ಕ್ಷೇತ್ರ ಶಿಕ್ಷಣಾಧಿಕಾರಿ ಎ.ಜೆ.ಕೃಷ್ಣೇಗೌಡ ಸಲಹೆ
ಪ್ರತಿನಿಧಿ ವರದಿ ಆಲೂರು
ಮೌಲ್ಯಗಳನ್ನು ಬಿತ್ತುವವರು ಹಾಗೂ ವೇದಿಕೆಗಳಲ್ಲಿ ಮೌಲ್ಯಗಳ ಬಗ್ಗೆ ಮಾತನಾಡುವವರು ಮೊದಲು ಬದ್ಧರಾಗಿರಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎ.ಜೆ.ಕೃಷ್ಣೇಗೌಡ ಹೇಳಿದರು.
ತಾಲೂಕಿನ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸ್ಥಳೀಯ ಸಂಸ್ಥೆ ವತಿಯಿಂದ 2024-25ನೇ ಸಾಲಿನ ಕಬ್ ಮಾಸ್ಟರ್, ಫ್ಲಾಕ್ ಲೀರ್ಸ್, ಸ್ಕೌಟ್ ಮಾಸ್ಟರ್, ಗೈಡ್ ಕ್ಯಾಪ್ಟನ್ಗಳಿಗಾಗಿ ಪಟ್ಟಣದ ಕ್ಷೇತ್ರ ಸಂಪನ್ಮೂಲ ಕೇಂದ್ರದಲ್ಲಿ ಹಮ್ಮಿಕೊಂಡಿದ್ದ ತಾಲೂಕು ಸಮಾವೇಶ ಹಾಗೂ ಕೌನ್ಸಿಲ್ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ನೈಸರ್ಗಿಕ ಅವಘಡಗಳಿಗೆ ನಾವೇ ಹೊಣೆಗಾರರು. ನಮ್ಮ ದುರಾಸೆಯ ಫಲವಾಗಿ ಪ್ರಸ್ತುತ ಪ್ರಕೃತಿಯನ್ನು ನಾಶಗೈದು ದುಷ್ಪರಿಣಾಮವನ್ನು ಎದುರಿಸುತ್ತಿದ್ದೇವೆ. ಪಠ್ಯದ ಜತೆಗೆ, ಮಗುವಿನ ಸರ್ವಾಂಗೀಣ ಬೆಳವಣಿಗೆಯಲ್ಲಿ ಜೀವನ ಮೌಲ್ಯಗಳು ಬಹಳ ಮಹತ್ವದ್ದಾಗಿವೆ. ಇಂತಹ ಮೌಲ್ಯಗಳನ್ನು ಸ್ಕೌಟ್ಸ್ ಗೈಡ್ಸ್ ಬೆಳೆಸುತ್ತದೆ. ಸ್ನೇಹಿತರ, ಬಂಧುಗಳ, ಅಕ್ಕಪಕ್ಕದವರ ಶ್ರೇಯಸ್ಸನ್ನೇ ಸಹಿಸದ ಕಾಲಘಟ್ಟದಲ್ಲಿ ನಾನು, ನನ್ನದು ಎಂಬ ಸಂಕುಚಿತ ಮನೋಭಾವಕ್ಕಿಂತ ನಾವು, ನಮ್ಮದು ಎಂಬ ವಿಶಾಲಧೋರಣೆ ಅತ್ಯಗತ್ಯ ಎಂದರು.
ಜಿಲ್ಲಾ ಮುಖ್ಯ ಆಯುಕ್ತ ಡಾ.ವೈ.ಎಸ್.ವೀರಭದ್ರಪ್ಪ ಮಾತನಾಡಿ, ಮನುಷ್ಯ ಸಂಘಜೀವಿಯಾದ್ದರಿಂದ ಸಾಮುದಾಯಿಕ ಪ್ರಜ್ಞೆ ಅವಶ್ಯಕ. ಪ್ರತಿಯೊಬ್ಬರೂ ಸೇವಾಧೋರಣೆ ರೂಢಿಸಿಕೊಳ್ಳಬೇಕಾದ ಅನಿವಾರ್ಯತೆಯಿದೆ. ನಮ್ಮ ಸಂಸ್ಥೆಯಿಂದ ಮಕ್ಕಳ ಸರ್ವಾಂಗೀಣ ಬೆಳವಣಿಗೆಯ ಜತೆಗೆ, ಶೈಕ್ಷಣಿಕ ಲಾಭವೂ ಇದೆ. ಉನ್ನತ ಶಿಕ್ಷಣ ಹಾಗೂ ಉದ್ಯೋಗಗಳಲ್ಲಿ ಮೀಸಲಾತಿಯಿದ್ದು, ಶಿಕ್ಷಕರು ಹಾಗೂ ಮಕ್ಕಳು ಸದುಪಯೋಗಪಡಿಸಿಕೊಳ್ಳಬೇಕು ಎಂದರು.
ಹಿರಿಯ ಗೈಡರ್ ಎಚ್.ಜಿ.ಕಾಂಚನಮಾಲ, ರಾಜ್ಯ ಸಂಘಟನಾ ಸಹಾಯಕ ಆಯುಕ್ತೆ ಎಚ್.ಎಂ.ಪ್ರಿಯಾಂಕ, ಆಲೂರು ಪಪಂ ಮುಖ್ಯಾಧಿಕಾರಿ ಸ್ಟೀಫನ್ ಪ್ರಕಾಶ್, ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ಗೋವಿಂದೇಗೌಡ, ಜಿಲ್ಲಾ ಸಹಾಯಕ ಆಯುಕ್ತ ಎಂ.ಬಾಲಕೃಷ್ಣ, ಜಿಲ್ಲಾ ಕಾರ್ಯದರ್ಶಿ ಸುರೇಶ್ ಗುರೂಜಿ, ಜಿಲ್ಲಾ ಖಜಾಂಚಿ ರಮೇಶ್, ಬಿ.ಆರ್.ಪಿ.ಪ್ರಮೀಳಾ ಮಾತನಾಡಿದರು.
ಭೈರಾಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಎಂ.ಎಲ್.ಎಲಿಜೆಬೆತ್, ಭೈರಾಪುರ ಬೆಥಸ್ಥ ಮಾಡೆಲ್ ಶಾಲೆಯ ಜಿ.ಕೆ.ಶಿಲ್ಪಕೃತಿ, ಎಚ್.ಎನ್.ಸೌಮ್ಯ, ಪಿ.ಚಂದ್ರು, ಇನಸ್ಪೈರ್ ಶಾಲೆಯ ಬಿ.ವಿ.ಅನೀಸ್, ಕೆ.ಪಿ.ಎಸ್.ರಾಯರಕೊಪ್ಪಲಿನ ಹಾಲಪ್ಪ, ಕಣತೂರು ಶಾಲೆಯ ನಯನಾ ಭಾಗವಹಿಸಿದ್ದರು.