ಹಿರಿಯ ಪತ್ರಕರ್ತ ಎಂ.ನಾ.ಚಂಬಲ್ತಿಮಾರ್ ಅಭಿಪ್ರಾಯ
ಪ್ರತಿನಿಧಿ ವರದಿ ಚಿಕ್ಕಮಗಳೂರು
ಕಲಾವಿದನೊಳಗೆ ರಂಗಪ್ರಜ್ಞೆಯ ಬದ್ಧತೆ ಮತ್ತು ಸಿದ್ಧತೆಗಳಿದ್ದಾಗ ನೂತನ ತಾರೋದಯವಾಗುತ್ತದೆ ಎಂದು ಕಾಸರಗೋಡಿನ ಖಾಸಗಿ ಮಾಸಪತ್ರಿಕೆಯ ಸಂಪಾದಕ ಯಕ್ಷತಜ್ಞ ಎಂ.ನಾ.ಚಂಬಲ್ತಿಮಾರ್ ಅಭಿಪ್ರಾಯಿಸಿದರು.
ನಗರದ ಹವ್ಯಾಸಿ ಕಲಾವಿದರ ಯಕ್ಷಸಿರಿ ನಾಟ್ಯವೃಂದದ ವತಿಯಿಂದ ಕುವೆಂಪು ಕಲಾಮಂದಿರಲ್ಲಿ ಆಯೋಜಿಸಿದ್ದ ಶ್ರೀದೇವಿ ಮಹಾತ್ಮೆಯ ಮಹಿಷಾಸುರ ಮರ್ಧಿನಿ ಆಖ್ಯಾನಕದ ಯಕ್ಷಗಾನ ಪ್ರದರ್ಶನ ಕಾರ್ಯಕ್ರಮದಲ್ಲಿ ಯಕ್ಷ ಪ್ರಚಾರೋತ್ತಮ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು.
ತೆಂಕುತಿಟ್ಟು ತವರು ಕೇರಳದ ಕುಂಬ್ಳೆಯಲ್ಲಿ ಚಂಡೇಸದ್ದು, ಭೂತ, ತೈಯ್ಯಂ ಊರಿನವರಾದ ತಾವು ಯಕ್ಷಗಾನ ಮಾಡುವುದು ದೊಡ್ಡದಲ್ಲ. ಕರಾವಳಿಯಿಂದ ಘಟ್ಟ ಏರಿ ಕಾಫಿನಾಡಿನಲ್ಲಿ ಸ್ವಯಂ ಪ್ರಚೋದಿತರಾಗಿ ತೆಂಕಿನಾಟದ ಪ್ರದರ್ಶನ ನೀಡಿರುವುದು ವಿಶೇಷ. ಕಲೆಯೊಂದು ತನ್ನ ವ್ಯಾಪ್ತಿ ಪ್ರದೇಶದ ಹೊರಗೆ ಜನರಿಂದ ಪ್ರೀತಿಸಲ್ಪಟ್ಟು ಸ್ವಯಂ ಉತ್ತೇಜಿತರಾಗಿ ಪ್ರದರ್ಶನ ನೀಡಲು ಮುಂದಾಗಿರುವುದು ಯಕ್ಷಕಲೆಯ ವಿಸ್ತರಣೆಯ ಸಂಕೇತ ಎಂದು ವಿವರಿಸಿದರು.
ಶಾಸಕ ಎಚ್.ಡಿ.ತಮ್ಮಯ್ಯ ಮಾತನಾಡಿ, ನಮ್ಮೂರಿನ 9 ಮಹಿಳೆಯರು ಪಾತ್ರಧಾರಿಗಳಾಗಿರುವ ಯಕ್ಷಗಾನ ನಮ್ಮ ಸಂಸ್ಕೃತಿಯ ಪ್ರತೀಕ. ಕಡಲತೀರ ಭಾರ್ಗವ ಶಿವರಾಮಕಾರಂತ ಯಕ್ಷಗಾನ ಇತಿಹಾಸ ಪರಂಪರೆ ದಾಖಲಿಸಿ ವಿಶ್ವಕ್ಕೆ ಪರಿಚಯಿಸಿದ್ದಾರೆ. ಇತ್ತೀಚೆಗೆ ಕಾಂತಾರ ಚಲನಚಿತ್ರದ ಮೂಲಕ ರಿಷಬ್ಶೆಟ್ಟಿ ಕರಾವಳಿಯ ದೈವಗಳು ಹಾಗೂ ಯಕ್ಷಗಾನದ ಬಗ್ಗೆ ಯುವಜನತೆಯಲ್ಲಿ ಭಕ್ತಿ ಮತ್ತು ಗೌರವದ ಭಾವ ಹೆಚ್ಚಿಸಲು ಕಾರಣೀಭೂತರಾಗಿದ್ದಾರೆಂದರು.
ಕಲ್ಕಟ್ಟೆಪುಸ್ತಕದಮನೆಯ ಮಹಾಪೋಷಕ ಡಾ.ಜೆ.ಪಿ.ಕೃಷ್ಣೇಗೌಡ ಮಾತನಾಡಿ, ಕರ್ನಾಟಕ ಸಾಂಪ್ರದಾಯಕ ಕಲಾಪ್ರಕಾರಗಳಲ್ಲಿ ಯಕ್ಷಗಾನಕ್ಕೆ ಮಹತ್ವದ ಸ್ಥಾನವಿದೆ. ಕರಾವಳಿ ಮತ್ತು ಮಲೆನಾಡಿನಲ್ಲಿ ಹೆಚ್ಚು ಜನಪ್ರಿಯವಾಗಿರುವ ಯಕ್ಷಗಾನ ನಮ್ಮೂರಿನಲ್ಲೂ ಇತ್ತೀಚಿನ ದಿನಗಳಲ್ಲಿ ಜನಪ್ರಿಯತೆ ಪಡೆದುಕೊಳ್ಳುತ್ತಿದೆ ಎಂದರು.
ಯಕ್ಷಗಾನ ಬಳಗದ ಎಚ್.ಎಂ.ನಾಗರಾಜರಾವ್ ಕಲ್ಕಟ್ಟೆ, ಯಕ್ಷಸಿರಿಯ ನಿರ್ದೇಶಕ ಪರಮೇಶ್ವರ, ಮಲ್ಲಿಗೆ ಸುಧೀರ್, ಯಕ್ಷಸಿರಿ ನಿರ್ದೇಶಕಿ ರೇಖಾನಾಗರಾಜರಾವ್, ಬಿಂಡಿಗದೇವಿರಮ್ಮ ದೇವಸ್ಥಾನ ಸಮಿತಿ ಅಧ್ಯಕ್ಷ ಕುಲಶೇಖರ, ಸಾಂಸ್ಕೃತಿಕ ಸಂಘದ ಕರ್ಯದರ್ಶಿ ಉಜ್ವಲಪಡುಬಿದ್ರಿ, ಆನಂದಕುಮಾರಶೆಟ್ಟಿ, ರಮೇಶ್, ರಾಕೇಶ್, ಸುಧೀರ್ ಮತ್ತಿತರರಿದ್ದರು.