ಪ್ರತಿನಿಧಿ ವರದಿ ಕೋಲಾರ
ಶ್ರೀನಿವಾಸಪುರ ತಾಲೂಕಿನ ಅಡ್ಡಗಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಶ್ರೀರಾಮ ಪ್ಲೇಕ್ಸ್, ಹಿಂದೂ ಧ್ವಜವನ್ನು ತೆರವುಗೊಳಿಸಿ, ತಿಪ್ಪೆಗೆ ಎಸೆದು ಅವಮಾನ ಮಾಡಿರುವ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಪ್ರತಿಭಟನೆ ನಡೆಸಲಾಗುತ್ತದೆ ಎಂದು ಸಂಸದ ಎಸ್.ಮುನಿಸ್ವಾಮಿ ಎಚ್ಚರಿಕೆ ನೀಡಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ರಾಮನ ಪ್ಲೇಕ್ಸ್, ಧ್ವಜದಲ್ಲಿ ಯಾವುದೇ ರಾಜಕೀಯ ವ್ಯಕ್ತಿಯ ಭಾವಚಿತ್ರ ಇರಲಿಲ್ಲ. ಹಾಗಾದರೆ ಮಸೀದಿಗಳ ಮೇಲೆ ಹಾರಾಡುತ್ತಿರುವ ಅನ್ಯ ದೇಶದ ಧ್ವಜಗಳನ್ನು ಸಹ ತೆರವುಗೊಳಿಸಿಬೇಕು. ಅಡ್ಡಗಲ್ ಗ್ರಾಪಂ ಪಿಡಿಒ ಎಜಾಜ್ ಪಾಷ ಹಾಗೂ ಸಿಬ್ಬಂದಿ ಉದ್ದೇಶಪೂರ್ವಕವಾಗಿಯೇ ಈ ಕೃತ್ಯವನ್ನು ಎಸಗಿದ್ದಾರೆ. ಈ ಬಗ್ಗೆ ಈಗಾಗಲೇ ಪೊಲೀಸರಿಗೆ, ಜಿಪಂ ಸಿಇಒ ಅವರಿಗೆ ದೂರು ನೀಡಿದ್ದು, ಕೂಡಲೇ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಗಾಜಲದಿನ್ನೆ ಗ್ರಾಮದಲ್ಲಿನ ಸರ್ಕಾರಿ ಜಾಗವನ್ನು ಎಪಿಜೆ ಅಬ್ದುಲ್ ಕಲಾಂ ವಸತಿ ಶಾಲೆಗೆ ನೀಡಲಾಗಿದೆ. ಇದಕ್ಕೆ ನಮ್ಮ ವಿರೋಧವಿಲ್ಲ, ಆಟದ ಮೈದಾನಕ್ಕೆ ಮೀಸಲಿರಿಸಿದ್ದ ಜಾಗವನ್ನು ವಾಕ್ಫ್ ಬೋರ್ಡ್ಗೆ ನೀಡಿರುವುದಕ್ಕೆ ವಿರೋಧವಿದೆ. ಸಂಸದನಾಗಿ ಗಡಿಯನ್ನು ದಾಟಬಾರದು ಎಂಬ ಉದ್ದೇಶದಿಂದ ಇದೀನಿ, ಡಿಸಿ ಎಂದರೆ ಎಲ್ಲ ಸಮುದಾಯಕ್ಕೂ ಅಧಿಕಾರಿ. ಹಾಗಾದರೆ ಎಲ್ಲ ಸಮುದಾಯಕ್ಕೂ ಜಾಗ ನೀಡಿ ಎಂದು ಆಗ್ರಹಿಸಿದರು.
ಅಕ್ರಂ ಪಾಷ ಅವರು ಜಿಲ್ಲೆಯಲ್ಲೇ ಮುಂದುವರೆದರೆ ಕಾನೂನು ಪ್ರಕಾರ ಚುನಾವಣೆ ನಡೆಸಲು ಸಾಧ್ಯವಾಗುವುದಿಲ್ಲ ಎಂದು ಸಾರ್ವಜನಿಕರು ಮಾತನಾಡಿಕೊಳ್ಳುತ್ತಿದ್ದಾರೆ. ಚುನಾವಣಾ ಆಯೋಗಕ್ಕೆ ನಾವು ಸಹ ದೂರು ನೀಡಿದ್ದೇವೆ. ಹಿಂದೆ ಡಿ.ಕೆ.ರವಿ, ವಿಶ್ವನಾಥ್, ತ್ರಿಲೋಕಚಂದ್ರ, ಮಂಜುನಾಥ್, ಸೆಲ್ವಮಣಿ ಡಿಸಿಗಳಾಗಿ ಕೆಲಸ ಮಾಡಿ, ಜನರ ಮನೆ ಮಾತಾಗಿದ್ದಾರೆ. ಜನ ಸೇವೆ ಮಾಡುವ ಜಿಲ್ಲಾಧಿಕಾರಿ ನಮಗೆ ಬೇಕು ಎಂದರು.
Leave a comment