ಬೆಂಗಳೂರು, ಅ.15: ಪಂಚ ರಾಜ್ಯಗಳ ಚುನಾವಣೆ ಸಮೀಪ ಇರುವಾಗಲೇ ಬೆಂಗಳೂರಿನಲ್ಲಿ ಐಟಿ ಅಧಿಕಾರಿಗಳು (IT Raid) ದಾಳಿ ನಡೆಸಿದ್ದು ಕೋಟಿ ಕೋಟಿ ಹಣ ಪತ್ತೆಯಾಗಿದೆ. ಗುತ್ತಿಗೆದಾರ ಅಂಬಿಕಾಪತಿಗೆ ಸೇರಿದ ಮೂರ್ನಾಲ್ಕು ಕಡೆ ಐಟಿ ಅಧಿಕಾರಿಗಳು ಸುದೀರ್ಘ ದಾಳಿ ನಡೆಸಿ 42 ಕೋಟಿ ಅಧಿಕ ಹಣ ಪತ್ತೆ ಹಚ್ಚಿ ವಶಕ್ಕೆ ಪಡೆದಿದ್ದಾರೆ. ಇನ್ನು ಮತ್ತೊಂದೆಡೆ ಬಿಲ್ಡರ್ ಸಂತೋಷ್ ನಿವಾಸದ ಮೇಲೆ ಐಟಿ ತಂಡ ದಾಳಿ ನಡೆಸಿ 40 ಕೋಟಿಗೂ ಹೆಚ್ಚು ಹಣವನ್ನು ವಶಕ್ಕೆ ಪಡೆಯಲಾಗಿದೆ. ಸದ್ಯ ಈ ಅಕ್ರಮ ಹಣದ ಹಿಂದೆ ಕಾಂಗ್ರೆಸ್ ಕೈಯಿದೆ (Congress) ಎಂಬ ಮಾತುಗಳು ಕೇಳಿಬರುತ್ತಿದ್ದು ಜೆಡಿಎಸ್ ಶಾಸಕ ಜಿ.ಟಿ.ದೇವೇಗೌಡ (GT Devegowda) ಅವರು ಕೂಡ ಗಂಭೀರ ಆರೋಪ ಮಾಡಿದ್ದಾರೆ.
ಜೆಡಿಎಸ್ ಶಾಸಕ ಜಿ.ಟಿ.ದೇವೇಗೌಡ ಪ್ರತಿಕ್ರಿಯೆ ನೀಡಿದ್ದು, ಐಟಿ ದಾಳಿ ವೇಳೆ ಸಿಕ್ಕಿರುವ ಕೋಟ್ಯಂತರ ರೂ. ಹಿಂದೆ ಕಾಂಗ್ರೆಸ್ ಇದೆ. ಪಂಚರಾಜ್ಯಗಳ ಚುನಾವಣೆ ಹಿನ್ನೆಲೆ ಕಾಂಗ್ರೆಸ್ ಹೈಕಮಾಂಡ್ ನಾಯಕರಿಗೆ ಕೊಡಲು ಕಾಂಗ್ರೆಸ್ ಪಕ್ಷ ಸಂಗ್ರಹಿಸಿಟ್ಟಿದ್ದ ಹಣವದು ಎಂದು ಜಿ.ಟಿ.ದೇವೇಗೌಡ ಆರೋಪಿಸಿದ್ದಾರೆ.
ನಮ್ಮ ರಾಜ್ಯದ ಸಮೃದ್ಧಿಯಾದ ಸಂಪತ್ತನ್ನು ಚುನಾವಣೆ ಮತ್ತು ಹೈಕಮಾಂಡ್ ನಾಯಕರಿಗೆ ಕೊಡಲು ಸಿದ್ಧ ಮಾಡಿದ್ದಾರೆ. ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಎಟಿಎಂ ಸರ್ಕಾರವಾಗಿದೆ. ಒಂದೊಂದು ಕೋಟಿ ಬಾಕ್ಸ್ ಗಳು ಪತ್ತೆ ಆಗಿರುವುದನ್ನು ನೋಡಿದರೆ ಅದು ನಿಜವಾಗಿಯೂ ಚುನಾವಣೆಗೆ ಸಾಗಿಸಲು ಇಟ್ಟಿದ್ದ ಹಣ ಎಂಬುವುದು ಗೊತ್ತಾಗುತ್ತೆ. ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಮತ್ತು ಸಚಿವರು ಹಣ ಸಂಗ್ರಹ ಮಾಡಲು ಶುರು ಮಾಡಿದ್ದಾರೆ. ಒಂದೊಂದು ಸಚಿವರಿಗೆ ಇಂತಿಷ್ಟು ಹಣ ಸಂಗ್ರಹಕ್ಕೆ ಟಾರ್ಗೆಟ್ ನೀಡಲಾಗಿದೆ. ರಾಜ್ಯ ಕಾಂಗ್ರೆಸ್ ಸರ್ಕಾರ ಪಂಚ ರಾಜ್ಯ ಚುನಾವಣೆ ಮತ್ತು ಲೋಕಸಭಾ ಹಣ ಸಂಗ್ರಹ ಮಾಡುತ್ತಿದೆ. ಹೀಗಾಗಿ ರಾಜ್ಯವನ್ನು ಕತ್ತಲೆಗೆ ದೂಡಿ ಹಣ ಮಾಡಲು ಮುಂದಾಗಿದೆ. ರಾಜ್ಯದಲ್ಲಿ ಯಾವುದೇ ಅಭಿವೃದ್ಧಿಗೆ ಕಾಂಗ್ರೆಸ್ ಬೇಕಾಗಿಲ್ಲ. ಐದು ಗ್ಯಾರೆಂಟಿಗಳನ್ನ ಹೇಳಿ ಮತ ಹಾಕಿಸಿಕೊಂಡು ರಾಜ್ಯವನ್ನು ಕತ್ತಲೆಗೆ ತಳ್ಳಿದೆ ಎಂದು ಜೆಡಿಎಸ್ ಶಾಸಕ ಜಿ.ಟಿ.ದೇವೇಗೌಡ ಆಕ್ರೋಶ ಹೊರ ಹಾಕಿದ್ದಾರೆ.