ಕೋಲಾರ: ನಗರದ ಹೊರವಲಯದ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ರೈತರು, ಮಂಡಿ ಮಾಲೀಕರು ಹಾಗೂ ದಲ್ಲಾಳಿಗಳ ಯಾವುದೇ ಕೆಲಸಗಳು ಆಗಬೇಕಾದರೂ ಎಪಿಎಂಸಿ ಕಾರ್ಯದರ್ಶಿ ಎನ್ ವಿಜಯಲಕ್ಷ್ಮಿ ಅವರಿಗೆ ಲಂಚ ಕೊಟ್ಟರೆ ಮಾತ್ರ ಸಾಧ್ಯವಾಗುತ್ತದೆ ಎಂದು ಜೆ.ಎನ್.ಜಿ ತರಕಾರಿ ದಲ್ಲಾಳರ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳು ಬುಧವಾರ ಚುನಾವಣೆಯ ತಹಸೀಲ್ದಾರ್ ನಾಗವೇಣಿ ಮೂಲಕ ಜಿಲ್ಲಾಧಿಕಾರಿಗೆ ದೂರು ಸಲ್ಲಿಸಿದರು.
ಈ ಸಂದರ್ಭದಲ್ಲಿ ಸಂಘದ ಮುಖಂಡ ಎಪಿಎಂಸಿ ಪುಟ್ಟುರಾಜು ಮಾತನಾಡಿ, ಮಾರುಕಟ್ಟೆ ವಿಚಾರವಾಗಿ ಯಾವುದಾದರೂ ಕೆಲಸಕ್ಕೆ ಎಪಿಎಂಸಿ ಕಛೇರಿಗೆ ಹೋದರೆ ಅಧಿಕಾರಿಗಳ ನೆಪದಲ್ಲಿ ಕಿರುಕುಳ ನೀಡಿ ಸರಕಾರ ನಿಗದಿ ಪಡಿಸಿದ ದರಕ್ಕಿಂತ ಹೆಚ್ಚಿನ ಹಣವನ್ನು ಅಧಿಕಾರಿಗಳಿಗೆ ನೀಡಬೇಕು ಎಂದು ಲಂಚವನ್ನು ನೇರವಾಗಿ ಕೇಳುತ್ತಾರೆ. ನಮ್ಮಲ್ಲಿನ ದಲ್ಲಾಳರ ಪರವಾನಗಿ ಪಡೆಯಲು 20 ಸಾವಿರದಿಂದ 40 ಸಾವಿರದಷ್ಟು ಹಣವನ ವ್ಯಕ್ತಿಗೆ ಅನುಗುಣವಾಗಿ ಲಂಚ ಕೊಡಬೇಕು ಕೊಡದೇ ಹೋದರೆ ಯಾವುದೇ ಕೆಲಸವು ಮಾಡಿಕೊಡುವುದಿಲ್ಲ ಎಂದು ದೂರಿದರು.
ಕೆ.ಎನ್.ಜಿ ದಲ್ಲಾಳರ ಕ್ಷೇಮಾಭಿವೃದ್ಧಿ ಸಂಘದ ಪ್ರಧಾನ ಕಾರ್ಯದರ್ಶಿ ವೆಂಕಟೇಶ್ ಗೌಡ ಮಾತನಾಡಿ ಪರವಾನಿಗೆ ಮತ್ತು ನವೀಕರಣಕ್ಕೆ ಮಾರುಕಟ್ಟೆ ಶುಲ್ಕ ಬಿಟ್ಟು ಹೆಚ್ಚಿನ ಹಣವನ್ನು ವಸೂಲಿ ಮಾಡುವುದು ಇವರ ವೃತ್ತಯಾಗಿದೆ ಕೊಡದೆ ಹೋದರೆ ಒಂದಲ್ಲ ಒಂದು ರೀತಿಯಲ್ಲಿ ಅಧಿಕಾರಿಗಳು ಟಾರ್ಚರ್ ಮಾಡತ್ತಾರೆ ಎಪಿಎಂಸಿ ಕಛೇರಿಯಲ್ಲಿ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲು ಕಾರ್ಯದರ್ಶಿ ವಿಜಯಲಕ್ಷ್ಮಿ ವಿರುದ್ಧ ತನಿಖೆ ನಡೆಸಿ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು ಜೊತೆಗೆ ನಮಗೆ ನಿಷ್ಠಾವಂತ ಅಧಿಕಾರಿಯನ್ನು ಎಪಿಎಂಸಿಗೆ ನೇಮಕ ಮಾಡಬೇಕು ಎಂದು ಒತ್ತಾಯಿಸಿದರು.
ಜೆ.ಎನ್.ಜಿ ತರಕಾರಿ ದಲ್ಲಾಳರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಅಂಬರೀಷ್,ಗೌರವ ಅಧ್ಯಕ್ಷ ಎಂ.ಎನ್.ಆರ್ ಮಂಜುನಾಥ್, ಸತೀಶ್ ಪದಾಧಿಕಾರಿಗಳಾದ ಎಸ್.ಎಲ್.ಎನ್ ವೆಂಕಟೇಶ್, ಮುನಿರಾಜು, ಗೋಪಾಲರೆಡ್ಡಿ, ಶ್ರೀನಿವಾಸ್, ರೆಡ್ಡೆಪ್ಪ, ವೆಂಕಟರಮಣ, ಕೇಶವ, ವೆಂಕಟಪತಿ, ನಾಗರಾಜ್ ಮುಂತಾದವರು ಇದ್ದರು.