ಬೆಂಗಳೂರು, ಅ.10: ಆಡುಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಗಣೇಶ ಮೂರ್ತಿ ವಿಸರ್ಜನೆ ಮೆರವಣಿಗೆ ಹೋಗುತ್ತಿದ್ದಾಗ, ಡ್ಯಾನ್ಸ್ ಮಾಡುವ ವಿಚಾರಕ್ಕೆ ಗಲಾಟೆ ನಡೆದು ಕೊರಿಯರ್ ಬಾಯ್ಗೆ ಡ್ರ್ಯಾಗರ್ನಿಂದ ಹೊಟ್ಟೆಗೆ ಇರಿದು ಕೊಲೆ (Murder) ಮಾಡಲಾಗಿತ್ತು. ಮತ್ತೊಂದೆಡೆ ಮೆರವಣಿಗೆ ಸಂದರ್ಭದಲ್ಲಿ ಎರಡು ಗುಂಪುಗಳ ನಡುವೆ ಗಲಾಟೆಗಳು ನಡೆದಿದ್ದವು. ಹೀಗಾಗಿ ಗಣೇಶ ಮೆರವಣಿಗೆ (Ganesh Visarjan Procession) ವೇಳೆ ನಗರದಲ್ಲಿ ನಡೆದ ಸಾಲು ಸಾಲು ಘಟನೆಗಳ ಬಳಿಕ ಪೊಲೀಸ್ ಇಲಾಖೆ ಎಚ್ಚೆತ್ತುಕೊಂಡಿದ್ದು ಇನ್ಮುಂದೆ ಗಣೇಶ ಮೆರವಣಿಗೆಗೆ ಅನುಮತಿ ನೀಡದಂತೆ ಪೊಲೀಸ್ ಕಮಿಷನರ್ ಬಿ. ದಯಾನಂದ್ ಅವರು ನಗರದ ಎಲ್ಲಾ ಪೊಲೀಸರಿಗೂ ಸೂಚನೆ ನೀಡಿದ್ದಾರೆ.
ಗಣೇಶ ಮೆರವಣಿಗೆ ವೇಳೆ ನಗರದ ಹಲವು ಕಡೆಗಳಲ್ಲಿ ಗಲಾಟೆಗಳು ನಡೆದಿವೆ. ಹಲಸೂರು, ಯಡಿಯೂರು, ಆಡುಗೋಡಿ ಸೇರಿ ಹಲವು ಕಡೆಗಳಲ್ಲಿ ಗಲಾಟೆಗಳು ನಡೆದಿವೆ. ಅಲ್ಲದೆ ಆಡುಗೋಡೆ ಬಳಿ ಮೆರವಣಿಗೆ ವೇಳೆ ಆದ ಗಲಾಟೆಯಲ್ಲಿ ಶ್ರೀನಿವಾಸ್ ಎಂಬ ಕೊರಿಯರ್ ಬಾಯ್ ಬರ್ಬರವಾಗಿ ಕೊಲೆಯಾಗಿದ್ದಾನೆ. ಹೀಗಾಗಿ ಗಣೇಶ ಮೆರವಣಿಗೆಗೆ ಅನುಮತಿ ನೀಡದಿರಲು ಪೊಲೀಸ್ ಕಮೀಷನರ್ ಸೂಚಿಸಿದ್ದಾರೆ. ಹಬ್ಬ ಮುಗಿದು ಹಲವಾರು ದಿನ ಕಳೆದ ಹಿನ್ನೆಲೆ ಈ ನಿರ್ಧಾರ ಕೈಗೊಳ್ಳಲಾಗಿದೆ.
ಹೀಗಾಗಿ ನಗರದಲ್ಲಿ ಇನ್ಮುಂದೆ ಗಣೇಶ ಮೆರವಣಿಗೆಗೆ ಅನುಮತಿ ನೀಡದಂತೆ ಕಮೀಷನರ್ ಸೂಚನೆ ನೀಡಿದ್ದಾರೆ. ಇನ್ನು ಕಮಿಷನರ್ ಸೂಚನೆ ಬಳಿಕವೂ ಅನಮತಿ ಕೋರಿ ಸಾಲು ಸಾಲು ಮನವಿಗಳು ಬರುತ್ತಿವೆ. ಸುಮಾರು 200ಕ್ಕೂ ಹೆಚ್ಚು ಜನ ಗಣೇಶ ಮೆರವಣಿಗೆಗೆ ಅನುಮತಿ ನೀಡುವಂತೆ ಪತ್ರ ಬರೆದಿದ್ದಾರೆ. ಯಾವುದೇ ಕಾರಣಕ್ಕೂ ಅನುಮತಿ ಕೊಡಲ್ಲ ಎಂದು ಪೊಲೀಸರು ಹೇಳುತ್ತಿದ್ದಾರೆ. ಹಬ್ಬ ಮುಗಿದ್ರೂ ಏರಿಯಾ ಏರಿಯಾಗಳಲ್ಲಿ ಜನ ಗಣಪತಿ ಇಡ್ತಾಯಿದಾರೆ. ಪೊಲೀಸರ ಮಾಹಿತಿ ಪ್ರಕಾರ ಇನ್ನೂ 450 ಗಣಪತಿಗಳು ನಗರದಲ್ಲಿ ಇಟ್ಟಿದ್ದಾರೆ.