ಪ್ರತಿನಿಧಿ ವರದಿ ಚಿಕ್ಕಬಳ್ಳಾಪುರ
ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಇದುವರೆಗೂ ನಡೆದಿರುವ 13 ಚುನಾವಣೆಗಳಲ್ಲಿ 10ರಲ್ಲಿ ಒಬಿಸಿ ಅಭ್ಯರ್ಥಿಗಳೇ ಗೆಲುವು ಸಾಧಿಸಿದ್ದು, ಈ ನಿಟ್ಟಿನಲ್ಲಿ ಒಬಿಸಿ ಸಮುದಾಯದ ತನಗೆ ಕ್ಷೇತ್ರದ ಟಿಕೆಟ್ ನೀಡುವಂತೆ ತೇಲಿ ಸಾಹು ಸಮಾಜದ ರಾಷ್ಟ್ರೀಯ ಕಾರ್ಯಾಧ್ಯಕ್ಷ ಪಿ.ಎಂ.ರಘುನಾಥ್ ಬಿಜೆಪಿ ವರಿಷ್ಠರನ್ನು ಒತ್ತಾಯಿಸಿದರು.
ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ಜನಸಂಖ್ಯೆ ಆಧಾರದಲ್ಲಿ ಒಬಿಸಿ ಸಮುದಾಯಕ್ಕೆ ರಾಜ್ಯದಲ್ಲಿ 5 ಕ್ಷೇತ್ರಗಳನ್ನು ನೀಡಲು ನಿರ್ಧರಿಸಲಾಗಿತ್ತು. ಅದರಂತೆ ಪಿ.ಸಿ.ಮೋಹನ್, ಕೋಟ ಶ್ರೀನಿವಾಸ ಪೂಜಾರಿ ಸೇರಿ ಇಬ್ಬರಿಗೆ ಮಾತ್ರ ಟಿಕೆಟ್ ನೀಡಲಾಗಿದ್ದು, ಉಳಿದ 3 ಸ್ಥಾನಗಳಲ್ಲಿ ಚಿಕ್ಕಬಳ್ಳಾಪುರ ಕ್ಷೇತ್ರವನ್ನು ಒಬಿಸಿಗೆ ನೀಡಬೇಕೆಂದು ಕೋರಿದರು.
ಕಳೆದ 40 ವರ್ಷಗಳಿಂದ ಪಕ್ಷದ ವಿವಿಧ ಸ್ತರಗಳಲ್ಲಿ ಕಾರ್ಯನಿರ್ವಹಿಸಿ ಕ್ಷೇತ್ರದಲ್ಲಿ ಪಕ್ಷಕ್ಕೆ ಅಡಿಪಾಯ ಹಾಕಿರುವೆ. ಅಲ್ಲದೆ, ವರಿಷ್ಠರು ಸೂಚಿಸಿರುವ ಕೆಲಸಕಾರ್ಯಗಳನ್ನು ಪ್ರಾಮಾಣಿಕವಾಗಿ ನಿರ್ವಹಿಸಿರುವೆ. ಆದ್ದರಿಂದ ಪಕ್ಷಕ್ಕೆ 4 ದಶಕ ದುಡಿದಲ್ಲಿ ಲೋಕಸಭಾ ಕ್ಷೇತ್ರದ ಟಿಕೆಟ್ ನೀಡಬೇಕೆಂಬ ಸಿದ್ದಾಂತದಡಿ ಒಬಿಸಿಗಳ ಭದ್ರಕೋಟೆ ಆಗಿರುವ ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ನನಗೆ ನೀಡಬೇಕೆಂದರು.
ಜಿಲ್ಲೆಯಲ್ಲಿ ರಾಜಕಾಲುವೆ ಬೇಕಾಬಿಟ್ಟಿಯಾಗಿ ಒತ್ತುವರಿಯಾಗಿದ್ದು, ಇವುಗಳನ್ನು ತೆರವುಗೊಳಿಸದೇ ಇದ್ದಲ್ಲಿ ಮುಂದಿನ ದಿನಗಳಲ್ಲಿ ಬೆಂಗಳೂರಿಗೆ ಎದುರಾಗಿರುವ ನೀರಿನ ಸಂಕಷ್ಟ ಜಿಲ್ಲೆಗೂ ಬಂದೊದಗುವುದು. ಅಲ್ಲದೆ, ರಾಜಕಾಲುವೆಗಳ ತೆರವಿನ ಜೊತೆಗೆ ಕೆರೆಗಳ ಪುನಶ್ಚೇತನ ಕಾರ್ಯವನ್ನು ಮಾಡಬೇಕಿದೆ. ಸಕಾಲದಲ್ಲಿ ಕಂದಾಯ ಇಲಾಖೆಯಲ್ಲಿ ರೈತರ ಕೆಲಸ ಕಾರ್ಯಗಳನ್ನು ಮಾಡಿಕೊಡಬೇಕಿದೆ. ಈ ಕುರಿತು ಅಧಿಕಾರಿಗಳಿಗೆ ಒತ್ತಾಯ ಮಾಡುವುದಾಗಿ ತಿಳಿಸಿದರು.
ಪ್ರಧಾನಿ ಮೋದಿ ಅವರ ವಿರುದ್ಧ ಮಾಜಿ ಸಂಸದ ವೀರಪ್ಪ ಮೊಯ್ಲಿ ನೀಡಿರುವ ಹೇಳಿಕೆಯನ್ನು ಖಂಡಿಸಿ ಮಾನನಷ್ಟ ಮೊಕದ್ದಮೆ ಹೂಡುವ ಕುರಿತು ತಜ್ಞ ವಕೀಲರ ತಂಡದೊಂದಿಗೆ ಚರ್ಚಿಸಿ ಅವರ ಸಲಹೆ ಸೂಚನೆಯ ಮೇರೆಗೆ ಕಾನೂನು ಸಮರ ಸಾರಲಾಗುವುದು ಎಂದು ಹೇಳಿದರು
ಬಿಜೆಪಿ ಮುಖಂಡರಾದ ಲಕ್ಷ್ಮೀನಾರಾಯಣಗುಪ್ತ, ಶ್ರೀನಿವಾಸ ಬಾಬು ಇದ್ದರು.