ಪ್ರತಿನಿಧಿ ವರದಿ ಮಂಡ್ಯ
ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯು ಈ ಬಾರಿ ಲೋಕ ಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುವ ತೀರ್ಮಾನ ತೆಗೆದುಕೊಂಡಿದೆ ಎಂದು ಸಮಿತಿಯ ರಾಜ್ಯ ಸಂಘಟನಾ ಸಂಚಾಲಕ ಕೆಂಪಯ್ಯ ಸಾಗ್ಯ ತಿಳಿಸಿದರು.
ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುವ ತೀರ್ಮಾನವನ್ನು ಸಂಘಟನೆಯು ತೆಗೆದುಕೊಂಡಿದ್ದು, ಅದೇ ರೀತಿಯಲ್ಲಿ ಮಂಡ್ಯದಲ್ಲಿಯೂ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಸ್ಟಾರ್ ಚಂದ್ರು ಅವರನ್ನು ಬೆಂಬಲಿಸುವಂತೆ ಸುದ್ದಿಗೋಷ್ಠಿಯಲ್ಲಿ ಮನವಿ ಮಾಡಿದರು.
ವಿಶ್ವವಿಜ್ಞಾನಿ ಡಾ.ಬಿ.ಆರ್.ಅಂಬೇಡ್ಕರ್ ಅವರಿಗೆ ಸಂವಿಧಾನ ರಚಿಸಲು ಐತಿಹಾಸಿಕ ಅವಕಾಶ ಒದಗಿದ ಹಿನ್ನೆಲೆಯಲ್ಲಿ ಸಮಸಮಾಜ ತರಲು ಸರ್ವರಿಗೂ ಸಮಪಾಲು ಸರ್ವರಿಗೂ ಸಮಬಾಳು ನಿರ್ಮಾಣ ಮಾಡಲು, ಭಾರತ ಸಂವಿಧಾನ ರಚಿಸಿ ಜಾರಿಗೊಳಿಸಿದ್ದರು. ಆದರೆ ದಲಿತರು, ಆದಿವಾಸಿಗಳು, ಹಿಂದುಳಿದ ವರ್ಗಗಳು, ಮಹಿಳೆಯರು, ರೈತರು, ಅಲ್ಪಸಂಖ್ಯಾತರು ಹಾಗೂ ಕೃಷಿ ಕಾರ್ಮಿಕರು ತಲೆ ಎತ್ತಿ ನಿಲ್ಲುವ ಸಮಯದಲ್ಲಿ ಮನುವಾದಿ ಆರ್ಎಸ್ಎಸ್ ಮುಖವಾಣಿ ಬಿಜೆಪಿ ರಾಜ್ಯಾಧಿಕಾರದ ಮೂಲಕ ಈ ಎಲ್ಲ ಭಾರತೀಯರ ಬದುಕಿಗೆ ಕಂಟಕವಾಗಿ ನಿಂತಿದೆ. ಆದ್ದರಿಂದ ಲೋಕಸಭಾ ಚುನಾವಣೆಯಲ್ಲಿ ಭ್ರಷ್ಟ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿರುವ ಜೆಡಿಎಸ್ ತಿರಸ್ಕರಿಸಿ, ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುವಂತೆ ತಿಳಿಸಿದರು.
ಸಂಘಟನೆಯ ರಾಮಾನಂದ ತರೀಕೆರೆ, ಸೋಮಶೇಖರ, ಚಂದ್ರಶೇಖರ, ಸುರೇಶ ಉಪಸ್ಥಿತರಿದ್ದರು.