ರಣಮಳೆ ಭೀಕರತೆಗೆ ಕೇರಳದ ವೈನಾಡು ಸಂಪೂರ್ಣ ನೆಲಸಮವಾಗಿದೆ. ಎಲ್ಲಿ ನೋಡಿದರೂ ನೀರು, ನೀರಿನಲ್ಲಿ ತೇಲಿಬರುತ್ತಿರುವ ಪಾರ್ಥೀವ ಶರೀರಗಳು ನೋಡುವವರ ಮನಕಲಕುತ್ತಿದೆ. ರಾತ್ರೋ ರಾತ್ರಿ ಹಠಾತ್ತನೆ ಕುಸಿದ ಬೆಟ್ಟಕ್ಕೆ ಇಡೀ ಊರಿಗೂರೇ ನೆಲಕಚ್ಚಿದೆ. ಮಂಗಳವಾರ ನಸುಕಿನ ಜಾವ ಕೇರಳದ ವೈನಾಡಿನ ಮುಂಡಕ್ಕೈ, ಚೂರಲ್ಮಾಲಾ, ಅಟ್ಟಮಾಲ ಮತ್ತು ನೂಲ್ಪುಳ ಗ್ರಾಮಗಳು ಭೂದೇವಿಯ ರುದ್ರನರ್ತನಕ್ಕೆ ನಲುಗಿ ಹೋಗಿವೆ. ಬಹುಶಃ ಇಲ್ಲಿ ಏನಾಗುತ್ತಿದೆ ಎಂದು ಕಣ್ತೆರೆದು ನೋಡಲು ಕೂಡ ಸಮಯಾವಕಾಶವನ್ನ ಭೂತಾಯಿ ನೀಡಿಲ್ಲ.
ವೈನಾಡಿನ ಭೂಕುಸಿತಕ್ಕೆ 4 ಗ್ರಾಮಗಳು ಸಂಪೂರ್ಣವಾಗಿ ನಾಶವಾಗಿವೆ. 400 ಕುಟುಂಬಗಳು ಸೇರಿದಂತೆ ಹಲವಾರು ವಲಸೆ ಕಾರ್ಮಿಕರು ಮಣ್ಣಿನಲ್ಲಿ ಹುದುಗಿಹೋಗಿರುವ ಬಗ್ಗೆ ಅಂದಾಜಿಸಲಾಗಿದೆ. ರಕ್ಷಣಾ ಕಾರ್ಯಾಚರಣೆಗೆ ವರುಣ ಅನುವು ಮಾಡಿಕೊಡುತ್ತಿಲ್ಲವಾದರೂ, ನೌಕಾಪಡೆ ಮತ್ತು ಎನ್ಡಿಆರ್ಎಫ್ ನ ರಕ್ಷಣಾ ತಂಡ, ಪೋಲೀಸ್ ಹಾಗೂ ಅರಣ್ಯ ಅಧಿಕಾರಿಗಳು ಪ್ರತಿಕೂಲ ಹವಾಮಾನದ ನಡುವೆ ಸಂತ್ರಸ್ತರನ್ನು ಹುಡುಕುವ ಕಾರ್ಯವನ್ನು 1000 ಕ್ಕೂ ಅಧಿಕ ಮಂದಿ ಮುಂದುವರೆಸಿದ್ದಾರೆ. ಈವರೆಗೂ 146 ಮೃತದೇಹಗಳನ್ನ ಹೊರತೆಗೆಯಲಾಗಿದ್ದು, ಸಾವಿನ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆಗಳಿವೆ. 128 ಮಂದಿ ಗಾಯಗೊಂಡವರನ್ನು ರಕ್ಷಿಸಿ ಹತ್ತಿರದ ಆಸ್ಪತ್ರೆಗಳಿಗೆ ಏರ್ ಲಿಫ್ಟ್ ಮಾಡಲಾಗಿದೆ.
ಮೈಸೂರು ಜಿಲ್ಲಾಡಳಿತದಿಂದ ನೆರವಿಗೆ ಸಿದ್ಧತೆ!
ಕೇರಳದ ವಯನಾಡಿನಲ್ಲಿ ಭೂ ಕುಸಿತದ ತೀವ್ರತೆ ಬಹಳವಾಗಿದ್ದು, ಇಲ್ಲಿ ಕಾಣೆಯಾಗಿರುವ ರಾಜ್ಯದ ಜನರ ಸಹಾಯಕ್ಕಾಗಿ ಮೈಸೂರು ಜಿಲ್ಲಾಡಳಿತ ಸಹಾಯವಾಣಿ ತೆರೆದಿದೆ. ಅಲ್ಲದೆ ಜಿಲ್ಲಾ ವಿಪತ್ತು ನಿರ್ವಹಣಾ ಕೊಠಡಿಗೆ ಮಾಹಿತಿ ನೀಡುವಂತೆ ಜಿಲ್ಲಾಧಿಕಾರಿ ಲಕ್ಷ್ಮಿಕಾಂತ ರೆಡ್ಡಿ ಮಾಹಿತಿಯನ್ನ ನೀಡಿದ್ದಾರೆ. ಅಲ್ಲದೆ ಹೆಚ್.ಡಿ.ಕೋಟೆಯ ತಾಲ್ಲೂಕು ಆಸ್ಪತ್ರೆ ಹಾಗೂ ಮೈಸೂರಿನ ಕೆ.ಆರ್. ಆಸ್ಪತ್ರೆಗಳಲ್ಲಿ ಅಗತ್ಯ ವೈದ್ಯಕೀಯ ನೆರವಿಗೆ ಎಲ್ಲಾ ಸಿದ್ಧತೆಗಳನ್ನ ಮಅಡಿಕೊಂಡಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ಕರೆತರಲು ಸಾಕಷ್ಟು ವಾಹನಗಳನ್ನು ಕೂಡ ಅಣಿಗೊಳಿಸಲಾಗಿದೆ. ಹಾಗೂ ಪರ್ಥೀವ ಶರೀರಗಳ ಸಂರಕ್ಷಣೆಗೆ ಶೈತ್ಯಗಾರ ಘಟಕಗಳನ್ನು ಒದಗಿಸುವ ಸರಬರಾಜುದಾರರನ್ನು ಸಹ ಗುರುತಿಸಿ ಅಗತ್ಯ ಬಿದ್ದರೆ ಗಾಯಾಳುಗಳನ್ನು ಕರೆತಂದು ವೈದ್ಯಕೀಯ ನೆರವು ನೀಡಲು ಮೈಸೂರು ಜಿಲ್ಲಾಡಳಿತ ಸಿದ್ದವಾಗಿದೆ.
ಸಹಾಯಕ್ಕಾಗಿ 0821-2423800 ಅಥವಾ 1077 ದೂರವಾಣಿಗೆ ಕರೆ ಮಾಡುವಂತೆ ಮನವಿಮಾಡಿದ್ದಾರೆ.
ಕರ್ನಾಟಕ-ಕೇರಳ ಬಸ್ ಸಂಚಾರ ಸ್ಥಗಿತ!
ಕರ್ನಾಟಕ ಮತ್ತು ಕೇರಳ ಸಂಪರ್ಕಿಸುವ ಮೈಸೂರು-ಸುಲ್ತಾನ್ ಬತ್ತೇರಿ-ವಯನಾಡ್ ರಸ್ತೆಯನ್ನು ಸಂಪೂರ್ಣವಾಗಿ ಕಡಿತಗೊಳಿಸಲಾಗಿದೆ. ಬೆಂಗಳೂರಿನಿಂದ ಕೇರಳಕ್ಕೆ ಸಂಚರಿಸುವ ಬಹುತೇಕ ಬಸ್ಸುಗಳ ಸಂಚಾರವನ್ನು ಸಹ ಸ್ಥಗಿತಗೊಳಿಸಲಾಗಿದೆ. ಬೆಂಗಳೂರು-ವಯನಾಡ್ ರಾಷ್ಟ್ರೀಯ ಹೆದ್ದಾರಿ 766ರ ಮಾರ್ಗದಲ್ಲಿ ಸಂಚಾರ ನಿರ್ಬಂಧಿಸಲಾಗಿದ್ದು, ಗುಂಡ್ಲುಪೇಟೆ-ಬಂಡೀಪುರ-ಗುಡಲೂರ ಮಾರ್ಗದಲ್ಲಿ ತೆರಳಲು ಸೂಚಿಸಲಾಗಿದೆ. ಕಣ್ಣೂರು, ನಿಲಾಂಬೂರು, ಕೋಝಿಕ್ಕೋಡ್, ವಡಗಾರ, ತಲಚೇರಿ ಸೇರಿ ಕೆಲ ಭಾಗಗಳಿಗೆ ಮಾತ್ರ ಬೇರೆ ಮಾರ್ಗಗಳಿಂದ ಸಂಚಾರವನ್ನ ನಡೆಸಲಾಗುತ್ತಿದೆ.