ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಬಣ್ಣನೆ । ಕಾಂಗ್ರೆಸ್ ಬೃಹತ್ ಕಾರ್ಯಕರ್ತರ ಸಭೆ
ಪ್ರತಿನಿಧಿ ವರದಿ ಕೆ.ಆರ್.ನಗರ
ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟದ್ದು, ಪ್ರಾಣತ್ಯಾಗ ಮಾಡಿ ದೇಶಕ್ಕೆ ಭದ್ರ ಬುನಾದಿ ಹಾಕಿಕೊಟ್ಟದ್ದು ಮತ್ತು ಬಡವರು, ರೈತರು, ಕಾರ್ಮಿಕರು, ಮಹಿಳೆಯರ ಪರವಾಗಿ ಯೋಜನೆಗಳನ್ನು ರೂಪಿಸಿ ಜಾರಿಗೆ ತಂದದ್ದು ಕಾಂಗ್ರೆಸ್ ಹಾಗೂ ಪಕ್ಷದ ನಾಯಕರು ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಮನವಿ ಹೇಳಿದರು.
ಪಟ್ಟಣದ ಡಾ.ರಾಜಕುಮಾರ್ ಬಾನಂಗಳದಲ್ಲಿ ಬುಧವಾರ ಆಯೋಜಿಸಲಾಗಿದ್ದ ಕಾಂಗ್ರೆಸ್ ಪಕ್ಷದ ಕಾರ್ಯಕ್ರಮದಲ್ಲಿ ಮಾತನಾಡಿದರು.
ನಮ್ಮದು ಇತಿಹಾಸ ಹೊಂದಿರುವ ಪಕ್ಷ, ಪ್ರತಿಯೊಬ್ಬರ ಖಾತೆಗೆ 15 ಲಕ್ಷ ಹಣ ಹಾಕುತ್ತೇವೆ. 2 ಲಕ್ಷ ಕೋಟಿ ಉದ್ಯೋಗ ಕೊಡುತ್ತೇವೆ ಎಂಬ ಸುಳ್ಳು ಭರವಸೆಗಳನ್ನು ನೀಡಿ ಅಧಿಕಾರಕ್ಕೆ ಬಂದಿರುವ ಬಿಜೆಪಿ ಸರ್ಕಾರಕ್ಕೆ ಇತಿಹಾಸವಿಲ್ಲ ಎಂದು ಟೀಕಿಸಿದರು.
ಕಾಂಗ್ರೆಸ್ ಪಕ್ಷ ಈ ದೇಶಕ್ಕೆ ದೂರವಾಣಿ ಸಂಪರ್ಕ, ಆಹಾರ ಭದ್ರತೆ ಕಾಯ್ದೆಗಳಂತಹ ಬಡವರ ಪರವಾದ ಹತ್ತು ಹಲವು ಯೋಜನೆಗಳನ್ನು ತಂದಿದೆ. ಚಿಕ್ಕಂದಿನಿಂದಲೇ ಅಜ್ಜಿ, ತಂದೆಯವರನ್ನು ಕಳೆದುಕೊಂಡ ನಮ್ಮ ನಾಯಕ ರಾಹುಲ್ ಗಾಂಧಿ ಜೋಡೋ ಯಾತ್ರೆ ಮೂಲಕ ದೇಶದಾದ್ಯಾಂತ ಬಡವರ ಬಳಿಗೆ ತೆರಳಿ ಅವರ ಸಮಸ್ಯೆಗಳನ್ನು ಆಲಿಸುತ್ತಿದ್ದಾರೆ ಎಂದು ಪಕ್ಷದ ಕಾರ್ಯಗಳನ್ನು ತಿಳಿಸಿದರು.
ಪ್ರಧಾನಿ ಆಗುವ ಅವಕಾಶ ಇದ್ದರೂ ಮನಮೋಹನ ಸಿಂಗ್ ಅವರನ್ನು 10 ವರ್ಷಗಳ ಕಾಲ ಪ್ರಧಾನಮಂತ್ರಿ ಮಾಡಿದವರು ನಮ್ಮ ಪಕ್ಷದ ಅಧಿನಾಯಕಿ ಸೋನಿಯಾ ಗಾಂಧಿ. ಅಲ್ಲದೇ ಈಗ ಪಕ್ಷದ ರಾಷ್ಟ್ರಾಧ್ಯಕ್ಷರನ್ನಾಗಿ ನಮ್ಮ ರಾಜ್ಯದವರಾದ ಮಲ್ಲಿಕಾರ್ಜುನ ಖರ್ಗೆಯವರನ್ನು ಮಾಡಿದ್ದಾರೆ. ಇದನ್ನು ನಾವು ಮನದಟ್ಟು ಮಾಡಿಕೊಳ್ಳಬೇಕಾಗಿದೆ ಎಂದರು.
ಆರ್ಎಸ್ಎಸ್ ಮತ್ತು ಮೋದಿಯವರ ಬಗ್ಗೆ ಜೆಡಿಎಸ್ನವರು ಮಾತನಾಡಿ ವಿರೋಧಿಸಿದರು. ಆದರೇ ಈಗ ಅವರೊಂದಿಗೆ ಕೈಜೋಡಿಸಿಕೊಂಡು ಚುನಾವಣೆಗೆ ನಿಂತಿದ್ದಾರೆ. ಕೇವಲ 37 ಸೀಟು ಗೆದ್ದಿದ್ದ ನಿಮಗೆ ಅಧಿಕಾರ ಕೊಟ್ಟಿದ್ದು ಹಾಗೂ ದೇವೆಗೌಡರನ್ನ ಪ್ರಧಾನ ಮಂತ್ರಿ ಮಾಡಿದ್ದು ಕಾಂಗ್ರೆಸ್. ಎಲ್ಲ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಜನಪರ ಕೆಲಸ ಮಾಡಲಾಗದೇ ನೀವು ಅಧಿಕಾರವನ್ನು ಕಳೆದುಕೊಂಡು ನಮ್ಮ ಪಕ್ಷದವರನ್ನು ದೂರುವುದು ಎಷ್ಟು ಸರಿ ಎಂದರು.
ಪದೇ ಪದೇ ಕ್ಷೇತ್ರಗಳನ್ನು ಬದಲಾಯಿಸಿ ಉಪಚುನಾವಣೆಗಳಿಗೆ ಕಾರಣರಾಗುತ್ತಿರುವ ಹೆಚ್ಡಿಕೆ ಅವರನ್ನು ಮತದಾರರು ಈ ಕ್ಷೇತ್ರಕ್ಕೆ ನಿಮ್ಮ ಕೊಡುಗೆ ಏನು ಎಂದು ಪ್ರಶ್ನಿಸಿ, ಸರಳ ವ್ಯಕ್ತಿತ್ವದ ಸ್ಟಾರ್ ಚಂದ್ರು ಅವರಿಗೆ ಮತ ನೀಡಿ ಲೋಕಸಭೆಗೆ ಆಯ್ಕೆ ಮಾಡಿ ಜೂನ್ ಕೊನೆಯ ವಾರದಲ್ಲಿ ಅಧಿಕಾರಿಗಳನ್ನು ಸ್ಥಳಕ್ಕೆ ಕರೆತಂದು ಚುಂಚನಕಟ್ಟೆ ಶ್ರೀರಾಮ ಸಕ್ಕರೆ ಕಾರ್ಖಾನೆಯ ಸಮಸ್ಯೆ ಬಗೆಹರಿಸುವ ಜೊತೆಗೆ ಪ್ರತಿ ತಿಂಗಳ ಕೊನೆಯ ಶನಿವಾರ ಶಾಸಕರು, ಸಂಸದರೊಂದಿಗೆ ಎಲ್ಲಾ ಅಧಿಕಾರಿಗಳ ಸಭೆ ಮಾಡಿ ನಿಮ್ಮ ಕೆಲಸ ಮಾಡುತ್ತೇವೆ ಎಂದು ಭರವಸೆ ನೀಡಿದರು.
ಶಾಸಕ ಡಿ.ರವಿಶಂಕರ್ ಮಾತನಾಡಿ, ಪಟ್ಟಣಕ್ಕೆ ಅಮೃತ ಯೋಜನೆಯಡಿ 30 ಕೋಟಿ, ಒಳಚರಂಡಿಗೆ 25 ಕೋಟಿ, ಕಪ್ಪಡಿ ಏತ ನೀರಾವರಿಗೆ 50 ಕೋಟಿ, ಸೇರಿದಂತೆ ಉದ್ಯಾನಗಳ ಅಭಿವೃದ್ಧಿ, ಕ್ರೀಡಾಂಗಣ ಅಭಿವೃದ್ಧಿಗೆ ಸೇರಿದಂತೆ ಹತ್ತಾರು ಅಭಿವೃದ್ಧಿ ಕೆಲಸಗಳಿಗೆ ವಿವಿಧ ಯೋಜನೆಯಡಿಯಲ್ಲಿ 200 ಕೋಟಿಯಷ್ಟು ಅನುಧಾನ ತರಲಾಗಿದ್ದು ಸಮಗ್ರ ಕ್ಷೇತ್ರವನ್ನು ಅಭಿವೃದ್ಧಿ ಮಾಡಲಾಗುವುದು. ಕ್ಷೇತ್ರಕ್ಕೆ ಮತ್ತಷ್ಟು ಅಭಿವೃದ್ಧಿ ಮಾಡಲು ಹಾಗೂ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಅವರ ಕೈ ಬಲ ಪಡಿಸಲು ನಮ್ಮ ಮಂಡ್ಯ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾದ ವೆಂಕಟ ರಮಣೇಗೌಡ ಸ್ಟಾರ್ ಚಂದ್ರು ವಿಧಾನಸಭೆ ಚುನಾವಣೆಯಲ್ಲಿ ನನಗೆ ನೀಡಿದಂತೆ ಅತ್ಯಧಿಕ ಬಹುಮತ ನೀಡಿ ಗೆಲ್ಲಿಸಬೇಕೆಂದು ಕೋರಿದರು.
ಈ ಸಂದರ್ಭದಲ್ಲಿ ಶಾಸಕ ದಿನೇಶ್ ಗೂಳಿಗೌಡ, ಮಾಜಿ ಶಾಸಕ ಚಂದ್ರು, ಜಿಪಂ ಮಾಜಿ ಸದಸ್ಯರಾದ ಸಿದ್ದಪ್ಪ, ರಾಜಯ್ಯ, ಶಿವರಾಮು, ಜಿ.ಆರ್.ರಾಮೇಗೌಡ, ಪುರಸಭಾ ಸದಸ್ಯರಾದ ಕೋಳಿಪ್ರಕಾಶ್, ಕೆ.ಜಿ.ಸುಬ್ರಮಣ್ಯ, ನಟರಾಜು, ಮಿಕ್ಸರ್ಶಂಕರ್, ಶಿವುನಾಯಕ್, ಜಾವೀದ್ಪಾಷಾ, ಸೈಯದ್ ಸಿದ್ದೀಕ್, ತಾಪಂ ಮಾಜಿ ಅಧ್ಯಕ್ಷ ಹಾಡ್ಯಮಹದೇವಸ್ವಾಮಿ, ಮಂಜುನಾಥ್, ಮಾಜಿ ಸದಸ್ಯರಾದ ವೀಣಾ ದಿಲೀಪ್, ಕೆ.ಪಿ.ಯೋಗೇಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಎಂ.ಎಸ್.ಮಹದೇವ್, ಉದಯಶಂಕರ್, ವಕ್ತರಾ ಸೈಯದ್ ಜಾಬೀರ್, ನಗರಾದ್ಯಕ್ಷ ಎಂ.ಜೆ.ರಮೇಶ್, ಮುಖಂಡರಾದ ಜಯಂತ್, ಸಂದೇಶ್, ಎಂ.ಎಸ್.ನಂಜುಂಡಸ್ವಾಮಿ, ರವಿಪೂಜಾರಿ, ಎಂ.ಎ.ನಾಗೇಂದ್ರ ಇನ್ನಿತರರು ಹಾಜರಿದ್ದರು.
ನುಡಿದಂತೆ ನಡೆದ ರಾಜ್ಯ ಸರ್ಕಾರ: ಸಿದ್ದರಾಮಯ್ಯ ಅವರ ನೇತೃತ್ವದ ನಮ್ಮ ಸರ್ಕಾರ ಚುನಾವಣೆ ಪೂರ್ವದಲ್ಲಿ ಕೊಟ್ಟ 5 ಗ್ಯಾರಂಟಿ ಭರವಸೆಗಳನ್ನು ಈಡೇರಿಸಿ ನುಡಿದಂತೆ ನಡೆದಿದೆ. ಮಹಿಳೆಯರಿಗೆ 5 ಲಕ್ಷ ರೂ. ಬಡ್ಡಿ ಇಲ್ಲದ ಸಾಲ, ಹಾಲಿಗೆ 5 ರೂ. ಪ್ರೋತ್ಸಾಹಧನ, 1500 ಕೋಟಿ ರೂಪಾಯಿಗಳನ್ನು ರೈತರಿಗೆ ವಿಮೆ. 35 ಲಕ್ಷ ರೈತರಿಗೆ ಬರ ಪರಿಹಾರ ನೀಡಿದ್ದೇವೆ .ಆದರೆ ಕೇಂದ್ರ ಸರ್ಕಾರ ಬರ ಪರಿಹಾರ ನೀಡದೆ ರಾಜ್ಯದ ಜನರಿಗೆ ತೊಂದರೆ ನೀಡಿದೆ. ಬರಗಾಲ ಪರಿಸ್ಥಿತಿಯಲ್ಲೂ ರಾಜ್ಯದ ಜನ ನೆಮ್ಮದಿಯಿಂದ ಬದುಕುತ್ತಿರುವುದು ನಮ್ಮ ಸರ್ಕಾರ ಗ್ಯಾರಂಟಿ ಯೋಜನೆಗಳಿಂದ ಈ ಎಲ್ಲ ಯೋಜನೆಗಳು 5 ವರ್ಷಗಳವರೆಗೂ ಮುಂದವರಿಯುತ್ತವೆ ಎಂದು ಚೆಲುವರಾಯಸ್ವಾಮಿ ಭರವಸೆ ನೀಡಿದರು.
ಪ್ರತಿ ಲೋಕಸಭಾ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರ ಇಡೀ ದೇಶದಲ್ಲೇ ಸದ್ದು ಮಾಡುತ್ತದೆ. ನಮ್ಮ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಬೇರೆ ಪಕ್ಷದವರ ವದಂತಿಗಳಿಗೆ ಕಿವಿ ಕೊಡದೆ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳು ಮತ್ತು ಅಭಿವೃದ್ಧಿ ಕೆಲಸ ಕಾರ್ಯಗಳನ್ನು ಮತದಾರರಿಗೆ ಮನವರಿಕೆ ಮಾಡಿಕೊಡುವ ಮೂಲಕ ಮತಕೇಳಿ.
ರವಿಶಂಕರ್, ಶಾಸಕ ಕೆಆರ್ ನಗರ
ಕಾರ್ಯಕ್ರಮದಲ್ಲಿದ್ದವರು: ಕಾರ್ಯಕ್ರಮವನ್ನು ಕುರಿತು ಶಾಸಕ ಪಿ.ಎಂ.ನರೇಂದ್ರಸ್ವಾಮಿ, ವಿಧಾನ ಪರಿಷತ್ ಸದಸ್ಯ ಮಧು ಜಿ.ಮಾದೇಗೌಡ, ಮಾಜಿ ಸದಸ್ಯ ಮರಿತಿಬ್ಬೇಗೌಡ, ಕೆಪಿಸಿಸಿ ಕಾರ್ಯಕಾರಣಿ ಸದಸ್ಯ ದೊಡ್ಡಸ್ವಾಮೇಗೌಡ, ಮಂಡ್ಯ ಲೋಕಸಭಾ ಅಭ್ಯರ್ಥಿ ಸ್ಟಾರ್ ಚಂದ್ರು ಮಾತನಾಡಿದರು.
27 ಕೆಆರ್ಎನ್-1:- ಕೆ.ಆರ್.ನಗರದ ಡಾ.ರಾಜಕುಮಾರ್ ಬಾನಂಗಳದಲ್ಲಿ ಆಯೋಜಿಸಲಾಗಿದ್ದ ಕಾಂಗ್ರೆಸ್ ಬೃಹತ್ ಕಾರ್ಯಕರ್ತರ ಸಭೆಯನ್ನು ಕೃಷಿ ಸಚಿವ ಎನ್.ಚಲುವರಾಯ ಸ್ವಾಮಿ ಉದ್ಘಾಟಿಸಿದರು. ಶಾಸಕರಾದ ಡಿ.ರವಿಶಂಕರ್, ಪಿ.ಎಂ.ನರೇಂದ್ರಸ್ವಾಮಿ, ದಿನೇಶ್ ಗೂಳಿಗೌಡ, ವಿಧಾನ ಪರಿಷತ್ ಸದಸ್ಯ ಮಧು ಜಿ.ಮಾದೇಗೌಡ, ಮಾಜಿ ಸದಸ್ಯ ಮರಿತಿಬ್ಬೇಗೌಡ, ಸ್ಟಾರ್ ಚಂದ್ರು, ಕೆಪಿಸಿಸಿ ಕಾರ್ಯಕಾರಣಿ ಸದಸ್ಯ ದೊಡ್ಡಸ್ವಾಮೇಗೌಡ ಇನ್ನಿತರರು ಇದ್ದರು.
27 ಕೆಆರ್ಎನ್-2:- ಕೆ.ಆರ್.ನಗರದ ಡಾ.ರಾಜಕುಮಾರ್ ಬಾನಂಗಳದಲ್ಲಿ ಆಯೋಜಿಸಲಾಗಿದ್ದ ಕಾಂಗ್ರೆಸ್ ಬೃಹತ್ ಕಾರ್ಯಕರ್ತರ ಸಭೆಯನ್ನು ಭಾಗವಹಿಸಿದ್ದ ಮಹಿಳೆಯರು.