ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನದ ಅಂಗವಾಗಿ ಕರ್ನಾಟಕ ಸರ್ಕಾರ ಹಮ್ಮಿಕೊಂಡಿರುವ ‘ಸಂವಿಧಾನ ಪೀಠಿಕೆ ಓದು’ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಸಿದ್ದಾರಾಮಯ್ಯ ಚಾಲನೆ ನೀಡಿದ ಬಳಿಕ ಪ್ರಾಸ್ತಾವಿಕ ಭಾಷಣ ಮಾಡಿದ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಪವಿತ್ರ ದಿನದ ಹಿನ್ನೆಲೆಯಲ್ಲಿ ಯುವ ಸಮುದಾಯದ ಸಬಲೀಕರಣ ಬಗ್ಗೆ ಯೋಚಿಸಬೇಕಿದೆ ಮತ್ತು ದೇಶದ ನಿರ್ಮಾಣದಲ್ಲಿ ಅವರ ಮತ್ತು ಮಕ್ಕಳ ಪಾತ್ರದ ಬಗ್ಗೆ ಜಾಗೃತಿ ಮೂಡಿಸಬೇಕಿದೆ ಎಂದು ಹೇಳಿದರು. ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವವಾಗಿರುವ ಭಾರತಕ್ಕೆ ಯುವ ಸಮುದಾಯ ಮತ್ತು ಮಕ್ಕಳು ಬಹುದೊಡ್ಡ ಆಸ್ತಿಯೆನಿಸಿರುವುದರಿಂದ ಅವರನ್ನು ಬಲಿಷ್ಠ ಶಕ್ತಿಯಾಗಿ ಬೆಳೆಸಬೇಕಿದೆ. ಈ ದಿಶೆಯಲ್ಲಿ ಅವರಿಗೆ ಉತ್ತಮ ಶಿಕ್ಷಣ ವ್ಯವಸ್ಥೆಯನ್ನು ಕಲ್ಪಿಸುವ ಗುರುತರ ಜವಾಬ್ದಾರಿ ಸರ್ಕಾರಗಳ ಮೇಲಿದೆ ಎಂದು ಶಿವಕುಮಾರ್ ಹೇಳಿದರು.
ಡಾ ಬಾಬಾ ಸಾಹೇಬ ಅಂಬೇಡ್ಕರ್ ನಮಗೆ ನೀಡಿದ ಸಂವಿಧಾನ ಕೇವಲ ಕಾನೂನು ಕಟ್ಟಳೆಗಳ ಹೊತ್ತಿಗೆ ಅಲ್ಲ, ಅದು ನಮ್ಮ ಬದುಕಿನ ಮಾರ್ಗವಾಗಿದೆ, ಜೀವನದ ಉದ್ದೇಶವಾಗಿದೆ. ನಮ್ಮ ಧರ್ಮ ಗ್ರಂಥಗಳ ರಕ್ಷಣೆಗೆ ನಾವೆಷ್ಟು ಬದ್ಧರಾಗಿರುತ್ತೇವೆಯೋ ಅದಕ್ಕಿಂತ ಹೆಚ್ಚಿನ ಬದ್ಧತೆ ಸಂವಿಧಾನದ ರಕ್ಷಣೆಯೆಡೆ ಇರಬೇಕು ಎಂದು ಹೇಳಿದ ಶಿವಕುಮಾರ್ ಸರ್ವರಿಗೂ ಸಮಬಾಳು ಕಲ್ಪಿಸುವ ದ್ಯೇಯವನ್ನಿಟ್ಟುಕೊಂಡು ಮುಂದೆ ಸಾಗೋಣ ಎಂದರು. ಕಾರ್ಯಕ್ರಮದಲ್ಲಿ ಸಭಾಪತಿ ಬಸವರಾಜ ಹೊರಟ್ಟಿ, ಸಚಿವರಾದ ಹೆಚ್ ಸಿ ಮಹದೇವಪ್ಪ, ಡಾ ಜಿ ಪರಮೇಶ್ವರ್, ಸತೀಶ್ ಜಾರಕಿಹೊಳಿ, ರಾಮಲಿಂಗಾರೆಡ್ಡಿ, ಪ್ರಿಯಾಂಕ್ ಖರ್ಗೆ, ಕೆಹೆಚ್ ಮುನಿಯಪ್ಪ, ಕೆಜೆ ಜಾರ್ಜ್, ಶಿವರಾಜ್ ತಂಗಡಗಿ, ನಾಗೇಂದ್ರ ಸೇರಿದಂತೆ ಹಲವಾರು ಜನ ಉಪಸ್ಥಿತರಿದ್ದರು.