- ಕೊಳ್ಳೇಗಾಲದ ಉಪ ವಿಭಾಗಾಧಿಕಾರಿ ಶಿವಮೂರ್ತಿ ನೇತೃತ್ವದ ಕಮಿಟಿ ರಚನೆ
- 24 ಪ್ರಮುಖ ಅಂಶಗಳನ್ನು ನಮೂದಿಸಿ ಸರ್ವೆ ಮಾಡುವಂತೆ ಸೂಚನೆ
ಹನೂರು: ತಾಲೂಕಿನ ಮಲೆ ಮಹದೇಶ್ವರ ಬೆಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮೆಂದರೆ, ಅತ್ತಿಪೋಡು, ಆನಗಾಡು ಗ್ರಾಮದ ವ್ಯಾಪ್ತಿಯಲ್ಲಿರುವ 58 ಆದಿವಾಸಿ ಕುಟುಂಬಗಳನ್ನು ಗುರುತಿಸಿ ಇವರಿಗೆ ಪುನರ್ವಸತಿ ಕಲ್ಪಿಸಲು ಅಧಿಕಾರಿಗಳು ಸರ್ವೇ ವರದಿ ಸಿದ್ಧಪಡಿಸಿಕೊಂಡಿದ್ದಾರೆ.
ಇಂಡಿಗನತ್ತ ಗ್ರಾಮದಲ್ಲಿ ನಡೆದ ಮತಗಟ್ಟೆ ದ್ವಂಸ ಪ್ರಕರಣದಲ್ಲಿ ಮೆಂದರೆ ಗ್ರಾಮದ ಆದಿವಾಸಿ ಜನಾಂಗದವರು ಭಯಗೊಂಡು ಮೇ 13ರಂದು ಮೆಂದಾರೆ ಗ್ರಾಮಕ್ಕೆ ಭೇಟಿ ನೀಡಿದ್ದ ಜಿಲ್ಲಾಧಿಕಾರಿಗಳಿಗೆ ನಮ್ಮನ್ನು ನಮ್ಮ ಜನಾಂಗದವರು ಇರುವ ಪಾಲರ್ ಗ್ರಾಮಕ್ಕೆ ಸ್ಥಳಾಂತರ ಮಾಡುವಂತೆ ಮನವಿ ಸಲ್ಲಿಸಿದ್ದರು.
ಈ ನಿಟ್ಟಿನಲ್ಲಿ ಜಿಲ್ಲಾಧಿಕಾರಿಗಳು ಕೊಳ್ಳೇಗಾಲ ಉಪ ವಿಭಾಗಾಧಿಕಾರಿ ಶಿವಮೂರ್ತಿ ನೇತೃತ್ವದ ಕಮಿಟಿ ರಚನೆ ಮಾಡಿದ್ದು, ಕಮಿಟಿಯಲ್ಲಿ ಆರು ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಮೂರು ದಿನಗಳ ಕಾಲ ಗ್ರಾಮದಲ್ಲಿ ವಾಸಿಸುತ್ತಿರುವ ಜನಾಂಗದವರ 24 ಪ್ರಮುಖ ಅಂಶಗಳನ್ನು ನಮೂದಿಸಿ ಸರ್ವೇ ಕಾರ್ಯ ಮಾಡುವಂತೆ ಸೂಚನೆ ನೀಡಿದ್ದೆ.
ಈ ನಿಟ್ಟಿನಲ್ಲಿ ಕಂದಾಯ, ಅರಣ್ಯ ಭೂಮಾಪನ ಇಲಾಖೆ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಜಂಟಿ ಸಹಯೋಗದಲ್ಲಿ ಮೇ 27 ರಿಂದ ಮೇ 29ರ ವರೆಗೆ ಮೂರು ದಿನಗಳ ಕಾಲ ನಿರಂತರವಾಗಿ ಸರ್ವೇ ಕಾರ್ಯ ನಡೆಸಿದ್ದಾರೆ. ಈ ವೇಳೆ ಗ್ರಾಮಸ್ಥರು ಅಧಿಕಾರಿಗಳಿಗೆ ಎಲ್ಲಾ ರೀತಿಯಲ್ಲಿ ಉತ್ತಮವಾಗಿ ಸ್ಪಂದನೆ ನೀಡುವುದರ ಮೂಲಕ ಸ್ಥಳಾಂತರಕ್ಕೆ ಒಲವು ತೋರಿದ್ದಾರೆ.
ಮೆಂದರೆ ಗ್ರಾಮದ ಏಳು ಜನರಿಗೆ ಮಾತ್ರ 15 ಎಕರೆ ಜಮೀನಿದ್ದು ಇವರಿಗೆ ಪಹಣಿಯೂ ಸಹ ಬರುತ್ತಿದೆ. ಉಳಿದಂತೆ ಕೆಲವು ರೈತರಿಗೆ ಸಾಗುವಳಿ ಚೀಟಿ ಮಾತ್ರ ಇದ್ದು ಅವರಿಗೆ ಯಾವುದೇ ಪಹಣಿ ಬರುತ್ತಿಲ್ಲ. ಒಟ್ಟಾರೆ ಸುಮಾರು 25ರಿಂದ 30 ಎಕರೆ ಜಮೀನು ಮಾತ್ರ ಈ ಗ್ರಾಮಸ್ಥರಿಗೆ ಹೊಂದಿದ್ದರೆ.
ಉಳಿದಂತೆ ಮೆಂದಾರೆಗೆ ಒಳಪಡುವ ಅತ್ತಿಪೋಡು ಆನಾಗಾಡು ಸೇರಿದಂತೆ ಗ್ರಾಮಸ್ಥರಿಗೆ ಗ್ರಾಮ ಪಂಚಾಯಿತಿ ವತಿಯಿಂದ 120 ಜಾಬ್ ಕಾರ್ಡ್ ವಿತರಣೆ ಮಾಡಲಾಗಿದೆ. ಇದಲ್ಲದೆ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ 57 ಕುಟುಂಬಗಳಿಗೆ ಪ್ರತಿ ತಿಂಗಳು ಪೌಷ್ಟಿಕ ಆಹಾರ ಪೂರೈಕೆ ಮಾಡಲಾಗುತ್ತಿದೆ. ಒಂದು ಕುಟುಂಬ ಹೊಸದಾಗಿ ಸೇರ್ಪಡೆಯಾಗುವುದರಿಂದ ಅವರಿಗೆ ಮಾತ್ರ ಪೌಷ್ಠಿಕ ಆಹಾರ ದೊರೆಯುತ್ತಿಲ್ಲ, ಇನ್ನು ಪ್ರತಿಯೊಬ್ಬರ ಮನೆಯಲ್ಲಿಯೂ ಗ್ಯಾಸ್ ಸಂಪರ್ಕವಿದೆ ಎಂದು ತಿಳಿದುಬಂದಿದೆ.
ಆಧಾರ್ ಕಾರ್ಡ್ ಇಲ್ಲ: ಮೆಂದರೆ ಗ್ರಾಮದಿಂದ ತಮಿಳುನಾಡು ಗಡಿ ಪ್ರದೇಶಗಳಿಗೆ ವಿವಾಹ ಮಾಡಿಕೊಟ್ಟ ನಂತರ ಗಂಡನೊಂದಿಗೆ ಜಗಳವಾಡಿಕೊಂಡು ಬಂದಿರುವ ಎರಡು ಕುಟುಂಬಗಳಿಗೆ ಆಧಾರ್ ಕಾರ್ಡ್ ಇಲ್ಲ, ಇನ್ನು ಆಧಾರ್ ಕಾರ್ಡ್ ಇಲ್ಲದೆ ಇರುವುದರಿಂದ ಬ್ಯಾಂಕ್ ಖಾತೆ ತೆರೆಯಲು ಸಾಧ್ಯವಾಗಿಲ್ಲ.
ವೃದ್ಧಾಪ್ಯ ವೇತನ ಬರುತ್ತಿಲ್ಲ: ಅತ್ತೀ ಪೋಡು ಗ್ರಾಮದ ಅಸಗಜ್ಜಿ ಎಂಬುವರಿಗೆ ನೂರು ವರ್ಷ ವಯಸ್ಸಾಗಿದ್ದು ಇವರಿಗೆ ಹಸ್ತರೇಖೆ ಬಾರದೆ ಇರುವುದರಿಂದ ಆಧಾರ್ ಕಾರ್ಡ್ ನೋಂದಾವಣೆಯಾಗಿಲ್ಲ, ಆದ್ದರಿಂದ ಇವರಿಗೆ ವೃದ್ಧಾಪ್ಯ ವೇತನ ಬರುತ್ತಿಲ್ಲ , ಇದೇ ರೀತಿ ಮೆಂದರೆ ಗ್ರಾಮದ ಮಗಳ ಮನೆಗೆ ಬಂದಿರುವ ಮಾದಿ ಎಂಬುವವರಿಗೂ ಆಧಾರ್ ಕಾರ್ಡ್ ಇಲ್ಲ ಎಂದು ತಿಳಿದುಬಂದಿದೆ.