ವಿಧಾನ ಪರಿಷತ್ ಮಾಜಿ ಸದಸ್ಯ ಡಿ.ಎಸ್.ವೀರಯ್ಯ ಹೇಳಿಕೆ
ಪ್ರತಿನಿಧಿ ವರದಿ ಕೋಲಾರ
ಬಿಜೆಪಿ ಹಾಗೂ ಜೆಡಿಎಸ್ನಿಂದ ಅವಕಾಶ ಮಾಡಿಕೊಟ್ಟರೆ ಲೋಕಸಭೆ ಚುನಾವಣೆಯಲ್ಲಿ ಕೋಲಾರ ಮೀಸಲು ಕ್ಷೇತ್ರದಲ್ಲಿ ಮತ್ತೊಮ್ಮೆ ಸ್ಪರ್ಧಿಸಲು ಸಿದ್ಧ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಡಿ.ಎಸ್.ವೀರಯ್ಯ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಅಥವಾ ಜೆಡಿಎಸ್ನಿಂದ ಈ ಬಾರಿ ನನ್ನನ್ನೂ ಪರಿಗಣಿಸಬೇಕು. ಈ ಕ್ಷೇತ್ರದಲ್ಲಿ ಹಿಂದೆ ಸ್ಪರ್ಧಿಸಿದ ಎರಡೂ ಚುನಾವಣೆಗಳಲ್ಲಿ ನನಗೆ ಉತ್ತಮ ಬೆಂಬಲ ಸಿಕ್ಕಿತ್ತು, ಬಿಜೆಪಿ ಮತ ಬ್ಯಾಂಕ್ ಹೆಚ್ಚಿಸಿದ್ದೇನೆ. ಅದನ್ನು ಎರಡೂ ಪಕ್ಷಗಳು ಪರಿಗಣಿಸಿ, ಅಭ್ಯರ್ಥಿ ಮಾಡಿದರೆ ಗೆದ್ದು ತೋರಿಸುತ್ತೇನೆ ಎಂದರು.
ನನಗೆ ಟಿಕೆಟ್ ಕೊಡಿಸುವ ವಿಚಾರವಾಗಿ ಈಗಾಗಲೇ ದಲಿತ ಒಕ್ಕೂಟದ ಮುಖಂಡರು, ಜೆಡಿಎಸ್ ವರಿಷ್ಠರು ಹಾಗೂ ಮಾಜಿ ಸಿಎಂ ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ್ದಾರೆ. ಪ್ರಯತ್ನ ಮಾಡೋಣ ಎಂಬ ಭರವಸೆಯನ್ನೂ ನೀಡಿದ್ದಾರೆ. ಜಿಲ್ಲೆಯ ಮುಖಂಡರು ಪಕ್ಷಾತೀತವಾಗಿ ನನ್ನನ್ನು ಬೆಂಬಲಿಸಿ ಟಿಕೆಟ್ ಕೊಡಿಸಬೇಕು. ಜಿಲ್ಲೆಯ ಅಭಿವೃದ್ಧಿ ದೃಷ್ಟಿಯಲ್ಲಿ ಮತ್ತೊಮ್ಮೆ ಅವಕಾಶ ಮಾಡಿಕೊಡಬೇಕು ಎಂದು ಹೇಳಿದರು.
ಕೋಲಾರ ಕ್ಷೇತ್ರದ ಟಿಕೆಟ್ ಯಾರಿಗೆ ಎಂಬುದು ಇನ್ನೂ ತೀರ್ಮಾನವಾಗಿಲ್ಲ. ಒಂದೊಮ್ಮೆ ಬಿಜೆಪಿಗೆ ಕ್ಷೇತ್ರ ಲಭಿಸಿದರೆ ನನಗೆ ಟಿಕೆಟ್ ಕೊಡಲಿ, ಜೆಡಿಎಸ್ಗೆ ಲಭಿಸಿದರೂ ನನಗೆ ಟಿಕೆಟ್ ಕೊಡಲಿ ಎಂದು ಮನವಿ ಮಾಡುತ್ತೇನೆ. ಹಾಲಿ ಸಂಸದ ಮುನಿಸ್ವಾಮಿ ವಿರುದ್ಧ ನಾನು ಪತ್ರಿಕಾಗೋಷ್ಠಿ ಮಾಡುತ್ತಿಲ್ಲ. ಅವರಿಗೆ ಟಿಕೆಟ್ ಕೊಟ್ಟರೂ ಸಂತೋಷ. ಅಭ್ಯರ್ಥಿ ಬದಲಾವಣೆ ಮಾಡಬೇಕೆನಿಸಿದರೆ ಅಥವಾ ಜೆಡಿಎಸ್ಗೆ ಕ್ಷೇತ್ರ ಬಿಟ್ಟುಕೊಡಬೇಕೆನಿಸಿದರೆ ನಾನು ಸ್ಪರ್ಧಿಸಲು ಸಿದ್ಧ. ಟಿಕೆಟ್ ವಿಚಾರವಾಗಿ ನಾನು ಈವರೆಗೆ ಹೈಕಮಾಂಡ್ ಸಂಪರ್ಕಿಸಿಲ್ಲ. ತಡವಾಗಿ ಪ್ರಯತ್ನ ಮಾಡುತ್ತಿದ್ದೇನೆ ಎಂದು ತಿಳಿಸಿದರು.
ಯಡಿಯೂರಪ್ಪ ಉಪಮುಖ್ಯಮಂತ್ರಿ ಆಗಿದ್ದಾಗ ಯರಗೋಳ್ ಜಲಾಶಯ ಯೋಜನೆ ನಿರ್ಮಾಣ ಸಂಬಂಧ 180 ಕೋಟಿ ರೂ. ಅನುಮೋದನೆ ಮಾಡಿಸಿಕೊಂಡು ಬಂದಿದ್ದೆ. ಬಿಜಿಎಂಎಲ್ ಕಾರ್ಖಾನೆ ಮುಚ್ಚಿದ ಮೇಲೆ ಆಸ್ಪತ್ರೆಯನ್ನೂ ಮುಚ್ಚಿದ್ದರು. ಆಸ್ಪತ್ರೆ ತೆರೆದು ಕಾರ್ಮಿಕರಿಗೆ ಚಿಕಿತ್ಸೆ ಕೊಡಿಸಬೇಕೆಂದು ಒತ್ತಾಯಿಸಿದ್ದೆ. ಹಳ್ಳಿಗಳಿಗೆ ಸೋಲಾರ್ ಬಲ್ಬ್ ಹಾಕಿಸಿದ್ದೇನೆ. 20 ವರ್ಷ ಕೋಲಾರ ಜಿಲ್ಲೆಯಲ್ಲಿ ಉತ್ತಮ ಸಂಬಂಧ ಇಟ್ಟುಕೊಂಡಿದ್ದರೂ ಕಳೆದ ಬಾರಿ ನನಗೆ ಟಿಕೆಟ್ ಸಿಗಲಿಲ್ಲ ಎಂದರು.
Leave a comment