ತುಮಕೂರು: ಪ್ರಥಮ ದರ್ಜೆ ಗುತ್ತಿಗೆದಾರ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ವಿಡಿಯೋ ಹರಿ ಬಿಟ್ಟ ಪ್ರಕರಣಕ್ಕೆ ಇದೀಗ ಮತ್ತೊಂದು ಟ್ವಿಸ್ಟ್ ಸಿಕ್ಕಿದೆ. ಪಾವಗಡ ತಾಲ್ಲೂಕು ಯೂತ್ ಕಾಂಗ್ರೆಸ್ ಅಧ್ಯಕ್ಷ ಹಾಗೂ ಪ್ರಥಮ ದರ್ಜೆ ಗುತ್ತಿಗೆದಾರ ಸುಜೀತ್ ಇದೀಗ ಮತ್ತೊಂದು ವಿಡಿಯೋ ರಿಲೀಸ್ ಮಾಡಿದ್ದಾರೆ. ಬಿಲ್ ಪಾಸ್ ಮಾಡಿ ಕೊಡುತ್ತೇನೆ ಸಣ್ಣಚಿತ್ತಪ್ಪ ಏನು ತಪ್ಪಿಲ್ಲ ಅಂತಾ ಹೇಳು ಎಂದು ಒತ್ತಾಯಪೂರ್ವಕವಾಗಿ ಅಧಿಕಾರಿಗಳು ವಿಡಿಯೋ ಮಾಡಿಸಿದ್ದಾರೆಂದು ಹೇಳಿದ್ದಾರೆ.
ನನ್ನ ಸಾವಿಗೆ ಎಮ್ಡಿ ಸಣ್ಣ ಚಿತ್ತಪ್ಪ ಕಾರಣ ಎಂದು ನಿನ್ನೆ ರಾತ್ರಿ ವಿಡಿಯೋ ಮಾಡಿ ಹರಿಬಿಟ್ಟಿದ್ದ ಸುಚೀತ್ ಇದೀಗ ಮತ್ತೊಂದು ವಿಡಿಯೋ ವೈರಲ್ ಮಾಡಿದ್ದಾರೆ. ಈ ವಿಡಿಯೋದಲ್ಲಿ ಮತ್ತೆ ಅಧಿಕಾರಿಗಳ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.
ವಿಶ್ವೇಶ್ವರಯ್ಯ ಜಲನಿಗಮ ಮಂಡಳಿ ಎಮ್ಡಿ ಸಣ್ಣಚಿತ್ತಪ್ಪ ವಿರುದ್ಧ ಕಾಮಗಾರಿ ಬಿಲ್ ನೀಡುತ್ತಿಲ್ಲ ಎಂದು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳಿದ್ದರು. ಇದನ್ನು ಗಮನಿಸಿದ ಜಲಮಂಡಳಿ ವಿಭಾಗದ ಅಧಿಕಾರಿಗಳು ಸುಚೀತ್ ನನ್ನು ಶಿರಾಗೆ ಕರೆಸಿಕೊಂಡಿದ್ದಾರೆ. ಅಷ್ಟೇ ಅಲ್ಲದೆ ಬಿಲ್ ಮಾಡಿಕೊಡುತ್ತೇವೆ ಆದರೆ ಸಣ್ಣ ಚಿತ್ತಪ್ಪರದ್ದು ಏನು ತಪ್ಪಿಲ್ಲ ಅಂತಾ ಹೇಳು ಎಂದು ಒತ್ತಾಯಪೂರ್ವಕವಾಗಿ ಮತ್ತೊಂದು ವಿಡಿಯೋ ಮಾಡಿಕೊಂಡಿರುವುದಾಗಿ ಸುಚೀತ್ ಹೇಳಿದ್ದಾರೆ.
ಎಸ್ಸಿಪಿ ಅಡಿ ಸುಜೀತ್ ರಸ್ತೆ ಹಾಗೂ ಚೆಕ್ ಡ್ಯಾಮ್ಗಳನ್ನು ಮಾಡಿಸಿದ್ದರು. ಕಾಮಗಾರಿ ಸರಿಯಿಲ್ಲ ಎಂದು ತನಿಖೆಯೂ ಮಾಡಿದ್ದ ಸಣ್ಣಚಿತ್ತಪ್ಪ, ಬಳಿಕ ತನಿಖೆಯಲ್ಲಿ ಕಾಮಗಾರಿ ಪೂರ್ಣ ಅಂತಾಲೂ ಸಾಬೀತಾಗಿತ್ತು. ಆದರೂ ಸುಮಾರು 45 ಲಕ್ಷ ರೂ. ಹಣ ಬಿಡುಗಡೆ ಮಾಡಿಲ್ಲ ಎಂದು ಆರೋಪಿಸಿದ್ದರು. ರಾಜಕೀಯ ದುರುದ್ದೇಶದಿಂದ ಹಣ ಬಿಡುಗಡೆ ಆಗಿಲ್ಲ ಎನ್ನೋ ಆರೋಪ ಮಾಡಿದ್ದು, ಹೀಗಾಗಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ವಿಡಿಯೋ ಹರಿ ಬಿಟ್ಟಿದ್ದರು. ನಾನು ಎಸ್ಸಿ ಆದ ಕಾರಣ ನನ್ನನ್ನು ತುಳಿಯುತ್ತಿರುವ ಆರೋಪ ಮಾಡಿರುವ ಸುಜೀತ್, ಸಣ್ಣಚಿತ್ತಪ್ಪಗೆ ಗಲ್ಲು ಶಿಕ್ಷೆ ಆಗಬೇಕೆಂದು ಹೇಳಿದ್ದರು.