ನವದೆಹಲಿ(ಡಿ.24): ಭಾರತೀಯ ಕುಸ್ತಿ ಫೆಡರೇಷನ್(ಡಬ್ಲ್ಯುಎಫ್ಐ)ಗೆ ಮಾಜಿ ಅಧ್ಯಕ್ಷ ಬ್ರಿಜ್ಭೂಷಣ್ ಸಿಂಗ್ರ ಆಪ್ತರು ಆಯ್ಕೆಯಾಗಿದ್ದಕ್ಕೆ ಅಸಮಾಧಾನಗೊಂಡಿರುವ ಕಿವುಡರ ಒಲಿಂಪಿಕ್ ಚಿನ್ನ ವಿಜೇತ ಕುಸ್ತಿಪಟು ವಿರೇಂದರ್ ಸಿಂಗ್ ಯಾದವ್ ತಮ್ಮ ಪದ್ಮಶ್ರೀ ಪ್ರಶಸ್ತಿಯನ್ನು ಸರ್ಕಾರಕ್ಕೆ ಹಿಂದಿರುಗಿಸುವುದಾಗಿ ಘೋಷಿಸಿದ್ದಾರೆ.
ಈಗಾಗಲೇ ಒಲಿಂಪಿಕ್ಸ್ ಸಾಧಕಿ ಸಾಕ್ಷಿ ಮಲಿಕ್ ಕುಸ್ತಿಗೆ ನಿವೃತ್ತಿ ಘೋಷಿಸಿದ್ದು, ಬಜರಂಗ್ ಪೂನಿಯಾ ಪದ್ಮಶ್ರೀ ಹಿಂದಿರುಗಿಸುವುದಾಗಿ ತಿಳಿಸಿದ್ದರು. ಅವರಿಗೆ ಬೆಂಬಲ ಸೂಚಿಸಿರುವ ವಿರೇಂದರ್, ‘ನನ್ನ ಸಹೋದರಿ ಮತ್ತು ದೇಶದ ಮಗಳಿಗಾಗಿ ನಾನು ಪದ್ಮಶ್ರೀ ಹಿಂದಿರುಗಿಸುತ್ತೇನೆ. ಪ್ರಧಾನಿ ಮೋದಿ ಅವರೇ, ನಿಮ್ಮ ಮಗಳು ಮತ್ತು ನನ್ನ ಸಹೋದರಿ ಸಾಕ್ಷಿ ಮಲಿಕ್ ಬಗ್ಗೆ ನನಗೆ ಹೆಮ್ಮೆ ಇದೆ’ ಎಂದು ಟ್ವಿಟರ್ನಲ್ಲಿ ಬರೆದುಕೊಂಡಿದ್ದಾರೆ. ವಿರೇಂದರ್ 2005, 2013, 2017ರ ಒಲಿಂಪಿಕ್ಸ್ಗಳಲ್ಲಿ ಚಿನ್ನ ಗೆದ್ದಿದ್ದಾರೆ. ಅವರಿಗೆ 2021ರಲ್ಲಿ ಪದ್ಮಶ್ರೀ ನೀಡಲಾಗಿತ್ತು. 2015ರಲ್ಲಿ ಅರ್ಜುನ ಪ್ರಶಸ್ತಿಗೂ ಭಾಜನರಾಗಿದ್ದರು.