ಶ್ರೀರಂಗಪಟ್ಟಣ : ಪುರಾತನ ಹಿಂದು ದೇವಾಲಯಗಳನ್ನು ರಕ್ಷಣೆ ಮಾಡುವುದರ ಜೊತೆಗೆ ಶುಚಿತ್ವ ಕಾಪಾಡುವಂತೆ ಹಿಂದು ಜಾಗರಣಾ ವೇದಿಕೆ ಕಾರ್ಯಕರ್ತರು ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು.
ತಾಲೂಕು ಕಚೇರಿ ಎದುರು ಪ್ರತಿಭಟನಾ ಧರಣಿ ನಡೆಸಿದ ವೇದಿಕೆ ಕಾರ್ಯಕರ್ತರು ತಾಲೂಕು ಆಡಳಿತಕ್ಕೆ ಮನವಿ ಸಲ್ಲಿಸಿದರು.
ಶ್ರೀರಂಗಪಟ್ಟಣದ ಪುರಾತನ ದೇವಸ್ಥಾನವಾದ ಶ್ರೀರಂಗನಾಥ ಸ್ವಾಮಿ ದೇವಸ್ಥಾನ ಮುಂಭಾಗದ ಅವರಣದಲ್ಲಿರುವ ಕಲ್ಯಾಣಿಯ ಶುಚಿತ್ವ ಕಾಪಾಡಿ ಭಕ್ತಾಧಿಗಳಿಗೆ ಅನೂಕೂಲ ಮಾಡಬೇಕು. ಗಂಜಾಂನ ಗಿಡಂಗಿಹೊಳೆ ಹತ್ತಿರದ ಹಳೆಯ ಕಾಲದ ಶಿವನ ದೇವಸ್ಥಾನದಲ್ಲಿದ್ದ ಗಣಪತಿ, ಬಸವನ ವಿಗ್ರಹವನ್ನು ಇತ್ತೀಚೆಗೆ ಕೆಲವು ಕಿಡಿಗೇಡಿಗಳು ಹೊಡೆದು ಹಾಕಿದ್ದಾರೆ. ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಹಾಗೂ ಶ್ರೀರಂಗಪಟ್ಟಣ- ಗಂಜಾಂನ ಕಾವೇರಿ ನದಿ ಹತ್ತಿರವಿರುವ ಗದ್ದೆ ರಂಗನಾಥ ಸ್ವಾಮಿ ದೇವಾಲಯದ ಪುನರ್ ಪ್ರತಿಷ್ಠಾಪನಾ ಕೆಲಸ ನಡೆಯುತ್ತಿರುವ ಸ್ಥಳದಲ್ಲಿ ಕೆಲವು ಕಿಡಿಗೇಡಿಗಳು ಹಾಗೂ ಮತಾಂಧರು, ಮೋಜು ಮಸ್ತಿ ಮಾಡಿ, ಬಿರಿಯಾನಿ, ಮಾಂಸದ ಅಡಿಗೆ, ಮದ್ಯ ಕುಡಿತ, ಇಸ್ಪೀಟ್ ಆಟಗಳನ್ನು ಆಡುತ್ತ ಅನೈತಿಕ ಸ್ಥಳವನ್ನಾಗಿ ಮಾಡುತ್ತಿರುತ್ತಾರೆ.
ಇದರಿಂದ ದೇವಸ್ಥಾನದ ಅವರಣದಲ್ಲಿ ಅಪವಿತ್ರ ಉಂಟಾಗುತ್ತಿದ್ದು, ತಾಲ್ಲೂಕು ಆಡಳಿತ ಗಂಭೀರವಾಗಿ ಪರಿಗಣಿಸಿ ಕಾನೂನು ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದರು.