ಬೆಂಗಳೂರು:ಹಳೇ ಮೈಸೂರು ಗೆಲ್ಲುವುದಕ್ಕೆ ಕಾಂಗ್ರೆಸ್ ಈಗಾಗಲೇ ಒಂದು ಕಾರ್ಡ್ ಪ್ಲೇ ಮಾಡಿದೆ. ಅದು ಒಕ್ಕಲಿಗ ಜಾತಿ ಕಾರ್ಡ್. ಇದೇ ಒಕ್ಕಲಿಗ ಅಸ್ತ್ರವನ್ನ ಮತ್ತಷ್ಟು ಜೀವಂತವಾಗಿಡಲು ಕಾಂಗ್ರೆಸ್ ಮತ್ತೊಂದು ಪ್ಲ್ಯಾನ್ ಮಾಡಿಕೊಂಡಿದೆ. ಮೋದಿ ಆಗಮನಕ್ಕೂ ಕೌಂಟರ್ ಕೊಡಲು ಇಂದು (ಏಪ್ರಿಲ್ 17) ರಾಹುಲ್ ಗಾಂಧಿಯವರನ್ನ ಅಖಾಡಕ್ಕೆ ಇಳಿಸಿದೆ. ಅದರಲ್ಲೂ ಮಂಡ್ಯ ಲೋಕಸಭೆ ಸಮರದಲ್ಲಿ ಮತ್ತೊಮ್ಮೆ ರಣರಣ ಅನ್ನೋಕೆ ಶುರುವಾಗಿದೆ.. ಕಳೆದ ಲೋಕಸಭೆಗಿಂತೂ ಈ ಬಾರಿಯೂ ಫುಲ್ ಹೈವೋಲ್ಟೇಜ್ ಕದನ ಕಣವಾಗಿದೆ. ಜಿದ್ದಿಗೆ ಜಿದ್ದು ಎಂಬಂತೆ ಸಕ್ಕರೆ ನಾಡು ವಶಕ್ಕಾಗಿ ಕಾಂಗ್ರೆಸ್, ಬಿಜೆಪಿ ಕಾಲು ಕೆರೆದು ನಿಂತಿವೆ. ಮೊನ್ನೆಯಷ್ಟೇ ಪ್ರಧಾನಿ ಮೋದಿಯವರನ್ನ ಮೈಸೂರಿಗೆ ಕರೆಸಿದ್ದ ಬಿಜೆಪಿ, ಜೆಡಿಎಸ್ ದೋಸ್ತಿಗಳು ಶಕ್ತಿ ಪ್ರದರ್ಶನ ಮಾಡಿದ್ರು. ಒಂದು ಭೇಟಿಯಲ್ಲಿ ಮೂರು ಕ್ಷೇತ್ರಗಳನ್ನ ಟಾರ್ಗೆಟ್ ಮಾಡಿದ್ರು. ಆದ್ರೆ ಆದ್ರೀಗ ಇದನ್ನ ನೋಡಿಕೊಂಡು ಕಾಂಗ್ರೆಸ್ ಸುಮ್ನೆ ಕೂತಿಲ್ಲ. ಬದಲಾಗಿ ಏನಾದ್ರು ಮಾಡಿ ಮಂಡ್ಯವನ್ನ ಕೈ ವಶ ಮಾಡಿಕೊಳ್ಳಬೇಕು. ಕುಮಾರಸ್ವಾಮಿಯನ್ನ ಕಟ್ಟ ಹಾಕಬೇಕು ಎಂದು ರಾಹುಲ್ ಗಾಂಧಿ ಅಸ್ತ್ರ ಹೂಡಿದ್ದಾರೆ. ಹೌದು.. ನರೇಂದ್ರ ಮೋದಿ ಅವರ ಮೈಸೂರು, ಮಂಗಳೂರು ಭೇಟಿ ಬೆನ್ನಲ್ಲೇ ಪ್ರಸಕ್ತ ಲೋಕಸಭೆ ಚುನಾವಣೆ ಪ್ರಚಾರದ ಸಲುವಾಗಿ ಇದೇ ಮೊದಲ ಬಾರಿಗೆ ಇಂದು (ಏಪ್ರಿಲ್ 17) ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ರಾಜ್ಯಕ್ಕೆ ಆಗಮಿಸಿದ್ದಾರೆ. ಮೊದಲಿಗೆ ಮಂಡ್ಯದಲ್ಲಿ ನಡೆಯುತ್ತಿರುವ ಬೃಹತ್ ಕಾಂಗ್ರೆಸ್ ಸಮಾವೇಶದಲ್ಲಿ ಭಾಗವಹಿಸಿದ್ದಾರೆ.