ಪ್ರತಿನಿಧಿ ವರದಿ ಮದ್ದೂರು
ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ವೆಂಕಣರಮಣೇಗೌಡ ಸ್ಟಾರ್ ಚಂದ್ರು ಅವರನ್ನು ಅಧಿಕ ಮತಗಳ ಅಂತರದಿಂದ ಗೆಲ್ಲಿಸುವುದರ ಮೂಲಕ ಮಂಡ್ಯದ ಹಿರಿಮೆಯನ್ನು ಉಳಿಸಬೇಕೆಂದು ಚಿತ್ರನಟ ದರ್ಶನ್ ಕರೆಕೊಟ್ಟರು.
ತಾಲೂಕಿನ ಕೊಪ್ಪದಲ್ಲಿ ಸೋಮವಾರ ನಡೆದ ಲೋಕಸಭಾ ಚುನಾವಣೆಯ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾದ ಸ್ಟಾರ್ ಚಂದ್ರು ಪರ ಹಮ್ಮಿಕೊಳ್ಳಲಾಗಿದ್ದ ಪ್ರಚಾರ ಸಭೆಯಲ್ಲಿ ಮಾತನಾಡಿದರು. ತೆರೆಯ ಹಿಂದೆ ಇಲ್ಲಿರುವ ಕೆಲವು ನಾಯಕರು ನನಗೆ ಈ ಹಿಂದೆ ಮಾಡಿದ ಸಹಾಯವನ್ನು ಹಾಗೂ ಋಣವನ್ನು ಈ ಜನ್ಮದಲ್ಲಿ ತೀರಿಸಲು ಆಗುವುದಿಲ್ಲ. ಆದ್ದರಿಂದ, ಅವರಿಗೋಸ್ಕರ ಚುನಾವಣಾ ಪ್ರಚಾರಕ್ಕಾಗಿ ಆಗಮಿಸಿದ್ದೇನೆ ಎಂದ ಅವರು ಸ್ಟಾರ್ ಚಂದ್ರು ಅವರನ್ನು ಗೆಲ್ಲಿಸಬೇಕೆಂದು ಅವರ ಅಭಿಮಾನಿಗಳಿಗೆ ಮನವಿ ಮಾಡಿದರು.
ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಮಾತನಾಡಿ, ರಾಜ್ಯ ಸರ್ಕಾರವು ಮಹಿಳೆಯರಿಗೆ ಹಾಗೂ ಬಡವರ, ಜನ ಸಾಮಾನ್ಯರ ಅಭಿವೃದ್ಧಿಗಾಗಿ ಜಾರಿಗೆ ತಂದಿರುವ 5 ಗ್ಯಾರಂಟಿ ಯೋಜನೆಗಳಿಗೆ ರಾಜ್ಯದ ಹಾಗೂ ಜಿಲ್ಲೆಯ ಜನತೆ ಹರಸುವುದರ ಮೂಲಕ ಅಭಿಮಾನವಿಟ್ಟು ಸ್ಟಾರ್ ಚಂದ್ರು ಅವರನ್ನು ಭಾರಿ ಬಹುಮತಗಳಿಂದ ಗೆಲ್ಲಿಸುವುದರ ಮೂಲಕ ಬೆಂಬಲಿಸುವ ಭರವಸೆ ಇದೆ ಎಂದರು.
ಶಾಸಕರಾದ ಕೆ.ಎಂ.ಉದಯ್, ಗಣಿಗ ರವಿಕುಮಾರ್, ವಿಧಾನ ಪರಿಷತ್ ಮಾಜಿ ಸದಸ್ಯ ಅಪ್ಪಾಜಿಗೌಡ, ನಾಗಮಂಗಲ ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಎನ್.ದಿವಾಕರ್, ತಾಪಂ ಮಾಜಿ ಅಧ್ಯಕ್ಷೆ ಲಕ್ಷ್ಮೀ ಚನ್ನರಾಜು, ತಾಪಂ ಮಾಜಿ ಉಪಾಧ್ಯಕ್ಷರಾದ ರಾಮಚಂದ್ರು, ಬೆಕ್ಕಳಲೆ ರಘು, ಮುಖಂಡರಾದ ಕುಮಾರ್ ಕೊಪ್ಪ, ಸಿ.ಎಂ.ಕ್ರಾಂತಿಸಿಂಹ, ಚಿಕ್ಕೊನಹಳ್ಳಿ ತಮ್ಮಯ್ಯ, ಪರ್ವಿಜ್ ಇದ್ದರು.
ಪೋಟೋ
ಮದ್ದೂರು ತಾಲೂಕಿನ ಕೊಪ್ಪದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಚಂದ್ರು ಪರ ಚಿತ್ರನಟ ದರ್ಶನ್ ಚುನವಣಾ ಪ್ರಚಾರ ಮಾಡಿದರು. ಎನ್.ಚಲುವರಾಯಸ್ವಾಮಿ, ಕೆ.ಎಂ.ಉದಯ್, ರವಿ ಗಣಿಗ, ಅಪ್ಪಾಜಿಗೌಡ, ಕೆ.ಎನ್.ದಿವಾಕರ್ ಇದ್ದರು.
————