ಪ್ರತಿನಿಧಿ ವರದಿ ಕೋಲಾರ
ಜಿಲ್ಲೆಯಲ್ಲಿ ಕಾಂಗ್ರೆಸ್ ಒಡೆದ ಮನೆಯಾಗಿದ್ದು ಅಭ್ಯರ್ಥಿ ಕೆ.ವಿ. ಗೌತಮ್ ಅವರಿಗೆ ಭಯ ಶುರುವಾಗಿದೆ ಎಂದು ಸಂಸದ ಎಸ್.ಮುನಿಸ್ವಾಮಿ ವ್ಯಂಗ್ಯವಾಡಿದರು.
ನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಶನಿವಾರ ನಡೆದ ಬಿಜೆಪಿ, ಒಬಿಸಿ ಮೋರ್ಚಾ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ, ಗೌತಮ್ ಹೊರಗಿನ ವ್ಯಕ್ತಿಯಾಗಿದ್ದು ಮಲ್ಲೇಶ್ ಬಾಬು ಸ್ಥಳಿಯ ವ್ಯಕ್ತಿ ಎಂದು ಜನರೇ ತೀರ್ಮಾನ ಮಾಡಿದ್ದಾರೆ. ಮಲ್ಲೇಶ ಬಾಬು ಬೆಂಬಲಕ್ಕೆ ನಿಂತಿದ್ದಾರೆ ಎಂದರು. ಕಾಂಗ್ರೆಸ್ ಪಕ್ಷವು ಒಡೆದ ಮನೆಯಾಗಿದೆ. ಡಿ.ಕೆ.ಶಿವಕುಮಾರ್ ಬಳಿ ಅಭ್ಯರ್ಥಿ ಗೌತಮ್ ಹೋಗಿ ಯಾರು ಕೆಲಸ ಮಾಡುತ್ತಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ. ಇದನ್ನೆಲ್ಲ ಗಮನಿದರೆ ದೇಶದ ಚುನಾವಣೆಗಾಗಿ ಕಾಂಗ್ರೆಸ್ಸಿನವರು ನಮ್ಮ ಕಡೆಗೆ ಬಂದರೂ ಅಶ್ಚರ್ಯವಿಲ್ಲ. ಅವರಲ್ಲಿ ಆಗಿರುವ ವ್ಯತ್ಯಾಸಗಳ ಲಾಭ ನಾವು ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ಏ.೨೬ರ ನಂತರ ಮಾತನಾಡುತ್ತೇನೆ. ಕಳೆದ ಚುನಾವಣೆಯಲ್ಲಿ ನಮಗೆ ಬಂದಿದ್ದ ಮತಗಳಿಗಿಂತ ಹೆಚ್ಚು ಮತಗಳಿಂದ ಗೆಲ್ಲಿಸಬೇಕು ಎಂದು ಕೋರಿದರು. ಕೇವಲ ಒಂದು ಸಮುದಾಯದ ಮತಗಳನ್ನು ಪಡೆದು ನಾನು ಸಂಸದನಾಗಿ ಆಯ್ಕೆಯಾಗಿಲ್ಲ. ಎಲ್ಲ ಸಮುದಾಯಗಳ ಮತಗಳು ಬೇಕು. ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಕೇಂದ್ರ ಯೋಜನೆಗಳ್ನು ತಲುಪಿಸಿ ಜಾಗೃತಿ ಮೂಡಿಸುವ ಕೆಲಸ ಮಾಡಬೇಕು. ಯಾವ ಪಕ್ಷವೇನು ಸಾಚವಿಲ್ಲ, ನಮ್ಮಲ್ಲೂ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳು ಇವೆ. ಅದನ್ನು ಸರಿಪಡಿಸಿಕೊಂಡು ಹೋಗಬೇಕು ಕೋಲಾರ ಲೋಕಸಭೆ ಕ್ಷೇತ್ರದ ವ್ಯಾಪ್ತಿಯಲ್ಲಿರುವ ೮ ವಿಧಾನಸಭೆ ಕ್ಷೇತ್ರದ ವ್ಯಾಪ್ತಿಯಲ್ಲಿ ಒಬಿಸಿ ಸಭೆಗಳನ್ನು ನಡೆಸಬೇಕು. ಮೈತ್ರಿ ಅಭ್ಯರ್ಥಿಯನ್ನು ಗೆಲ್ಲಿಸಿಕೊಳ್ಳಲು ಪ್ರತಿಯೊಬ್ಬರು ಶಿಸ್ತಿನ ಸಿಪಾಯಿಗಳಂತೆ ಕೆಲಸ ಮಾಡಬೇಕು ಎಂದು ಕಿವಿಮಾತು ಹೇಳಿದರು.
ನರೇಂದ್ರ ಮೋದಿ ಅವರು ಮತ್ತೆ ಪ್ರಧಾನ ಮಂತ್ರಿಯಾಗಬೇಕು ಎಂದು ಕಾಂಗ್ರೆಸ್ ಶಾಸಕರಿಗೂ ಇಷ್ಟ ಇದೆ. ತೆನೆ ಹೊತ್ತ ರೈತ ಮಹಿಳೆ ಚಿಹ್ನೆಗೆ ಮತ ಹಾಕಿಸುವ ಕೆಲಸ ಮಾಡಬೇಕು ಮೈತ್ರಿಯಿಂದ ಬಿಜೆಪಿಗೆ ಮಲ್ಲೇಶ್ ಬಾಬು ಅವರಿಗೆ ಸೀಟು ಬಿಟ್ಟು ಕೊಡಲಾಗಿದೆ ಎಂಬುದರ ಬಗ್ಗೆ ಅರಿವು ಮೂಡಿಸಬೇಕು. ಇಲ್ಲದಿದ್ದರೆ ಬೂತ್ ಒಳಗೆ ಹೋಗಿ ಮತದಾರ ಹೂ ಚಿಹ್ನೆ ಹುಡುಕಿ ಸುಮ್ಮನಾಗುತ್ತಾರೆ. ಈಗಿನಿಂದಲೇ ಕಾರ್ಯೋನ್ಮುಕರಾಗಬೇಕು ಎಂದು ಹೇಳಿದರು.
ನನಗೆ ಟಿಕೆಟ್ ನೀಡಿಲ್ಲ ಅಂತ ಮನೆಯಲ್ಲಿ ಕುಳಿತಿಲ್ಲ, ನನ್ನ ಬೆಂಬಲಿಗರನ್ನು ಚೂ ಬಿಟ್ಟು ಬಂಡಾಯ ಎದ್ದೇಳಿಲ್ಲ, ದೇಶದ ಹಿತಕ್ಕಾಗಿ, ಪಕ್ಷದ ಹೈಕಮಾಂಡ್ ತೀರ್ಮಾನಕ್ಕೆ ಬದ್ಧನಾಗಿ, ಎನ್ಡಿಎ ಅಭ್ಯರ್ಥಿಪರ ಕೆಲಸ ಮಾಡುತ್ತಿದ್ದೇನೆ, ಮಲ್ಲೇಶ್ ಬಾಬು ಸಹ ನನ್ನ ಸಹೋದರ. ಪ್ರತಿಯೊಬ್ಬರು ಅವರ ಗೆಲುವಿಗೆ ಶ್ರಮಿಸಬೇಕು ಎಂದು ಎಚ್ಚರಿಸಿದರು. ಸಭೆಯಲ್ಲಿ ಓಬಿಸಿ ಜಿಲ್ಲಾಧ್ಯಕ್ಷ ಬಾಲಾಜಿ, ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಅರುಣಮ್ಮ, ಸವಿತಾ, ಮುಖಂಡರಾದ ಕೃಷ್ಣಮೂರ್ತಿ, ರಾಜೇಂದ್ರ, ಹನುಮಂತಪ್ಪ ಹಾಜರಿದ್ದರು.