- ಮಾಜಿ ಸಚಿವ ಸಾರಾ ಮಹೇಶ್ ಹೇಳಿಕೆ
ಪ್ರತಿನಿಧಿ ವರದಿ ಹೊಸೂರು
ಹಿಡಿತವಿಲ್ಲದೆ ಮಾತಾಡುತ್ತಿರುವ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಗೆ ಮಂಡ್ಯ ಕ್ಷೇತ್ರದಲ್ಲಿ ಎಚ್ .ಡಿ. ಕುಮಾರಸ್ವಾಮಿ ಅವರನ್ನು ಅತಿ ಹೆಚ್ಚು ಮತಗಳ ಅಂತರದಿಂದ ಗೆಲ್ಲಿಸುವ ಮೂಲಕ ಉತ್ತರ ನೀಡುವಂತೆ ಮಾಜಿ ಸಚಿವ ಸಾರಾ ಮಹೇಶ್ ಮತದಾರರಲ್ಲಿ ಮನವಿ ಮಾಡಿದರು.
ಸಾಲಿಗ್ರಾಮ ತಾಲೂಕಿನ ಮಿರ್ಲೆ ಗ್ರಾಮದಲ್ಲಿ ಚುನಾವಣಾ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಕಳೆದ ಬಾರಿ 40 ಸ್ಥಾನಗಳನ್ನು ಪಡೆಯುವಲ್ಲಿ ತೃಪ್ತಿಪಟ್ಟಿದ್ದ ಕಾಂಗ್ರೆಸ್ ಪಕ್ಷ ಈ ಬಾರಿ ದೇಶದಲ್ಲಿ 200 ಸ್ಥಾನಗಳಿಗೆ ಸ್ಪರ್ಧಿಸಿದ್ದು, ಅದರಲ್ಲಿ 50 ಸ್ಥಾನಗಳಲ್ಲಿ ಮಾತ್ರ ಗೆಲುವು ಸಾಧಿಸಬಹುದು. ಹೀಗಿರುವಾಗ ಕೇಂದ್ರದಲ್ಲಿ ಸರ್ಕಾರ ರಚಿಸಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.
ಸೂರ್ಯ, ಚಂದ್ರರಿರುವುದೆಷ್ಟು ಸತ್ಯವೋ ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಬರುವುದು ಮತ್ತು ನರೇಂದ್ರ ಮೋದಿ ಮತ್ತೆ ಪ್ರಧಾನಮಂತ್ರಿಯಾಗುವುದು, ಮಂಡ್ಯ ಕ್ಷೇತ್ರದಲ್ಲಿ ಎಚ್. ಡಿ. ಕುಮಾರಸ್ವಾಮಿ ಗೆದ್ದು ಕೇಂದ್ರದಲ್ಲಿ ಕೃಷಿ ಸಚಿವರಾಗುವುದು ಅಷ್ಟೇ ಸತ್ಯ ಎಂದು ತಿಳಿಸಿದರು.
ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಅವರ ಸರ್ಕಾರ ರಾಜ್ಯದಲ್ಲಿ ಸಾಲದ ಹೊರೆಯನ್ನೇ ಹೊರಿಸಿರುವುದಲ್ಲದೆ, ಅಧಿಕಾರದ ಉಳಿವಿಗಾಗಿ ಸುಳ್ಳು ಭರವಸೆಯನ್ನು ನೀಡುತ್ತಿದ್ದಾರೆ ಎಂದರು.
25 ಗ್ಯಾರಂಟಿಗಳ ಭರವಸೆಯ ಕಾರ್ಡನ್ನು ನಿಮ್ಮ ಮನೆಗಳಿಗೆ ನೀಡಿ ಮತದಾರರಿಗೆ ಮಂಕು ಬೂದಿ ಎರಚಲಿದ್ದಾರೆ. ಆದ್ದರಿಂದ ಮತದಾರರು ಕೆ .ಆರ್. ನಗರ ಮತ್ತು ಸಾಲಿಗ್ರಾಮ ತಾಲೂಕುಗಳಲ್ಲಿ ಮಾಜಿ ಪ್ರಧಾನಮಂತ್ರಿ ಎಚ್. ಡಿ. ದೇವೇಗೌಡರು, ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಮತ್ತು ಮಾಜಿ ಸಚಿವ ಎಚ್. ಡಿ. ರೇವಣ್ಣ ಮಾಡಿರುವ ಅಭಿವೃದ್ಧಿ ಪೂರ ಕಾರ್ಯಕ್ರಮಗಳನ್ನು ಒಂದು ಬಾರಿ ನೆನೆಸಿಕೊಂಡು ಮತ ನೀಡುವಂತೆ ಮನವಿ ಮಾಡಿದರು.
2013 ರಲ್ಲಿ ಬರಗಾಲ ಬಂದಿದ್ದರೂ ಜಿಲ್ಲಾಧಿಕಾರಿ ಕಚೇರಿಗಳ ಮುಂದೆ ಪ್ರತಿಭಟನೆ ಮಾಡಿ ಎಡ ಮತ್ತು ಬಲದಂಡೆ ನಾಲೆಗಳಿಗೆ ವಾರಕ್ಕೊಂದು ಬಾರಿ ನೀರು ಹರಿಸಿರುವುದನ್ನು ನೆನಪಿಸಿದ ಮಾಜಿ ಸಚಿವರು, ಈ ಬಾರಿ ಮಿರ್ಲೆ ಶ್ರೇಣಿ ಮತ್ತು ಅಕ್ಕಪಕ್ಕದ ಗ್ರಾಮಗಳ ನಾಲೆಗಳ ಗದ್ದೆಗೆ ಹುರಳಿಯನ್ನೂ ಬಿತ್ತಲಾಗದಂತಹ ಸ್ಥಿತಿ ನಿರ್ಮಾಣವಾಗಿದೆ. ಇಂಥ ಸ್ಥಿತಿ ನಿಮಗೆ ಬೇಕಾಗಿತ್ತಾ ಎಂದು ವ್ಯಂಗ್ಯವಾಡಿದರು.
ಕಳೆದ ಬಾರಿ ವಿಧಾನಸಭಾ ಚುನಾವಣೆಯಲ್ಲಿ ನನ್ನ ಮೇಲಿನ ಬೇಸರಕ್ಕೆ ನನ್ನ ವಿರುದ್ಧ ಮತ ಚಲಾಯಿಸಿದ್ದೀರಿ. ಆದರೆ ಆ ರೀತಿ ಮಾಡದೆ ಈ ಬಾರಿ ಕೆ. ಆರ್. ನಗರ ವಿಧಾನಸಭಾ ಕ್ಷೇತ್ರದಲ್ಲಿ ಐವತ್ತು ಸಾವಿರಕ್ಕೂ ಹೆಚ್ಚು ಮತಗಳ ಲೀಡ್ ಕೊಡಿಸುವ ಮೂಲಕ ನನ್ನ ನೋವನ್ನು ಮರೆಯುವಂತೆ ಮಾಡುವುದರ ಜತೆಗೆ, ಈ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಲು ಮಂಡ್ಯ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಎಚ್. ಡಿ. ಕುಮಾರಸ್ವಾಮಿ ಅವರನ್ನು ಗೆಲ್ಲಿಸುವಂತೆ ಮನವಿ ಮಾಡಿದರು.
ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಹೊಸಳ್ಳಿ ವೆಂಕಟೇಶ್, ಸಾಲಿಗ್ರಾಮ ತಾಲೂಕು ಜೆಡಿಎಸ್ ಅಧ್ಯಕ್ಷ ಮೆಡಿಕಲ್ ರಾಜಣ್ಣ, ಗ್ರಾಮ ಪಂಚಾಯಿತಿ ಅಧ್ಯಕ್ಷ ಬಾಲು, ವಿಎಸ್ಎಸ್ ಅಧ್ಯಕ್ಷ ಭಾಸ್ಕರ್, ಮಾಜಿ ತಾಲೂಕ್ ಪಂಚಾಯಿತಿ ಸದಸ್ಯ ಶೋಭಾ, ಕೋಟೆಗೌಡ ಹುಣಸಮ್ಮ, ದೇವಸ್ಥಾನದ ಧರ್ಮದರ್ಶಿ ಲೋಕೇಶ್, ವಿಎಸ್ಎಸ್ ಮಾಜಿ ಅಧ್ಯಕ್ಷ ಅರವಿಂದ, ನಾಗೇಶ್, ರಾಧಾಕೃಷ್ಣ ತುಕಾರಾಂ ಹರೀಶ್, ಮಂಜುನಾಥ್ ಸೇರಿದಂತೆ ಇನ್ನಿತರರು ಹಾಜರಿದ್ದರು.
ಫೋಟೋ.01:- ಮಾಜಿ ಸಚಿವ ಸಾ ರಾ ಮಹೇಶ್ ಮಿರ್ಲೆ ಗ್ರಾಮದಲ್ಲಿ ಚುನಾವಣಾ ಪ್ರಚಾರ ನಡೆಸುತ್ತಿರುವುದು.