ಶಾಸಕ ಎಚ್.ಎ. ಇಕ್ಬಾಲ್ ಹುಸೇನ್ ಮನವಿ
ಪ್ರತಿನಿಧಿ ವರದಿ ರಾಮನಗರ
ಜಿಲ್ಲೆ ಅಭಿವೃದ್ದಿ ಕಾಣಬೇಕಾದರೆ ಜಿಲ್ಲೆಯ ಹೆಸರನ್ನು ಬೆಂಗಳೂರು ದಕ್ಷಿಣ ಜಿಲ್ಲೆಯೆಂದು ಮರು ನಾಮಕರಣ ಮಾಡಬೇಕಾಗಿದೆ ಎಂದು ಶಾಸಕ ಎಚ್.ಎ. ಇಕ್ಬಾಲ್ ಹುಸೇನ್ ತಿಳಿಸಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವು ಮೂಲತಃ ಬೆಂಗಳೂರು ಜಿಲ್ಲೆಯವರೇ ಆಗಿದ್ದೇವೆ. ಜನರ ಬಯಕೆಯನ್ನು ಜನಪ್ರತಿನಿಧಿಗಳಾದ ನಾವು ಸರ್ಕಾರದ ಮುಂದಿಟ್ಟಿದ್ದೇವೆ. ವಿರೋಧ ಮಾಡುವವರು ಪ್ರಸ್ತಾವನೆಯನ್ನು ಏಕೆ ಇಟ್ಟಿದ್ದಾರೆ ಎಂದು ಒಮ್ಮೆ ಯೋಚನೆ ಮಾಡಿ ನೋಡಬೇಕು. ಪ್ರತಿಪಕ್ಷಗಳು ವಿರೋಧ ಮಾಡುವುದನ್ನು ಬಿಟ್ಟು ಹೆಸರು ಮರುನಾಮಕರಣಕ್ಕೆ ಸಹಕಾರ ನೀಡಲಿ ಎಂದರು.
ಹಾರೋಹಳ್ಳಿ-ಮರಳವಾಡಿ ಭಾಗದಲ್ಲಿ ಏರ್ ಪೋರ್ಟ್ ನಿರ್ಮಾಣ ಚಿಂತನೆ, ಬಿಡದಿಗೆ ಮೆಟ್ರೋ ವಿಸ್ತರಣೆ, ಗ್ರೇಟರ್ ಬೆಂಗಳೂರು ಪ್ರಾಧಿಕಾರ ಅನುಷ್ಟಾನ ಇವೆಲ್ಲವನ್ನು ಮಾಡಿರುವುದರಿಂದ ಆಸ್ತಿಯ ಮೌಲ್ಯ ಹೆಚ್ಚಿದೆ ಎಂದು ಹೇಳಿದರು.
ಈ ಹಿಂದೆ ಹೆಸರಿಗಾಗಿ ಹಾರೋಹಳ್ಳಿಯನ್ನು ತಾಲೂಕು ಕೇಂದ್ರವಾಗಿ ಮಾಡಿದರು. ಮೂಲಭೂತ ಸೌಕರ್ಯ ಕಲ್ಪಿಸುವ ಮುಂದಾಲೋಚನೆ ಮಾಡದೆ ಘೋಷಣೆಗಳನ್ನು ಮಾಡಿದ್ದಾರೆ. ಪರಿಣಾಮ ಸರ್ಕಾರದ ಕಟ್ಟಡ ಕಟ್ಟಲು ಸ್ಥಳಗಳಿಲ್ಲ, ಆಗಾಗಿ ನಾವು ಬೆಂಗಳೂರು ದಕ್ಷಿಣ ಜಿಲ್ಲೆಯೆಂದು ಗುರುತಿಸಿ ಎರಡು ವರ್ಷಗಳಲ್ಲಿ ಅಭಿವೃದ್ದಿ ಮಾಡಿ ತೋರಿಸುತ್ತೇವೆ ಎಂದರು.
ನಗರದಲ್ಲಿ ಆಗಬೇಕಿರುವ ಅಭಿವೃದ್ದಿ ಕೆಲಸಗಳ ಬಗ್ಗೆ ನನಗೆ ಅರಿವಿದೆ. ನಗರದ ಚರ್ಚ್ ಬಳಿ ರೈಲ್ವೆ ಅಂಡರ್ ಪಾಸ್ ನಿರ್ಮಾಣ ಸಂಬಂಧ ಕೇಂದ್ರದ ರೈಲ್ವೆ ರಾಜ್ಯ ಸಚಿವ ಸೋಮಣ್ಣ ಅವರನ್ನು ಭೇಟಿ ಮಾಡಿ ನಾನು ಮತ್ತು ಡಿ.ಕೆ.ಸುರೇಶ್ ಅವರು ಮನವಿ ಮಾಡಿ ಗಮನ ಸೆಳೆದಿದ್ದೇವೆ ಎಂದು ತಿಳಿಸಿದರು.
ಈ ಹಿಂದೆ 3 ಕೋಟಿ ವೆಚ್ಚದ ಕ್ರಿಯಾಯೋಜನೆ ಸಿದ್ದಪಡಿಸಿದ್ದರು, ಅದನ್ನು ಪರಿಷ್ಕರಿಸಿ 5 ಕೋಟಿ ವೆಚ್ಚದಲ್ಲಿ ಅಂಡರ್ ಪಾಸ್ ನಿರ್ಮಾಣಕ್ಕೆ ಕ್ರಮ ವಹಿಸಲಾಗಿದೆ. ಅಲ್ಲಿ ಕೆಲವು ಮನೆಗಳ ಸಮಸ್ಯೆಯಿಂದ ತಡವಾಗಿದೆ, ಶೀಘ್ರವಾಗಿ ಕೆಲಸ ಕೈಗೆತ್ತಿಕೊಳ್ಳಲು ಕ್ರಮ ವಹಿಸಲಾಗುತ್ತಿದೆ ಎಂದರು.
ನಾನು ಶಾಸಕನಾಗಿ ಆಯ್ಕೆಯಾದ ಮೇಲೆ ಪಟ್ಟಣದ ವ್ಯಾಪ್ತಿಯಲ್ಲಿ ಅಭಿವೃದ್ದಿಗೆ ವೇಗ ಸಿಕ್ಕಿದ್ದು, ಸಂಸದರಾಗಿದ್ದ ಡಿ.ಕೆ.ಸುರೇಶ್ ಅವರು ನೀಡಿದ 82 ಕೋಟಿ ರೂ, ಪಟ್ಟಣದ ಉದ್ಯಾನವನ ಅಭಿವೃದ್ದಿಗೆ 157 ಕೋಟಿ ರೂ. ಅಲ್ಪಸಂಖ್ಯಾತ ಅಭಿವೃದ್ದಿ ಇಲಾಖೆ ವತಿಯಿಂದ 12.5 ಕೋಟಿ ಅನುದಾನ ಸೇರಿದಂತೆ ಒಟ್ಟು 300 ಕೋಟಿಯಷ್ಟು ಅಭಿವೃದ್ದಿ ಕೆಲಸಗಳು ಸಾಕಾರವಾಗುತ್ತಿವೆ ಎಂದರು.
ಭಕ್ಷಿ ಕೆರೆ ದುರಸ್ಥಿ ಮತ್ತು ಅಭಿವೃದ್ದಿಗೆ 2 ಕೋಟಿ ಅನುದಾನ ಬಂದಿದ್ದು, ನಮ್ಮ ವಿರೋಧಿಗಳು ಏನೇ ಹೇಳಲಿ ನಾವು ಯಾವುದೇ ವಿಷಯಗಳನ್ನು ಮರೆ ಮಾಚದೆ ಕಳೆದ 25 ವರ್ಷಗಳಿಂದ ನಗದಲ್ಲಿದ್ದ ಜ್ವಲಂತ ಸಮಸ್ಯೆಗಳ ವಸ್ತುಸ್ಥಿತಿಯನ್ನು ಅರ್ಥ ಮಾಡಿಕೊಂಡ್ದು ಅಭಿವೃದ್ದಿಗೆ ವೇಗ ಕೊಡುವ ಕೆಲಸ ಮಾಡುತ್ತಿರುವುದಾಗಿ ತಿಳಿಸಿದರು.
ರಾಮನಗರ ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಎ.ಬಿ.ಚೇತನ್ಕುಮಾರ್, ನಿರ್ದೇಶಕ ಪರ್ವಿಜ್ಪಾಷ, ನಗರಸಭೆ ಆಯುಕ್ತ ಎಲ್.ನಾಗೇಶ್, ಎಇಇ ನರಸಿಂಹರಾಜು, ನಗರಸಭಾ ಸದಸ್ಯರಾದ ಬಿ.ಸಿ.ಪಾರ್ವತಮ್ಮ, ಗಿರಿಜಮ್ಮ, ಅಸ್ಮದ್, ಪೈರೋಜ್, ಆರೀಪ್, ನಿಜಾಂ ಅಹಮದ್ ಷರೀಪ್, ಗ್ಯಾಬ್ರಿಯಲ್, ಗುತ್ತಿಗೆದಾರ ವಾಸು, ಗೋವಿಂದ್, ಯುವ ಕಾಂಗ್ರೆಸ್ ಸಮಿತಿ ಕಾರ್ಯಾಧ್ಯಕ್ಷ ಅನಿಲ್ ಜೋಗಿಂದರ್ ಇತರರು ಇದ್ದರು.
ಪೋಟೋ: ಮೆಹಬೂಬ್ ನಗರದಲ್ಲಿ ಶಾಸಕ ಎಚ್.ಎ.ಇಕ್ಬಾಲ್ ಹುಸೇನ್ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿದರು.