ಮಡಿಕೇರಿ: ದೆಹಲಿ ಅಬಕಾರಿ ಹಗರಣದ ಕಂಪನಿಯಿಂದ ಕೋಟ್ಯಂತರ ರೂ. ದೇಣಿಗೆ ಸ್ವೀಕರಿಸಿರುವ ಆರೋಪ ಎದುರಿಸುತ್ತಿರುವ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರನ್ನು ತಕ್ಷಣ ಬಂಧಿಸಬೇಕೆಂದು ಕೊಡಗು ಆಮ್ ಆದ್ಮಿ ಪಾರ್ಟಿಯ ಜಿಲ್ಲಾಧ್ಯಕ್ಷ ಭೋಜಣ್ಣ ಸೋಮಯ್ಯ ಒತ್ತಾಯಿಸಿದ್ದಾರೆ.
ಅಬಕಾರಿ ನೀತಿಯ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದ ಪ್ರಮುಖ ಆರೋಪಿ ತನ್ನ ಕಂಪನಿಯಿಂದ ಚುನಾವಣಾ ಬಾಂಡ್ಗಳ ಮೂಲಕ ಬಿಜೆಪಿಗೆ ಕೋಟ್ಯಾಂತರ ರೂ. ನೀಡಿರುವುದು ಬಹಿರಂಗಗೊಂಡಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ಆರೋಪಿಸಿರುವ ಅವರು, ಬಿಜೆಪಿ ವಿರುದ್ಧ ಪ್ರಕರಣ ದಾಖಲಿಸಬೇಕು ಮತ್ತು ಜೆ.ಪಿ.ನಡ್ಡಾ ಅವರನ್ನು ಬಂಧಿಸಬೇಕು ಎಂದು ಆಗ್ರಹಿಸಿದ್ದಾರೆ.
ದೆಹಲಿ ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಅನೇಕ ಇಡಿ ದಾಳಿಗಳು ಮತ್ತು ಎರಡು ವರ್ಷಗಳ ಸುದೀರ್ಘ ತನಿಖೆ ಹೊರತಾಗಿಯೂ ಯಾವುದೇ ಎಎಪಿ ನಾಯಕರ ಬಳಿಯಾಗಲಿ, ಕಾರ್ಯಕರ್ತರ ಬಳಿಯಾಗಲಿ ಒಂದೇ ಒಂದು ರೂಪಾಯಿ ಅಕ್ರಮ ಹಣವನ್ನು ಪತ್ತೆ ಹಚ್ಚಲು ಸಾಧ್ಯವಾಗಿಲ್ಲ. ತಪ್ಪಿತಸ್ಥರು ಎನ್ನಲು ಅವರ ಬಳಿ ಪುರಾವೆಗಳೂ ಇರಲಿಲ್ಲ. ಆದರೆ ನಡೆಯದ ಭ್ರಷ್ಟಾಚಾರವನ್ನು ನಡೆದಿದೆ ಎಂದು ಸುಳ್ಳಾಗಿ ಬಿಂಬಿಸಿ ಎದುರಾಳಿಯಾಗಿ ನಿಂತಿರುವ ಕೇಜ್ರಿವಾಲ್ ಅವರನ್ನು ಹತ್ತಿಕ್ಕುವ ಪ್ರಯತ್ನವನ್ನು ಕೇಂದ್ರ ಸರಕಾರ ಮಾಡಿದೆ ಎಂದು ಆರೋಪಿಸಿದ್ದಾರೆ.
ವಿಚಾರಣೆ ವೇಳೆ ಪ್ರಮುಖ ಆರೋಪಿ ತಾವು ಅರವಿಂದ್ ಕೇಜ್ರಿವಾಲ್ ಅವರನ್ನು ಭೇಟಿಯಾಗಿಲ್ಲ ಅಥವಾ ಮಾತನಾಡಿಲ್ಲ ಮತ್ತು ಎಎಪಿಗೂ ನನಗೂ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟವಾಗಿ ತಿಳಿಸಿದ್ದರು. ಅದಾದ ಮರುದಿನವೇ ಇ.ಡಿ ಅವರನ್ನು ಬಂಧಿಸಿತು. ಜೈಲಿನಲ್ಲಿದ್ದ ಆರೋಪಿ ಇದೀಗ ತಮ್ಮ ಹೇಳಿಕೆ ಬದಲಾಯಿಸಿಕೊಂಡರು. ಅಬಕಾರಿ ನೀತಿ ವಿಚಾರವಾಗಿ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರನ್ನು ಭೇಟಿ ಮಾಡಿ ಮಾತನಾಡಿದ್ದೇನೆ ಎಂದರು.
ಆರೋಪಿ ಹಾಗೆ ತಪ್ಪೊಪ್ಪಿಗೆ ಹೇಳಿಕೆ ನೀಡಿದ ತಕ್ಷಣವೇ ಬೆನ್ನು ನೋವಿನ ನೆಪದಲ್ಲಿ ಅವರಿಗೆ ಜಾಮೀನು ಕೊಡಲಾಗಿದೆ. ಪ್ರಮುಖ ಆರೋಪಿಯೊಬ್ಬರಿಗೆ ಬೆನ್ನು ನೋವಿನ ಕಾರಣಕ್ಕೆ ಜಾಮೀನು ನೀಡಿದ ಬೇರೆ ಉದಾಹರಣೆ ಇದೆಯೇ ಎಂದು ಪ್ರಶ್ನಿಸಿರುವ ಭೋಜಣ್ಣ ಸೋಮಯ್ಯ, ಏನೂ ತಪ್ಪೆಸಗದ ಆಮ್ ಆದ್ಮಿ ಪಾರ್ಟಿಯ ನಾಯಕರಾದ ಮನೀಶ್ ಸಿಸೋಡಿಯಾ, ಸಂಜಯ್ ಸಿಂಗ್ ಮತ್ತು ಸತ್ಯೇಂದ್ರ ಜೈನ್ ಅವರನ್ನು ಜೈಲಿನಲ್ಲಿ ಇರಿಸಿಕೊಳ್ಳಲಾಗಿದೆ, ಇದು ಕುತಂತ್ರ ರಾಜಕಾರಣ ಎಂದು ಟೀಕಿಸಿದ್ದಾರೆ.
PHOTO : BOJANNA