ದಸರಾ ಸಮಿತಿ ಮಂಡಿಸಿದ ಲೆಕ್ಕ ಪಕ್ಕ ಇಲ್ಲ ಎಂಬ ಆರೋಪ । ಹಣಕಾಸಿನ ವ್ಯವಹಾರದ ನಿಯಂತ್ರಣ ಹೆಚ್ಚುವರಿ ಜಿಲ್ಲಾಧಿಕಾರಿ ಹೆಗಲಿಗೆ
ಅಜ್ಜಮಾಡ ರಮೇಶ್ ಕುಟ್ಟಪ್ಪ ಮಡಿಕೇರಿ
ಜನೋತ್ಸವ ಮಡಿಕೇರಿ ದಸರಾ ಈ ಬಾರಿ ಜಿಲ್ಲಾಧಿಕಾರಿ ವೆಂಕಟ್ರಾಜ್ ನಿಯಂತ್ರಣದಲ್ಲಿ ನಡೆಯಲಿದೆ. ನಗರಸಭೆ ಅಧ್ಯಕ್ಷ ಸ್ಥಾನ ಖಾಲಿ ಇರುವುದರಿಂದ ಮಡಿಕೇರಿ ನಗರ ದಸರಾ ಸಮಿತಿ ಅಧ್ಯಕ್ಷರಾಗಿ ಜಿಲ್ಲಾಧಿಕಾರಿ ಜವಾಬ್ದಾರಿ ನಿರ್ವಹಿಸಲಿದ್ದಾರೆ.
ಕಳೆದ ದಸರಾಕ್ಕೆ ಸಂಬಂಧಿಸಿದ್ದಂತೆ ದಸರಾ ಸಮಿತಿ ಮಂಡಿಸಿದ ಲೆಕ್ಕ ಪಕ್ಕ ಇಲ್ಲ ಎಂಬ ಕಾರಣಕ್ಕಾಗಿ ಸಮಿತಿ ಸಭೆಯಲ್ಲಿ ಒಪ್ಪಿಗೆ ಸಿಗಲಿಲ್ಲ. ಲೆಕ್ಕದ ಬಗ್ಗೆ ಅನುಮಾನ ವ್ಯಕ್ತವಾಗುತ್ತಿರುವುದರಿಂದ ಈ ಬಾರಿ ಹೆಚ್ಚುವರಿ ಜಿಲ್ಲಾಧಿಕಾರಿಗೆ ಹಣಕಾಸಿನ ವ್ಯವಹಾರದ ನಿಯಂತ್ರಣ ಒಪ್ಪಿಸಲು ಜಿಲ್ಲಾಧಿಕಾರಿ ಮುಂದಾಗಿದ್ದಾರೆಂಬ ಮಾಹಿತಿ ಲಭ್ಯವಾಗಿದೆ.
ಕರಗ ಉತ್ಸವದೊಂದಿಗೆ ಅ.೩ ರಿಂದ ಮಡಿಕೇರಿ ದಸರಾ ಉತ್ಸವ ಪ್ರಾರಂಭವಾಗಲಿದೆ. ೧೨ ರಂದು ರಾತ್ರಿ ದಶಮಂಟಪಗಳ ಶೋಭಾಯಾತ್ರೆಯೊಂದಿಗೆ ದಸರಕ್ಕೆ ತೆರೆಬೀಳಲಿದೆ. ದಸರಾ ಪ್ರಾರಂಭವಾಗಲು ಕೆಲವೇ ದಿನ ಇದ್ದರೂ, ದಸರಾ ಸಮಿತಿ ಕಚೇರಿ ಕಾರ್ಯಾರಂಭವಾಗಿಲ್ಲ. ಪ್ರತಿವರ್ಷ ಗಣಪತಿ ಹೋಮ ಮಾಡುವುದರ ಮೂಲಕ ಕಚೇರಿ ಪ್ರವೇಶ ಪ್ರಕ್ರಿಯೆ ನಡೆಯುತ್ತದೆ. ಆದರೆ, ಗಣಪತಿ ಹೋಮಕ್ಕೆ ಹಣ ಕೊಡುವವರು ಯಾರೆಂದು ಅಧಿಕಾರಿ ಪ್ರಶ್ನಿಸಿರುವುದರಿಂದ ದಸರಾ ಸಮಿತಿ ಪ್ರಮುಖರು ತಮ್ಮ ಕೈಯಿಂದಲೇ ಹಣ ಹಾಕಿ, ಗಣಪತಿ ಹೋಮ ಮಾಡಲು ಮುಂದಾಗಿದ್ದಾರೆ.
ವೇದಿಕೆ, ಶಾಮಿಯಾನ, ಅಲಂಕಾರಕ್ಕೆಂದು ಬರೋಬರಿ ೪೦.೬೮ ಲಕ್ಷ ರೂ. ವೆಚ್ಚ ಮಾಡಲಾಗಿದೆ. ಈ ಹಣದ ಪೈಕಿ ೩.೯೫ ಲಕ್ಷ ರೂ. ಪಾವತಿಗೆ ಬಾಕಿ ಇದೆ. ಇದೀಗ ಜಿಲ್ಲಾಧಿಕಾರಿ ಸಮಿತಿ ಅಧ್ಯಕ್ಷರಾಗಿರುವುದರಿಂದ ಬಾಕಿ ಮೊತ್ತ ಸಿಗುವ ಸಾಧ್ಯತೆ ವಿರಳ. ಅಧಿಕಾರಿಗಳ ನಿಯಂತ್ರಣದಲ್ಲಿ ದಸರಾ ಉತ್ಸವ ವೈಭವ ಕಳೆದುಕೊಳ್ಳುವ ಆತಂಕವೂ ಎದುರಾಗಿದೆ. ದಸರಾ ಸಮಿತಿ ಪ್ರಮುಖರು ಹಾಗೂ ಅಧಿಕಾರಿಗಳು ಒಂದಾಗಿ ಜವಾಬ್ದಾರಿ ನಿರ್ವಹಿಸುವುದರ ಮೂಲಕ ಜನೋತ್ಸವ ಅರ್ಥಪೂರ್ಣಗೊಳ್ಳುವಂತೆ ಮಾಡಬೇಕಾಗಿದೆ.
ಆಮಂತ್ರಣ ಪತ್ರಿಕೆ- ಸ್ಮರಣಿಕೆ ದುಬಾರಿ: ಆಮಂತ್ರಣ ಪತ್ರಿಕೆ ಹಾಗೂ ಸ್ಮರಣಿಕೆ ಸಂಬಂಧಿಸಿದ್ದಂತೆ ದುಬಾರಿ ವೆಚ್ಚ ಮಾಡಿರುವುದು ಮಡಿಕೇರಿ ನಗರ ದಸರಾ ಸಮಿತಿಯ ಹಳೆಯ ಲೆಕ್ಕಚಾರದಿಂದ ಬಹಿರಂಗಗೊಂಡಿದೆ. ಸ್ಮರಣಿಕೆಗೆ ಸಂಬಂಧಿಸಿದ್ದಂತೆ ಇಲಾಖೆ ಹಾಗೂ ಮಡಿಕೇರಿ ನಗರ ದಸರಾ ಸಮಿತಿ ಕೂಡ ಖರ್ಚು ವೆಚ್ಚ ತೋರಿಸಿದೆ. ಒಟ್ಟು ೨,೯೫,೮೮೦ ರೂ. ವೆಚ್ಚವಾಗಿರುವ ಲೆಕ್ಕ ತೋರಿಸಲಾಗಿದೆ. ಸ್ಮರಣಿಕೆಗೆ ಇಲಾಖೆಯಿಂದ ೧,೩೧,೬೪೦, ದಸರಾ ಸಮಿತಿಯಿಂದ ೧,೩೯,೪೪೦ ಹಾಗೂ ಕವಿಗೋಷ್ಠಿ ಸಮಿತಿ ೨೪,೮೦೦ ರೂ. ಖರ್ಚು ಮಾಡಿದೆ.
ಕವಿಗೋಷ್ಠಿ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಗೆ ೨೫,೨೦೦ ರೂ. ಖರ್ಚು ಮಾಡಿರುವ ಲೆಕ್ಕ ತೋರಿಸಲಾಗಿದೆ. ದಸರಾ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಗೆ ೩೧,೩೬೦ ರೂ. ಹಾಗೂ ಮತ್ತೊಂದು ಆಮಂತ್ರಣ ಪತ್ರಿಕೆಗೆ ೧೮,೧೦೦ ರೂ. ಖರ್ಚು ಮಾಡಿರುವ ಲೆಕ್ಕ ತೋರಿಸಲಾಗಿದೆ. ಆಮಂತ್ರಣ ಪತ್ರಿಕೆ ಮುದ್ರಣಕ್ಕೆ ೭೪,೬೬೦ ರೂ. ವೆಚ್ಚ ಮಾಡಿರುವುದು ಸೋಜಿಗದ ವಿಚಾರ.
ಅತಿಥಿಗಳು, ಗಣ್ಯರು, ಅತಿಥಿಗಳು ಸೇರಿದ್ದಂತೆ ಆಯ್ದವರಿಗೆ ಮಾತ್ರ ಆಹ್ವಾನ ಪತ್ರಿಕೆ ನೀಡುವುದು ವಾಡಿಕೆ. ಗರಿಷ್ಠ ೫೦೦ ಆಮಂತ್ರಣ ಪತ್ರಿಕೆ ಮುದ್ರಿಸಲಾಗುತ್ತದೆ. ಹೆಚ್ಚುವರಿ ಬೇಕಾದ್ದಲ್ಲಿ ೨೦೦ ಆಮಂತ್ರಣ ಪತ್ರಿಕೆ ಮುದ್ರಿಸಲಾಗುತ್ತದೆ. ಕವಿಗೋಷ್ಠಿ ಆಮಂತ್ರಣ ಪತ್ರಿಕೆಗೆ ೨೫,೨೦೦ ರೂ. ವೆಚ್ಚವಾಗಿರುವ ಸಾಧ್ಯತೆಯೇ ಇಲ್ಲ. ಈ ಹಿನ್ನೆಲೆಯಲ್ಲಿ ದಸರಾ ಲೆಕ್ಕ ಪಕ್ಕ ಇಲ್ಲ ಎಂಬ ಅನುಮಾನ ದಟ್ಟವಾಗಿ ಕಾಡಲಾರಂಭಸಿದೆ.
ಊಟದ ವೆಚ್ಚ: ವಿಜಯದಶಮಿತಿಯಂದು ಊಟಕ್ಕೆಂದು ೯೦ ಸಾವಿರ ರೂ. ಹಾಗೂ ಆಯುಧ ಪೂಜೆಯಂದು ಊಟಕ್ಕೆ ೬೦ ಸಾವಿರ ರೂ. ಬಿಲ್ ಮಾಡಲಾಗಿದೆ. ಆಯುಧ ಪೂಜೆ ಹಾಗೂ ವಿಜಯದಶಮಿಯಂದು ಅತಿಥಿಗಳ ಊಟಕ್ಕೆ ೨೫ ಸಾವಿರ ರೂ. ಬಿಲ್ ಮಾಡಲಾಗಿದೆ. ಕಾವೇರಿ ಕಲಾಕ್ಷೇತ್ರ ಮತ್ತು ಅಧ್ಯಕ್ಷರ ಕೊಠಡಿಯಲ್ಲಿ ನಡೆದ ಸಭೆಗಳಿಗೆ ಕಾಫಿ, ತಿಂಡಿ ತರಿಸಿದ್ದಕ್ಕೆ ೧೦,೬೧೫ ರೂ. ಬಿಲ್ ಮಾಡಲಾಗಿದೆ. ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸಭೆಗೆ ಕಾಫಿ, ತಿಂಡಿ ತರಿಸಿದ ಖರ್ಚಿಗೆ ೬,೭೦೦ ರೂ. ಬಿಲ್ ಮಾಡಲಾಗಿದೆ. ಬೆಂಗಳೂರಿಗೆ ೩ ಬಾರಿ ನಿಯೋಗ ತೆರಳಿದಕ್ಕೆ ವಾಹನ ಖರ್ಚು ಎಂದು ೮೦ ಸಾವಿರ ರೂ. ಬಿಲ್ ಮಾಡಲಾಗಿದೆ.
======
೫.೨೦ ಲಕ್ಷ ಬಾಕಿ: ಕಳೆದ ವರ್ಷದ ಖರ್ಚಿಗೆ ಸಂಬಂಧಿಸಿದ್ದಂತೆ ಒಟ್ಟು ೫.೨೦ ಲಕ್ಷ ರೂ. ಬಿಲ್ ಪಾವತಿಗೆ ಬಾಕಿ ಇದೆ ಎಂದು ಲೆಕ್ಕ ತೋರಿಸಲಾಗಿದೆ. ಆಯುಧ ಪೂಜೆ ದಿನ ಪ್ರಖ್ಯಾತ ಗಾಯಕ ವಿಜಯ ಪ್ರಕಾಶ್ ನೇತೃತ್ವದ ಕಾರ್ಯಕ್ರಮ ಹಾಗೂ ಯುವ ದಸರಾ ದಿನದ ಸಂಗೀತ ಕಾರ್ಯಕ್ರಮಕ್ಕೆ ಇನ್ಸ್ಟುಮೆಂಟ್ ಅಳವಡಿಸಿದಕ್ಕೆ ಮರ್ಕರ ಪರ್ಸ್ ಲೋಕೇಶ್ಗೆ ೩.೯೫ ಲಕ್ಷ ರೂ. ಪಾವತಿಗೆ ಬಾಕಿ ಇದೆ. ಮಡಿಕೇರಿ ನಗರ ದಸರಾ ಸಮಿತಿ ಅಧ್ಯಕ್ಷೆಯಾಗಿದ್ದ ಅನಿತಾ ಪೂವಯ್ಯ ಅವರಿಗೆ ಇತರೆ ಖರ್ಚಿಗೆ ೮೭ ಸಾವಿರ ರೂ. ನೀಡಲು ಬಾಕಿ ಇದೆ ಎಂದು ಲೆಕ್ಕ ತೋರಿಸಲಾಗಿದೆ. ಅಧ್ಯಕ್ಷೆಗೆ ಇಷ್ಟೊಂದು ಹಣ ಬಾಕಿ ನೀಡಲು ಏನಿದೆ ಎಂಬ ಪ್ರಶ್ನೆ ದಸರಾ ಸಮಿತಿ ಸಭೆಯಲ್ಲಿ ವ್ಯಕ್ತವಾಯಿತು. ಕುರ್ಚಿ, ಮೇಜು ಅಳವಡಿಸಿದ್ದಕ್ಕೆ ಸ್ವಾಗತ್ ಲೋಕೇಶ್ಗೆ ೨೮ ಸಾವಿರ ರೂ., ಫೋಟೋ ಆಲ್ಬಮ್ಗೆ ದೀಪಕ್ಗೆ ೧೦ ಸಾವಿರ ರೂ. ನೀಡಲು ಬಾಕಿ ಇದೆ.
======
೯.೫೭ ಲಕ್ಷ ರೂ. ದೇಣಿಗೆ: ಮಡಿಕೇರಿ ನಗರ ದಸರಾ ಸಮಿತಿ ಒಟ್ಟು ೯.೫೭ ಲಕ್ಷ ರೂ. ದೇಣಿಗೆ ಸಂಗ್ರಹಿಸಿದ ಲೆಕ್ಕ ತೋರಿಸಿದೆ. ಲಾಲಿ ಪೆಟಲ್ಸ್ ೧ ಲಕ್ಷ ರೂ., ಸಂಕಲ್ಪ ಕನ್ಸಟ್ರಕ್ಷನ್ ೨೫ ಸಾವಿರ ರೂ., ಜೆ.ಪಿ.ಸುಧಾಕರ್ ೫೦ ಸಾವಿರ ರೂ., ಸಿದ್ದಾರ್ಥ ರೆಸೊ ೧ ಲಕ್ಷ ರೂ., ಇಬ್ಬನಿ ಸ್ಪಾ ರೆಸಾರ್ಟ್ ೧೦ ಸಾವಿರ ರೂ., ಕೃಷ್ಣರಾಜ ೧೦ ಸಾವಿರ ರೂ., ಸ್ಕೈ ಗೋಲ್ಡ್ ೫೦ ಸಾವಿರ ರೂ., ಮಹೀಂದ್ರ ರೆಸಾರ್ಟ್ ೧೦ ಸಾವಿರ ರೂ., ಕೊಡಗು ರಿಟೈಲ್ಸ್ ಪ್ರೈ ವೇಟ್ ಲಿಮಿಟೆಡ್ ೧ ಲಕ್ಷ ರೂ., ಹಟ್ಟಿ ರೆಸಾರ್ಟ್ ೧೫ ಸಾವಿರ ರೂ. ದೇಣಿಗೆ ಸಂಗ್ರಹಿಸಿದೆ. ಐಸ್ಕ್ರಿಮ್ ಮತ್ತು ಅಂಗಡಿ ಮಳಿಗೆ ಹರಾಜಿನಿಂದ ೧.೯೨ ಲಕ್ಷ ರೂ., ಸಣ್ಣ ಪುಟ್ಟ ಮೊತ್ತ ಸೇರಿದ್ದಂತೆ ಇತರೆ ೨.೬೫ ಲಕ್ಷ ರೂ. ಸಂಗ್ರಹವಾಗಿದೆ ಎಂದು ಲೆಕ್ಕ ತೋರಿಸಲಾಗಿದೆ.
======
ಇ-ಟೆಂಡರ್: ಪ್ರಥಮ ಬಾರಿಗೆ ಮಡಿಕೇರಿ ದಸರಾ ಉತ್ಸವಕ್ಕೆ ಅಗತ್ಯ ಸೇವೆ ಒದಗಿಸಲು ಇ-ಟೆಂಡರ್ ಕರೆಯಲಾಗಿದೆ. ಬಹುತೇಕ ವರ್ಷ ಸ್ಥಳೀಯರೇ ಗುತ್ತಿಗೆ ಜವಾಬ್ದಾರಿ ನಿರ್ವಹಿಸುತ್ತಿದ್ದರು. ಹೊರಗಿನ ಗುತ್ತಿಗೆದಾರ ಗುತ್ತಿಗೆ ಪಡೆದುಕೊಂಡರೂ, ಸ್ಥಳೀಯ ಗುತ್ತಿಗೆದಾರರ ಮೂಲಕವೇ ಕೆಲಸ ಮಾಡಿಸುತ್ತಿದ್ದರು. ಈ ವರ್ಷ ಜಿಲ್ಲಾಧಿಕಾರಿ ಇ-ಟೆಂಡರ್ ಕರೆದಿರುವುದರಿಂದ ಹೊರಗಿನ ಗುತ್ತಿಗೆದಾರರು ಗುತ್ತಿಗೆ ಪಡೆದುಕೊಳ್ಳುವ ಸಾಧ್ಯತೆ ಹೆಚ್ಚಿದೆ. ಕೆಪಿಪಿಪಿ ಪೋರ್ಟಲ್ ಮೂಲಕ ಟೆಂಡರ್ ಆಹ್ವಾನಿಸಲಾಗಿದೆ.
======
ಕಳೆದ ಬಾರಿಯ ಕಾರ್ಯಕ್ರಮದ ಖರ್ಚು ವೆಚ್ಚಗಳಲ್ಲಿ ಹಣ ದುರುಪಯೋಗ ಮಾಡಿರುವುದು ಮೇಲ್ನೋಟಕ್ಕೆ ಕಂಡು ಬರುತ್ತದೆ. ವಂತಿಗೆ ಹಣ ಪಡೆದ ವಿವರಗಳನ್ನು ನೀಡಿಲ್ಲ. ಸರ್ಕಾರ ವೆಚ್ಚ ಮಾಡಿದ ಕಾರ್ಯಕ್ರಮಗಳಿಗೆ ಮತ್ತೆ ವಂತಿಗೆ ಹಣದಿಂದ ನೀಡಿದ್ದಾಗಿ ಲೆಕ್ಕ ತೋರಿಸಿದ್ದಾರೆ. ಮುದ್ರಣ, ಸ್ಮರಣಿಕೆ, ಊಟೋಪಚಾರ, ವೇದಿಕೆ ಸೇರಿದಂಥೆ ಎಲ್ಲ ಕಡೆ ಡಬಲ್ ಪೇಮೆಂಟ್ ಮಾಡಿದ್ದಾರೆ. ಜವಾಬ್ದಾರಿ ಹೊತ್ತ ಅಧ್ಯಕ್ಷರು ಮತ್ತು ಖಜಾಂಚಿ ವಿರುದ್ಧ ಸಂಬಂಧಿಸಿದ ಪ್ರಾಧಿಕಾರದಲ್ಲಿ ದೂರು ಸಲ್ಲಿಸಲು ಚಿಂತನೆ ನಡೆಸಲಾಗಿದೆ. ತೆನ್ನೀರ ಮೈನಾ, ಸಂಚಾಲಕರು, ಮಡಿಕೇರಿ ದಸರಾ ಸಾಂಸ್ಕೃತಿಕ ಸಮಿತಿ.
ಕಳೆದ ವರ್ಷದ ದಸರಕ್ಕೆ ಸಂಬಂಧಿಸಿದ್ದಂತೆ ಲೆಕ್ಕಪರಿಶೋಧಕರಿಂದ ಲೆಕ್ಕಪರಿಶೀಲನಾ ವರದಿ ಸಿದ್ಧ ಪಡಿಸಲಾಗಿದ್ದು, ಇದನ್ನು ಜಿಲ್ಲಾಧಿಕಾರಿಗೆ ನೀಡಲಾಗಿದೆ. ಕೆಲವೇ ದಿನಗಳಲ್ಲಿ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ನಡೆಯುವ ಮಡಿಕೇರಿ ನಗರ ದಸರಾ ಸಮಿತಿ ಸಭೆಯಲ್ಲಿ ಖರ್ಚು-ವೆಚ್ಚದ ವಿವರ ಮಂಡಿಸಲಾಗುತ್ತದೆ. ದಸರಾ ಸಮಿತಿ ಅಧ್ಯಕ್ಷರಿಗೆ ಪಾವತಿಸಬೇಕಾದ ಟಿಎಗೆ ಸಂಬಂಧಿ ಸಿದ್ದಂತೆ ೮೭ ಸಾವಿರ ರೂ. ದಾಖಲು ಮಾಡಿದ್ದರಿಂದ ಸಮಿತಿ ಸಭೆಯಲ್ಲಿ ವಿರೋಧ ವ್ಯಕ್ತವಾಗಿತ್ತು. ಅರುಣ್ ಶೆಟ್ಟಿ, ಖಜಾಂಚಿ, ಮಡಿಕೇರಿ ನಗರ ದಸರಾ ಸಮಿತಿ.
ಜಿಲ್ಲಾಧಿಕಾರಿ ನೇತೃತ್ವದಲ್ಲಿ ಈ ಬಾರಿ ಮಡಿಕೇರಿ ದಸರಾ ನಡೆಯಲಿದೆ. ಡಿಸಿ ನೇತೃತ್ವದಲ್ಲಿ ಉಪಸಮಿತಿ ಪ್ರಮುಖರ ಸಭೆ ನಡೆಸಿದ್ದು, ಈ ಸಭೆಗೆ ಕಾರ್ಯಾಧ್ಯಕ್ಷರು, ಪ್ರಧಾನ ಕಾರ್ಯದರ್ಶಿ, ಖಚಾಂಜಿ ಸೇರಿದ್ದಂತೆ ಮಡಿಕೇರಿ ನಗರ ದಸರಾ ಸಮಿತಿ ಪ್ರಮುಖರನ್ನು ಆಹ್ವಾನಿಸಲಿಲ್ಲ. ದಸರಾ ಸಮಿತಿ ಕಚೇರಿಯಲ್ಲಿ ಮೂಮೂಲಿಯಂತೆ ಗಣಪತಿ ಹೋಮ ಮಾಡಲು ಹಣ ಎಲ್ಲಿಂದ ನೀಡುವುದೆಂದು ಡಿಸಿ ಪ್ರಶ್ನಿಸಿದ್ದು, ನಾವೇ ಕೈಯಿಂದ ಹಣ ಹಾಕಿ ಪೂಜೆ ನೆರವೇರಿಸಲು ನಿರ್ಧರಿಸಿದ್ದೇವೆ. ರಾಜೇಶ್ ಯಲ್ಲಪ್ಪ, ಪ್ರಧಾನ ಕಾರ್ಯದರ್ಶಿ, ಮಡಿಕೇರಿ ನಗರ ದಸರಾ ಸಮಿತಿ.
======