ಚಾಮರಾಜನಗರ, ಡಿ 08: ಕಳೆದ ಎರಡು ವಾರಗಳ ಹಿಂದೆ ಬಂಡೀಪುರದ ಮದ್ದೂರು ವಲಯ ವ್ಯಾಪ್ತಿಯಲ್ಲಿ 3 ವರ್ಷ ವಯಸ್ಸಿನ ಗಂಡು ಹುಲಿ ಮೃತಪಟ್ಟಿತ್ತು. ಇದು ಮಾಸುವ ಮುನ್ನವೇ, ಚಾಮರಾಜನಗರ ತಾಲೂಕಿನ ಕೊತ್ತಲವಾಡಿ ಗ್ರಾಮದ ಕರಿಕಲ್ಲು ಕ್ವಾರಿ ಬಳಿ ಎರಡು ಹುಲಿಗಳ ಮೃತದೇಹ ಪತ್ತೆಯಾಗಿವೆ. ಸ್ಥಳಕ್ಕೆ ಬಿಳಿಗಿರಿ ರಂಗನಾಥಸ್ವಾಮಿ ಹುಲಿ ಮೀಸಲು ಮತ್ತು ವನ್ಯಜೀವಿ ಅಭಯಾರಣ್ಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಗುಂಡ್ಲುಪೇಟೆ ತಾಲೂಕಿನ ಮೇಲೂರು ಸರ್ವೇ ನಂಬರ್ 107 ರ ಕರಿಕಲ್ಲು ಕ್ವಾರಿಯಿಂದ 15 ಮೀಟರ್ ದೂರದಲ್ಲಿ ಹುಲಿಗಳು ಮೃತಪಟ್ಟಿವೆ. ಹುಲಿ ಸಾವಿನ ಸುದ್ದಿ ಅಧಿಕಾರಿಗಳಿಗೆ ನಿನ್ನೆ (ಡಿ.07) ರ ಸಂಜೆಯೇ ತಿಳಿದಿತ್ತು. ಆದರೂ ಕೂಡ ಅರಣ್ಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿರಲಿಲ್ಲ. ಅರಣ್ಯ ಇಲಾಖೆ ಅಧಿಕಾರಿಗಳ ನಡೆ ಅನುಮಾನಕ್ಕೆ ಕಾರಣವಾಗಿದೆ. ಹುಲಿ ಮೃತದೇಹ ಚಿತ್ರೀಕರಣ ಮಾಡಲು ಅಧಿಕಾರಿಗಳು ಬಿಡದೆ, ಮರಣೋತ್ತರ ಪರೀಕ್ಷೆ ನಂತರ ಮಾಹಿತಿ ಕೊಡುತ್ತೇವೆ ಎಂದು ಹೇಳುತ್ತಿದ್ದಾರೆ.
ಹುಲಿಗಳ ಸಾವಿನ ಸುತ್ತ ಅನುಮಾನದ ಹುತ್ತ ಬೆಳೆದಿದೆ. ವಿಷ ಹಾಕಿ ಕೊಲ್ಲಲಾಗಿದೆ ಎಂಬ ಅನುಮಾನ ವ್ಯಕ್ತವಾಗಿದೆ. ಇಲ್ಲವೇ ಪರಸ್ಪರ ಕಾದಾಡಿ ಮೃತಪಟ್ಟಿರುವ ಶಂಕೆ ಮೂಡಿದೆ. 15 ದಿನಗಳ ಹಿಂದೆಯೇ ಹುಲಿ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ.
ವನ್ಯ ಮೃಗಗಳನ್ನ ಬೇಟೆಯಾಡಲು ಹೊಂಚು ಹಾಕಿದ್ದ ಕಾಡುಗಳ್ಳರ ಬಂಧನ
ದಿನ ಕಳೆದಂತೆ ಪ್ರಾಣಿಗಳನ್ನು ಬೇಟೆಯಾಡುತ್ತಿರುವ ಸಂಖ್ಯೆ ಹೆಚ್ಚುತ್ತಿದೆ. ವನ್ಯ ಮೃಗಗಳನ್ನು ಬೇಟೆಯಾಡಲು ಹೊಂಚು ಹಾಕಿದ್ದ ಇಬ್ಬರು ಕಾಡುಗಳ್ಳರನ್ನು ಅರಣ್ಯಾಧಿಕಾರಿಗಳು ಬಂಧಿಸಿದ್ದಾರೆ. ದಡಬಂಡಿ ಮಾದಯ್ಯ, ನಾಗ ತಂಬಡಿ ಬಂಧಿತರು.
ಆರೋಪಿಗಳು ಹನೂರು ತಾಲೂಕಿನ ಮಲೆ ಮಹದೇಶ್ವರ ವನ್ಯಧಾಮದ ದೇವರ ಮಡು ಅರಣ್ಯದಲ್ಲಿ ಉರುಳುಗಳನ್ನು ಹಾಕಿ ಕಡವೆ, ಜಿಂಕೆಯ ಶಿಕಾರಿಗಾಗಿ ಹೊಂಚು ಹಾಕಿದ್ದರು. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಅರಣ್ಯಾಧಿಕಾರಿಗಳು ಆರೋಪಿಗಳಾದ ದಡಬಂಡಿ ಮಾದಯ್ಯ, ನಾಗ ತಂಬಡಿಯನನ್ನು ಬಂಧಿಸಿದ್ದಾರೆ. ಅಧಿಕಾರಿಗಳು ಬಂಧಿತರಿಂದ ಮಚ್ಚು, ಟಾರ್ಚ್ ಲೈಟ್ ಮತ್ತು ಹಗ್ಗವನ್ನು ವಶಕ್ಕೆ ಪಡೆದಿದ್ದಾರೆ.