ರಾಮನಗರ : ಮಾಜಿ ಶಾಸಕ ಸಿ.ಪಿ.ಯೋಗೇಶ್ವರ್ ಸ್ಪರ್ಧೆ ಮಾಡದೇ ಈಗಲೂ ನನಗೆ ಬೆಂಬಲ ನೀಡಿದ್ದಾರೆಂಬ ಡಿಕೆ.ಸುರೇಶ್ ಹೇಳಿಕೆ ವಿಚಾರಕ್ಕೆ ಸಂಬಂಧಿಸಿ ಚನ್ನಪಟ್ಟಣದಲ್ಲಿ ಸಿ.ಪಿ.ಯೋಗೇಶ್ವರ್ ತಿರುಗೇಟು ನೀಡಿದ್ದಾರೆ. 5 ವರ್ಷದ ಹಿಂದೆ ನಾನು ಸ್ಪರ್ಧೆ ಮಾಡಿದ್ದರೆ ಡಿ.ಕೆ.ಸುರೇಶ್ ಗೆಲ್ತಿರಲಿಲ್ಲ. ಹಾಗಾಗಿ ಈ ಬಾರಿ ಬುಡಸಮೇತ ತೆಗೆಯಬೇಕು ಅಂತ ಮಂಜುನಾಥ್ ರನ್ನ ತಂದಿದ್ದೇವೆ ಎಂದು ರಾಮನಗರ ಜಿಲ್ಲೆ ಚನ್ನಪಟ್ಟಣದಲ್ಲಿ ಮಾಜಿ ಸಚಿವ ಯೋಗೇಶ್ವರ್ ಹೇಳಿದರು.
ನಾನು ಪಾರ್ಲಿಮೆಂಟ್ಗೆ ಹೋಗಬಾರದೆಂದು ನಿರ್ಧಾರ ಮಾಡಿದ್ದೇನೆ. ರಾಜ್ಯ ರಾಜಕೀಯದಲ್ಲಿ ಇರಬೇಕೆಂದು ನನ್ನ ನಿಲುವು. ಡಿ.ಕೆ.ಸುರೇಶ್ ಹತಾಶೆಯಿಂದ ಮಾತನಾಡ್ತಿದ್ದಾರೆ. ಡಾ.ಸಿ.ಎನ್.ಮಂಜುನಾಥ್ ಅವರ ಬಗ್ಗೆ ಮಾತನಾಡಲು ಅವರಿಗೆ ಯೋಗ್ಯತೆ ಇಲ್ಲ. ಡಾ.ಮಂಜುನಾಥ್ ವಿರುದ್ಧ ಗೆಲುವು ಸುಲಭವಿದ್ದರೆ ಕುಕ್ಕರ್, ಹಣ ಯಾಕೆ ಕೊಡ್ತಿದ್ದರು? ಕಳೆದ ಬಾರಿ ಮುನಿರತ್ನ ಕಾಂಗ್ರೆಸ್ ಪರವಾಗಿದ್ದರು, ಆದರೂ ಬಿಜೆಪಿಗೆ ಅಲ್ಲಿ 30 ಸಾವಿರ ಲೀಡ್ ಇತ್ತು. ಇವತ್ತು ಮುನಿರತ್ನ ಬಿಜೆಪಿಯಲ್ಲಿದ್ದಾರೆ. ಹಾಗಾಗಿ ನಮ್ಮ ಗೆಲುವು ನಿಶ್ಚಿತ. ನಮ್ಮ ದೌರ್ಭಾಗ್ಯ ನಾವು, ಜೆಡಿಎಸ್ ಕಿತ್ತಾಡಿ ಅವರಿಗೆ ಲಾಭ ಆಗಿತ್ತು. ಈಗ ನಾವು, ಜೆಡಿಎಸ್ ನವರು ಒಂದಾಗಿದ್ದೇವೆ. ದೇವೇಗೌಡರು ಬಿಜೆಪಿ ಜೊತೆಗೆ ಒಂದಾಗಿದ್ದಾರೆ ಎಂದರು