ಬೇಲೂರು : ಪಟ್ಟಣದ ಡಾ.ಅಂಬೇಡ್ಕರ್ ಭವನದ ಪಕ್ಕದಲ್ಲಿರುವ ಕೋಳಿ ಅಂಗಡಿಗಳನ್ನು ದಲಿತ ಸಂಘಟನೆಯ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಬಂದ್ ಮಾಡಿಸಿದರು.
ಕಳೆದ ೧೫ ದಿನಗಳ ಹಿಂದೆ ಪುರಸಭೆಯ ಮುಖ್ಯಾಧಿಕಾರಿ ಇಂದು ನೇತೃತ್ವದಲ್ಲಿ ಕೋಳಿ ಅಂಗಡಿಗಳನ್ನು ತೆರವುಗೊಳಿಸಿ ಬೀಗಿ ಮುದ್ರೆ ಹಾಕಲಾಗಿತ್ತು. ಆದರೆ ಬಂದ್ ಆಗಿರುವ ಕೋಳಿ ಅಂಗಡಿಗಳನ್ನು ಮಾಲೀಕ ಬುಧವಾರ ಬೆಳಗ್ಗೆ ತೆರೆಯಲು ಮುಂದಾದಾಗ ನೂರಾರು ದಲಿತ ಯುವಕರು ಜಮಾಯಿಸಿ ಯಾವುದೇ ಕಾರಣಕ್ಕೂ ಕೋಳಿ ಅಂಗಡಿಗಳನ್ನು ತೆರೆಯದಂತೆ ತಾಕೀತು ಮಾಡಿದರು.
ಪಟ್ಟಣದ ಅಂಬೇಡ್ಕರ್ ಭವನದ ಪಕ್ಕದಲ್ಲಿರುವ ಕೋಳಿ ಅಂಗಡಿಗಳನ್ನು ತೆರೆದರೆ ಯಾವುದೇ ಸಂಘರ್ಷಕ್ಕೂ ಸಿದ್ದ ಎಂದು ದಲಿತ ಸಂಘಟನೆಯ ಮುಖಂಡ ಶಂಭುಗನಹಳ್ಳಿ ಬಾಬು ಎಚ್ಚರಿಕೆ ನೀಡಿದರು.
ನಂತರ ಕರವೇ ತಾಲೂಕು ಅಧ್ಯಕ್ಷ ಚಂದ್ರಶೇಖರ್ ಮಾತನಾಡಿ, ಹತ್ತಾರು ವರ್ಷಗಳಿಂದ ಅಂಬೇಡ್ಕರ್ ಭವನದ ಮುಂದೆ ಕೋಳಿ ಅಂಗಡಿಗಳು ನಡೆಯುತ್ತಿದ್ದರೂ ಪುರಸಭೆಯಲ್ಲಿ ದಲಿತ ಮುಖಂಡರೇ ಆಡಳಿತ ನಡೆಸಿದ್ದರೂ ಸಹ ಕೋಳಿ ಅಂಗಡಿ ತೆರವುಗೊಳಿಸುವಲ್ಲಿ ವಿಫಲವಾಗಿದ್ದರು. ಆದರೆ ಸ್ಥಳೀಯ ಶಾಸಕ ಹುಲ್ಲಳ್ಳಿ ಸುರೇಶ್ ಹಾಗೂ ಮುಖ್ಯಾಧಿಕಾರಿ ಅವರುಗಳ ದಿಟ್ಟ ನಿಲುವಿನಿಂದ ಅಂಗಡಿಗಳನ್ನು ತೆರವುಗೊಳಿಸಲಾಗಿದೆ.
ಈ ಹಿಂದೆ ಬದಲಿ ವ್ಯವಸ್ಥೆಯಾಗಿ ಮಳಿಗೆಗಳನ್ನು ಮಾಡಿಕೊಟ್ಟಿದ್ದರೂ ಸಹ ಅಲ್ಲಿಗೆ ಇವರು ಹೋಗಲಿಲ್ಲ ಈಗ ಕೆಲವು ಪ್ರಭಾವಿ ನಾಯಕರು ಎನಿಸಿಕೊಂಡಿರುವವರು ಕೋಳಿ ಅಂಗಡಿ ಮಾಲೀಕರರೊಂದಿಗೆ ಶಾಮೀಲಾಗಿ ಪುನಃ ಅಂಗಡಿ ತೆರೆಲು ಹುನ್ನಾರ ನಡೆಸುತ್ತಿದ್ದು, ಏನೇ ಆದರೂ ನಾವುಗಳು ಕೋಳಿ ಅಂಗಡಿ ತೆರೆಯಲು ಬಿಡುವುದಿಲ್ಲ ಎಂದು ಎಚ್ಚರಿಸಿದರು.
ಪುರಸಭೆ ಮುಖ್ಯ ಅಧಿಕಾರಿ ಮಾತನಾಡಿ, ಕೋಳಿ ಅಂಗಡಿಗಳನ್ನು ಸಾರ್ವಜನಿಕರ ಹಿತದೃಷ್ಟಿಯಿಂದ ಬಂದ್ ಮಾಡಲಾಗಿದ್ದು, ಯಾವುದೇ ಅನುಮತಿ ಇಲ್ಲದೆ ಅಂಗಡಿ ಮಾಲೀಕನೋರ್ವ ಅಂಗಡಿ ಬಾಗಿಲು ತೆರೆದಿರುವುದು ಕಾನೂನು ಬಾಹಿರವಾಗಿದೆ. ಅವರ ಮೇಲೆ ದೂರು ನೀಡಲಾಗುವುದು ಹಾಗೂ ನ್ಯಾಯಾಲಯದಿಂದ ಯಾವುದೇ ನಿರ್ದೇಶನ ನಮಗೆ ಬಂದಿಲ್ಲ ಎಂದರು.
ಮುಖಂಡರಾದ ಪರ್ವತಯ್ಯ, ಮಂಜುನಾಥ್, ಎಂ ಜೆ ವೆಂಕಟೇಶ್ , ಮಹೇಶ್, ಕುಮಾರ್ ಹಾಜರಿದ್ದರು.