಬಳಸಿ)