ಬೆಟ್ಟದಪುರ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಎಂ.ಪ್ರಕಾಶ್ ಎತ್ತಿನಮನಿ ಅಭಿಪ್ರಾಯ
ಪ್ರತಿನಿಧಿ ವರದಿ ಬೆಟ್ಟದಪುರ
ದೇಹ ಮನಸ್ಸು ಅರೋಗ್ಯವಾಗಿ, ಸಮಾಜದ ಸ್ವಾಸ್ತ್ಯ ಕಾಪಾಡಲು ವ್ಯಸನಮುಕ್ತ ಜೀವನ ರೂಪಿಸಿಕೊಳ್ಳಬೇಕು ಎಂದು ಬೆಟ್ಟದಪುರ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಎಂ.ಪ್ರಕಾಶ್ ಎತ್ತಿನಮನಿ ಹೇಳಿದರು.
ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ ಬೆಟ್ಟದಪುರ ಪೊಲೀಸ್ ವತಿಯಿಂದ ಬುಧವಾರ ಆಯೋಜಿಸಿದ ಮಾದಕ ದ್ರವ್ಯ ವ್ಯಸನಿ ವಿರೋಧಿ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಇಂದಿನ ಯುವ ಜನಾಂಗ ಮಧ್ಯಪಾನ, ತಂಬಾಕು ಬಳಕೆ, ಗಾಂಜಾ, ಕೋಕೆನ್, ಓಪಿಯಂ, ಹೆರಾಯಿನ್, ನಿದ್ರೆ ಮಾತ್ರೆ ಸೇರಿದಂತೆ ಮುಂತಾದ ಮಾದಕ ದ್ರವ್ಯಗಳ ವ್ಯಸನಿಗಳಾಗುತ್ತಿದ್ದು, ಸುಂದರ ಬದುಕನ್ನು ನರಕ ಸದೃಶವಾಗಿಸಿಕೊಂಡು ಜೀವನ ಹಾಳು ಮಾಡಿಕೊಳ್ಳುತ್ತಿದ್ದಾರೆ. ಆದ್ದರಿಂದ ಮಕ್ಕಳು ಮಾದಕ ದ್ರವ್ಯ ಸೇವನೆಯ ದುಷ್ಪರಿಣಾಮ ಅರಿತು ಆದರ್ಶಮಯ ಜೀವನ ನಡೆಸಿಕೊಳ್ಳಬೇಕು ಎಂದರು.
ಪೊಲೀಸ್ ಇಲಾಖೆ, ಆರೋಗ್ಯ ಇಲಾಖೆ ಸಿಬ್ಬಂದಿಗಳು ಹಾಗೂ ಶಾಲಾ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ರಸ್ತೆಗಳಲ್ಲಿ ಜಾಥಾ ನಡೆಸಿ ಬೆಟ್ಟದಪುರ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಸಾರ್ವಜನಿಕರೊಂದಿಗೆ ಪ್ರತಿಜ್ಞಾ ವಿಧಿ ಸ್ವೀಕರಿಸಿದರು.
ಸಬ್ ಇನ್ಸ್ಪೆಕ್ಟರ್ ಸ್ವಾಮಿನಾಯಕ, ಸಿಬ್ಬಂದಿ ನಯೀಮ್, ರವೀಶ್, ಆರೋಗ್ಯ ಇಲಾಖೆಯ ಚನ್ನಮ್ಮ, ದೇವಕಿ, ಕುಸುಮಾ, ಮಂಜು, ಶಿಕ್ಷಕರಾದ ಸೋಮಯ್ಯನಾಯಕ್, ಗೊರಳ್ಳಿ ಜಗದೀಶ್, ಆಲನಹಳ್ಳಿ ಕೆಂಪರಾಜು, ಮಮತಾ ನಾಯಕ್, ಬಿ.ಎನ್.ಜ್ಯೋತಿ, ಅವಿನಾಶ್, ಕಾವ್ಯ, ಅಲ್ಸಾ, ಇಂದ್ರಮ್ಮ ಇದ್ದರು.