ಚನ್ನಪಟ್ಟಣ: ಬೂದಿ ಮುಚ್ಚಿದ ಕೆಂಡದಂತಿದ್ದ ಉಪಚುನಾವಣೆ ವಿಚಾರ, ಚುನಾವಣಾ ದಿನಾಂಕ ನಿಗದಿಯಾಗುತ್ತಿದ್ದಂತೆಯೇ ಇದೀಗ ರಾಜ್ಯದಲ್ಲಿ ಕಾವು ಜೋರಾಗುತ್ತಿದೆ. ಪ್ರತಿಷ್ಠಿತ ಚನ್ನಪಟ್ಟಣದ ಕ್ಷೇತ್ರದಲ್ಲಿ ಮೈತ್ರಿ ಅಭ್ಯರ್ಥಿಯ ಆಯ್ಕೆಯೇ ದೊಡ್ಡ ಸವಾಲಾಗಿದೆ. ಈ ನಡುವೆ ಸಿಪಿ ಯೋಗೇಶ್ವರ್ ಬಂಡಾಯ ಮೈತ್ರಿ ನಾಯಕರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದ್ದಾರೆ. ಎಂಎಲ್ ಎ ಟಿಕೆಟ್ ಕೈ ತಪ್ಪುವ ಭೀತಿ ಎದುರಾಗಿರೋ ಕಾರಣ ಸೈನಿಕ ರೆಬೆಲ್ ಆಗಿದ್ದಾರೆ.
ವಿಧಾನ ಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್ ಬುಧವಾರ ಖಾಸಗಿ ರೆಸಾರ್ಟ್ನಲ್ಲಿ ಬಿಜೆಪಿ ಮುಖಂಡರು, ಕಾರ್ಯಕರ್ತರ ಸಭೆ ಕರೆದಿದ್ದಾರೆ. ಮೈತ್ರಿ ನಾಯಕರಿಗೆ ಟಾಂಗ್ ಕೊಡೋಕೆ ಯೋಗೇಶ್ವರ್ ಗೆ ಬಿಜೆಪಿ ಕೇಂದ್ರ ವರಿಷ್ಠರ ಕಿವಿ ಮಾತಿನ ನಡುವೆಯೂ ತಮ್ಮ ಬೆಂಬಲಿಗರ ಸಭೆ ಕರೆಯುವ ಮೂಲಕ ಬಂಡಾಯದ ಕಹಳೆ ಊದಿದ್ದಾರೆ. ಇತ್ತೀಚಿನ ರಾಜಕೀಯ ಬೆಳವಣಿಗೆಯಿಂದಾಗಿ ಯೋಗೇಶ್ವರ್ ಅಸಮಾಧಾನಗೊಂಡಿದ್ದಾರೆ. ಬಿಜೆಪಿ ನಾಯಕರು ಯೋಗೇಶ್ವರ್ಗೆ ಟಿಕೆಟ್ ಬೇಕು ಎಂದು ಶಿಫಾರಸು ಮಾಡಿದ್ದರೂ, ಕುಮಾರಸ್ವಾಮಿ ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಈ ಬಾರಿ ಕ್ಷೇತ್ರದಲ್ಲಿ ಜೆಡಿಎಸ್ಗೆ ಟಿಕೆಟ್ ಬಿಟ್ಟುಕೊಟ್ಟರೆ ಜಿಲ್ಲೆಯಲ್ಲಿ ಬಿಜೆಪಿ ಸಂಘಟನೆ ಕಷ್ಟ ಎಂದು ಜಿಲ್ಲಾ ಬಿಜೆಪಿ ಘಟಕ ಆತಂಕ ವ್ಯಕ್ತಪಡಿಸಿದೆ.