ನವದೆಹಲಿ: ಈ ಬಾರಿಯ ಟಿ20 ವಿಶ್ವಕಪ್ ಟೂರ್ನಿಯನ್ನು ಗೆದ್ದ ಭಾರತ ಕ್ರಿಕೆಟ್ ತಂಡಕ್ಕೆ ಪ್ರಧಾನಿ ನರೇಂದ್ರ ಮೋದಿ ಅಭಿನಂದನೆ ಮಾಡಿದ್ದಾರೆ. ತಂಡಕ್ಕೆ ದೂರವಾಣಿ ಕರೆ ಮಾಡಿ ಮಾತನಾಡಿದ ಅವರು ತಂಡದ ಎಲ್ಲಾ ಸದಸ್ಯರಿಗೂ ವಿಶ್ ಮಾಡಿದ್ದಾರೆ. ಇಡೀ ಟೂರ್ನಿಯಲ್ಲಿ ಕ್ಯಾಪ್ಟನ್ಸಿ ನಿರ್ವಹಿಸಿದ ರೀತಿಗೆ ರೋಹಿತ್ ಶರ್ಮಾ ಅವರನ್ನು ಪ್ರಧಾನಿಗಳು ಶ್ಲಾಘಿಸಿದ್ದಾರೆ. ಫೈನಲ್ನಲ್ಲಿ ಅಮೋಘ ಬ್ಯಾಟಿಂಗ್ ಪ್ರದರ್ಶನ ತೋರಿ ಪಂದ್ಯ ಶ್ರೇಷ್ಠ ಎನಿಸಿದ ವಿರಾಟ್ ಕೊಹ್ಲಿ ಹಾಗೂ ಭಾರತೀಯ ಕ್ರಿಕೆಟ್ಗೆ ಅವರ ಕೊಡುಗೆಯನ್ನು ನರೇಂದ್ರ ಮೋದಿ ಮೆಚ್ಚಿಕೊಂಡಿದ್ದಾರೆ.
ಫೈನಲ್ ಮ್ಯಾಚ್ನ ಫೈನಲ್ ಓವರ್ನಲ್ಲಿ ಮ್ಯಾಚ್ ವಿನ್ನಿಂಗ್ ಬೌಲಿಂಗ್ ಮಾಡಿದ ಹಾರ್ದಿಕ್ ಪಾಂಡ್ಯ, ಪಂದ್ಯದ ಪ್ರಮುಖ ಹಂತದಲ್ಲಿ ಬೌಂಡರಿ ಲೈನ್ನಲ್ಲಿ ಬಹಳ ಅದ್ಭುತ ಕ್ಯಾಚ್ ಹಿಡಿದ ಸೂರ್ಯಕುಮಾರ್ ಯಾದವ್ ಅವರನ್ನೂ ಮೋದಿ ಅಭಿನಂದಿಸಿದ್ದಾರೆ. ಸೋಲಿನ ಸುಳಿಯಲ್ಲಿದ್ದಾಗ ತಮ್ಮ ಎರಡನೇ ಸ್ಪೆಲ್ನಲ್ಲಿ ಭಾರತಕ್ಕೆ ಗೆಲುವಿನ ಆಸೆ ಚಿಗುರಿಸಿದ ಫಾಸ್ಟ್ ಬೌಲರ್ ಜಸ್ಪ್ರೀತ್ ಬುಮ್ರಾ ಅವರನ್ನೂ ಪ್ರಧಾನಿ ಮೆಚ್ಚಿಕೊಂಡಿದ್ದಾರೆ. ತಂಡದ ಕೋಚ್ ರಾಹುಲ್ ದ್ರಾವಿಡ್ ಅವರ ಪಾತ್ರವನ್ನೂ ಅವರು ಗುರುತಿಸಿದ್ದಾರೆ.
ತಮ್ಮ ಎಕ್ಸ್ ಪೋಸ್ಟ್ನಲ್ಲಿ ವಿಡಿಯೋ ಸಂದೇಶದ ಮೂಲಕವೂ ಪ್ರಧಾನಿ ನರೇಂದ್ರ ಮೋದಿ ಟೀಮ್ ಇಂಡಿಯಾವನ್ನು ಅಭಿನಂದಿಸಿದ್ದಾರೆ. ಆಟದ ಮೈದಾನದಲ್ಲಿ ನೀವು ವರ್ಲ್ಡ್ ಕಪ್ ಗೆದ್ದಿರಿ. ಅದಕ್ಕಿಂತ ಹೆಚ್ಚಾಗಿ ಕೋಟಿ ಕೋಟಿ ಜನರ ಹೃದಯ ಗೆದ್ದಿದ್ದೀರಿ. ಇಡೀ ಟೂರ್ನಿಯಲ್ಲಿ ತಂಡ ಒಂದೂ ಪಂದ್ಯ ಸೋಲಲಿಲ್ಲ. ಇದು ಸಾಮಾನ್ಯ ವಿಷಯವಲ್ಲ ಎಂದು ತಮ್ಮ ವಿಡಿಯೋ ಮೆಸೇಜ್ನಲ್ಲಿ ಅವರು ತಿಳಿಸಿದ್ದಾರೆ.