– ರೈತರ ನಿಯೋಗದಿಂದ ಜಿಲ್ಲಾಧಿಕಾರಿಗಳಿಗೆ ಮನವಿ
– ಬರದ ಸಮಸ್ಯೆಗೆ ಪರಿಹಾರ ಕಲ್ಪಿಸುವಂತೆ ಒತ್ತಾಯ
ಪ್ರತಿನಿಧಿ ವರದಿ ಮೈಸೂರು
ಬರಗಾಲದ ಹಿನ್ನೆಲೆಯಲ್ಲಿ ಸಂಕಷ್ಟದಲ್ಲಿರುವ ರೈತರಿಗೆ ನೆರವಾಗುವ ನಿಟ್ಟಿನಲ್ಲಿ ತುರ್ತು ಕ್ರಮವನ್ನು ಕೈಗೊಳ್ಳುವಂತೆ ರೈತರ ನಿಯೋಗ ಜಿಲ್ಲಾಧಿಕಾರಿಗಳನ್ನು ಮನವಿ ಮಾಡಿದೆ.
ಈ ಸಂಬಂಧ ಜಿಲ್ಲಾಧಿಕಾರಿ ಕೆ.ವಿ.ರಾಜೇಂದ್ರ ಅವರನ್ನು ಗುರುವಾರ ಭೇಟಿಯಾದ ರೈತರ ನಿಯೋಗ, ಬರಗಾಲದ ಹಿನ್ನೆಲೆಯಲ್ಲಿ ರೈತರು ಎದುರಿಸುತ್ತಿರುವ ಸಂಕಷ್ಟದ ಬಗ್ಗೆ ಚರ್ಚೆ ನಡೆಸಿದರು. ಬರದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳು ಜಿಲ್ಲಾಮಟ್ಟದ ಅಧಿಕಾರಿಗಳ ತಂಡ ರಚಿಸಿ ಹಳ್ಳಿಗಳಲ್ಲಿ ವೀಕ್ಷಣೆ ಮಾಡಿ, ಸ್ಥಳದಲ್ಲಿಯೇ ಪರಿಹಾರ ಕ್ರಮಕೈಗೊಳ್ಳಲಾಗುವುದು ಹಾಗೂ ಅವಶ್ಯಕತೆ ಇರುವ ಕಡೆಗಳಲ್ಲಿ ಗೋಶಾಲೆ ಆರಂಭಿಸಿ, ಮೇವು ಬ್ಯಾಂಕ್, ಕುಡಿಯಲು ನೀರು ಪೂರೈಕೆ ಮಾಡುವುದರ ಕುರಿತು ಮನವಿ ಮಾಡಿದರು.
ಬರದಿಂದಾಗಿ ರೈತರು ಸಂಕಷ್ಟಕ್ಕೆ ಸಿಲುಕಿರುವ ಪರಿಣಾಮ ಕಬಿನಿ ಕಾವೇರಿ ನೀರನ್ನು ಅಚ್ಚುಕಟ್ಟು ರೈತರಿಗೆ ಬೆಳೆ ಬೆಳೆಯಲು ನೀಡದೆ ತಮಿಳುನಾಡಿಗೆ ಬಿಟ್ಟಿರುವ ಕಾರಣ ಸಣ್ಣ ರೈತರು ಯಾವುದೇ ಬೆಳೆ ಬೆಳೆಯದೆ ಸಂಕಷ್ಟ ಪಡುತ್ತಿದ್ದಾರೆ. ಬರಗಾಲಕ್ಕೆ ತುತ್ತಾಗಿರುವ ರೈತರಿಗೆ ರಾಜ್ಯ ಸರ್ಕಾರದಿಂದ ಕೇವಲ 2000 ರೂ. ಪರಿಹಾರ ನೀಡಿದ್ದು, ಇದರಿಂದ ಯಾವುದೇ ಸಮಸ್ಯೆ ಪರಿಹಾರವಾಗಿಲ್ಲ. ಇದರ ಜೊತೆಗೆ ಜಿಲ್ಲೆಯ ಬಹುತೇಕ ಕಡೆಗಳಲ್ಲಿರುವ ಕೊಳವೆಬಾವಿಗಳು ನೀರು ಹಿಂಗಿ ಹೋಗಿದೆ. ಆರೇಳು ತಿಂಗಳಿಂದ ಬೆಳೆದಿರುವ ಕಬ್ಬು, ತೆಂಗು, ಬಾಳೆ ಬೆಳೆಗಳು ನೀರಿಲ್ಲದೆ ಒಣಗಿಹೋಗುತ್ತಿದೆ. ಇದು ರೈತರನ್ನು ಇನ್ನಷ್ಟು ಕಂಗಲಾಗಿಸಿದೆ, ಇಂತಹ ರೈತರಿಗೆ ಕೂಡಲೇ ಬರ ನಷ್ಟದ ಪರಿಹಾರ ಕೊಡಿಸಬೇಕು ಎಂದು ರೈತರ ನಿಯೋಗ ಮನವಿ ಮಾಡಿತು.
ಅಲ್ಲದೇ ಕಬಿನಿ, ಕಾವೇರಿ ಅಚ್ಚುಕಟ್ಟು ಭಾಗದ ನಾಲೆಗಳಿಗೆ ದನ, ಕರುಗಳಿಗೆ, ಪ್ರಾಣಿ ಪಕ್ಷಿಗಳಿಗೆ ಕುಡಿಯುವ ನೀರನ್ನು ಕೆರೆಕಟ್ಟೆ ತುಂಬಿಸಲು ನೀರು ಹರಿಸುವಂತೆ ಒತ್ತಾಯ ಮಾಡಿದ್ದರು, ನೀರಾವರಿ ಇಲಾಖೆಯವರು ನಿರ್ಲಕ್ಷತನ ಮಾಡಿದ್ದಾರೆ. ವಿದ್ಯುತ್ ಸಮಸ್ಯೆಯಿಂದ ಕುಡಿಯುವ ನೀರಿಗೂ ತೊಂದರೆಯಾಗುತ್ತಿದೆ. ಕೃಷಿ ಪಂಪ್ಸೆಟ್ಗಳಿಗೆ ಮೂರ್ನಾಲ್ಕು ಗಂಟೆಗಳ ವಿದ್ಯುತ್ ಸಹ ಸಿಗುತ್ತಿಲ್ಲ. ಈ ನಡುವೆ ಬರಗಾಲದಿಂದ ರೈತರು ಸಂಕಷ್ಟಕ್ಕೆ ಸಿಲುಕಿರುವ ನಡುವೆಯೂ ಬೆಳೆಸಾಲ ಪಡೆದ ರೈತರಿಗೆ ಕೆಲವು ಬ್ಯಾಂಕುಗಳು ಸಾಲ ವಸೂಲಾತಿಗಾಗಿ ನೋಟಿಸ್ ನೀಡಿ ರೈತರಿಗೆ ಮಾನಸಿಕ ಕಿರುಕುಳ ನೀಡುತ್ತಿವೆ ಎಂದು ರೈತರ ನಿಯೋಗದ ಸದಸ್ಯರು ತಮ್ಮ ಸಮಸ್ಯೆಗಳನ್ನು ಮುಂದಿಟ್ಟರು.
ಜಾನುವಾರುಗಳಿಗೆ ಉಂಟಾಗಿರುವ ಮೇವಿನ ಕೊರತೆಯಿಂದಾಗಿ ಕಬ್ಬಿನ ಬೆಳೆಯನ್ನೇ ಕಡಿದು ಮೇವಿಗಾಗಿ ಉಪಯೋಗಿಸುತ್ತಿದ್ದಾರೆ. ರೈತರು ತಮ್ಮ ಸಮಸ್ಯೆ ಪರಿಹಾರಕ್ಕಾಗಿ ಸರ್ಕಾರಿ ಕಚೇರಿಗಳಿಗೆ ಹೋದರೆ ಸಂಬಂಧಪಟ್ಟ ಅಧಿಕಾರಿಗಳು ಚುನಾವಣೆ ಕೆಲಸದಲ್ಲಿದ್ದಾರೆ ಎಂದು ಹೇಳುತ್ತಿದ್ದಾರೆ. ಇದರ ನಡುವೆ ಜನಪ್ರತಿನಿಧಿಗಳು ಚುನಾವಣಾ ಕೆಲಸದಲ್ಲಿ ತೊಡಗಿದ್ದು, ಇಂತಹ ಪರಿಸ್ಥಿತಿಯಲ್ಲಿ ರೈತರ ರಕ್ಷಣೆಗೆ ಜಿಲ್ಲಾಡಳಿತ ವಿಶೇಷ ಗಮನಹರಿಸಬೇಕು. ಚುನಾವಣಾ ಕೆಲಸಕ್ಕೆ ಅಧಿಕಾರಿಗಳ ತಂಡವನ್ನು ನೇಮಿಸಿರುವಂತೆ ಬರಗಾಲದ ಸಮಸ್ಯೆಗಳಿಗೆ ತುರ್ತು ಪರಿಹಾರದ ಕ್ರಮಕೈಗೊಳ್ಳಲು ಜಿಲ್ಲಾಮಟ್ಟದ ವಿಶೇಷ ಅಧಿಕಾರಿಗಳ ತಂಡ ರಚಿಸಿ, ಸಮಾರೋಪಾದಿಯಲ್ಲಿ ಕಾರ್ಯನಿರ್ವಹಿಸಬೇಕು ಎಂದು ನಿಯೋಗದ ಸದಸ್ಯರು ಒತ್ತಾಯಿಸಿದರು.
ರೈತರ ನಿಯೋಗದಲ್ಲಿ ರೈತ ಸಂಘಟನೆಗಳ ಒಕ್ಕೂಟದ ರಾಜ್ಯಾಧ್ಯಕ್ಷ ಕುರುಬೂರ್ ಶಾಂತಕುಮಾರ್, ಸಂಘಟನಾ ಕಾರ್ಯದರ್ಶಿ ಅತ್ತಹಳ್ಳಿ ದೇವರಾಜ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬರಡನಪುರ ನಾಗರಾಜ್, ಉಪಾಧ್ಯಕ್ಷ ಮಾರ್ಬಳ್ಳಿ ನೀಲಕಂಠಪ್ಪ, ಕಾಟೂರು ಮಾದೇವಸ್ವಾಮಿ, ಅಂಬಳೆ ಮಂಜುನಾಥ್, ಬನ್ನೂರು ಸೂರಿ, ಮಾರ್ಬಳ್ಳಿ ಬಸವರಾಜ್, ರಾಮಚಂದ್ರ ಕೂಡನಹಳಿ ಸೋಮಣ್ಣ ಇತರರು ಇದ್ದರು.
===================