ದಲಿತ ಸಂಘರ್ಷ ಸಮಿತಿಯ ಕಾರ್ಯಕರ್ತರಿಂದ ಪ್ರತಿಭಟನೆ
ಪ್ರತಿನಿಧಿ ವರದಿ ಚಾಮರಾಜನಗರ
ಹೊರಗುತ್ತಿಗೆ ನೇಮಕಾತಿಯಲ್ಲಿ 1 ಮತ್ತು 6ನೇ ಷರತ್ತುಗಳನ್ನು ರದ್ದುಪಡಿಸಿ, ರೋಸ್ಟರ್ ನಿಯಮಾನುಸಾರ ನೇಮಕಾತಿ ಮಾಡಿಕೊಳ್ಳುವಂತೆ ಆಗ್ರಹಿಸಿ ದಲಿತ ಸಂಘರ್ಷ ಸಮಿತಿಯ ಕಾರ್ಯಕರ್ತರು ನಗರದಲ್ಲಿ ಪ್ರತಿಭಟನೆ ನಡೆಸಿದರು.
ನಗರದ ಜಿಲ್ಲಾಡಳಿತ ಭವನದ ಎದುರಿರುವ ಡಾ.ಬಿ.ಆರ್.ಅಂಬೇಡ್ಕರ್ ಅವರ ಪುತ್ಥಳಿ ಬಳಿ ಜಮಾವಣೆಗೊಂಡಿದ್ದ ಪ್ರತಿಭಟನಾಕಾರರು ಸರ್ಕಾರದ ಸುತ್ತೋಲೆಯ 1 ಮತ್ತು 6ನೇ ಷರತ್ತುಗಳು ರದ್ದಾಗಲಿ ಎಂದು ಘೋಷಣೆ ಕೂಗಿದರು.
ಸರ್ಕಾರದ ಸುತ್ತೋಲೆಯ 1ನೇ ಷರತ್ತಿನಲ್ಲಿ 45 ದಿನಗಳಿಗಿಂತ ಕಡಿಮೆ ಅವಧಿಗೆ ನೇಮಕಾತಿ ಮಾಡಿಕೊಳ್ಳುವಾಗ ಮೀಸಲಾತಿ ಅನ್ವಯವಾಗುವುದಿಲ್ಲ ಎಂದು ತಿಳಿಸಿದೆ. ಇದು ಮೀಸಲಾತಿ ವಿರೋಧಿಗಳಿಗೆ ಅನುಕೂಲವಾಗಿದೆ. ಕೂಡಲೇ ಈ ಷರತ್ತನ್ನು ರದ್ದು ಪಡಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಯಾವುದೇ ಇಲಾಖೆಯಲ್ಲಿ ಹೊರಗುತ್ತಿಯಲ್ಲಿ ನೇಮಕಾತಿ ಮಾಡಿಕೊಳ್ಳುವಾಗ 20ಕ್ಕಿಂತ ಹೆಚ್ಚು ಜನರನ್ನು ನೇಮಕ ಮಾಡಿಕೊಂಡರೆ ಮಾತ್ರ ಮೀಸಲಾತಿ ನೀತಿಯನ್ನು ಅನುಸರಿಸಬೇಕು ಎಂದು ಸರ್ಕಾರದ ಸುತ್ತೋಲೆಯ 6ನೇ ಷರತ್ತು ಹೇಳಲಿದೆ. ಇದರಿಂದಲೂ ಹೊರಗುತ್ತಿಗೆ ನೌಕರರಿಗೆ ಅನ್ಯಾಯವಾಗುತ್ತಿದೆ. ಈ ನಿಟ್ಟಿನಲ್ಲಿ ಸರ್ಕಾರದ ಸುತ್ತೋಲೆಯ 1 ಮತ್ತು 6ನೇ ಷರತ್ತುಗಳನ್ನು ಮಾರ್ಪಾಡು ಮಾಡಿ, ಉದ್ಯೋಗಗಳ ಸಂಖ್ಯೆ ಎಷ್ಟೇ ಇದ್ದರು, ಎಷ್ಟೇ ಅವಧಿಯದ್ದಾಗಿದ್ದರೂ ಅಲ್ಲಿ ರೋಸ್ಟರ್ ನಿಯಮಗಳ ಅನುಸಾರ ನೇಮಕಾತಿ ಪ್ರಕ್ರಿಯೆಗಳು ಕಡ್ಡಾಯವಾಗಿ ಇರಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ದಲಿತ ಮುಖಂಡರಾದ ಎಂ.ದೊರೆ ಸ್ವಾಮಿ, ನಂಜುಂಡಸ್ವಾಮಿ, ರಾಜಣ್ಣ, ಶಿವಕುಮಾರ್, ಧರಣೇಂದ್ರ, ಅನಿಲ್ ಕುಮಾರ್, ಚಂದ್ರಶೇಖರ್, ರಂಗಸ್ವಾಮಿ, ಶಾಂತರಾಜು, ಸಿ.ಎಂ.ಕೃಷ್ಣಮೂರ್ತಿ, ನಾಗರಾಜು, ರಾಮಸಮುದ್ರ ಸುರೇಶ್ ಸೇರಿದಂತೆ ಇತರರು ಇದ್ದರು.
5ಸಿಎಚ್ಎನ್.1: ಹೊರಗುತ್ತಿಗೆ ನೇಮಕಾತಿಯಲ್ಲಿ 1 ಮತ್ತು 6ನೇ ಷರತ್ತುಗಳನ್ನು ರದ್ದುಪಡಿಸಿ ರೋಸ್ಟರ್ ನಿಯಮಾನುಸಾರ ನೇಮಕಾತಿಗೆ ಆಗ್ರಹಿಸಿ ದಲಿತ ಸಂಘರ್ಷ ಸಮಿತಿಯ ಕಾರ್ಯಕರ್ತರು ಚಾ.ನಗರದಲ್ಲಿ ಪ್ರತಿಭಟನೆ ನಡೆಸಿದರು.