- ಅಗ್ನಿಶಾಮಕ ದಳದಿಂದ ರಕ್ಷಣೆ
- ಪ್ರಾಣಾಪಾಯದಿಂದ ಪಾರು
ಪ್ರತಿನಿಧಿ ವರದಿ ಸಕಲೇಶಪುರ
ಪಟ್ಟಣ ಸಮೀಪದ ಕೊಲ್ಲಹಳ್ಳಿ ಗ್ರಾಮದಲ್ಲಿ ಬಿಸಿಲ ತಾಪಕ್ಕೆ ತೆಂಗಿನ ಮರದಲ್ಲೇ ಪ್ರಜ್ಞಾಹೀನ ಸ್ಥಿತಿಗೆ ತಲುಪಿದ್ದ ಯುವಕನ್ನು ಅಗ್ನಿಶಾಮಕ ದಳದ ಸಿಬ್ಬಂದಿ ರಕ್ಷಿಸಿದರು.
ನವೀನ್(೨೧) ಸಾವಿನ ದವಡೆಯಿಂದ ಪಾರಾದ ಯುವಕ. ಗ್ರಾಮದ ಮಂಜು ಎಂಬುವವರಿಗೆ ಸೇರಿದ ತೆಂಗಿನಮರದ ಗರಿಗಳನ್ನು ಕತ್ತರಿಸಲು ಸೊಂಟಕ್ಕೆ ಹಗ್ಗ ಕಟ್ಟಿಕೊಂಡು ಮರವೇರಿದ್ದ ನವೀನ್, ಕೆಲಸ ಮುಗಿಸಿ ಕೆಳಗಿಳಿಯುವಾಗ ಅತಿಯಾದ ಬಿಸಿಲಿನ ತಾಪದಿಂದ ಪ್ರಜ್ಞಾಹೀನನಾಗಿ ಮರದಲ್ಲೇ ಸುಮಾರು ೪೫ ನಿಮಿಷಗಳ ಕಾಲ ನೇತಾಡಿದನು.
ಸುಮಾರು 50 ಅಡಿ ಎತ್ತರದಲ್ಲಿ ಸಿಲುಕಿಕೊಂಡಿದ್ದ ಈತನನ್ನು ಅಗ್ನಿಶಾಮಕ ದಳದ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ರಕ್ಷಿಸಿದರು. ನವೀನ್ನನ್ನು ಕೆಳಗಿಳಿಸಿ ಆರೈಕೆ ಮಾಡಲಾಗಿದ್ದು, ಸದ್ಯ ಚೇತರಿಸಿಕೊಂಡಿದ್ದಾನೆ.