– ನಗರದಲ್ಲಿ ನೂರಾರು ಆಟೋ ಚಾಲಕರಿಂದ ಪ್ರತಿಭಟನೆ
ಪ್ರತಿನಿಧಿ ವರದಿ ಮೈಸೂರು
ವೈಟ್ ಬೋರ್ಡ್ ಮತ್ತು ಬೈಕ್ ಟ್ಯಾಕ್ಸಿ ಬಳಸುವುದನ್ನು ಕೂಡಲೇ ನಿಲ್ಲಸಬೇಕು ಎಂದು ಆಗ್ರಹಿಸಿ ಕರ್ನಾಟಕ ಚಾಲಕರ ಒಕ್ಕೂಟದ ನೇತೃತ್ವದಲ್ಲಿ ನೂರಾರು ಆಟೋ ಚಾಲಕರು ಮಂಗಳವಾರ ನಗರದ ಆರ್ಟಿಓ ಕಚೇರಿ ಎದುರು ಬೃಹತ್ ಪ್ರತಿಭಟನೆ ನಡೆಸಿದರು.
ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿರುವ ರ್ಯಾಪಿಡೊ ಬೈಕ್ ಟ್ಯಾಕ್ಸಿಗಳು ಮತ್ತು ಇತರ ಇ-ಬೈಕ್ ಸೇವೆಗಳ ಕಾನೂನು ಬಾಹಿರವಾಗಿ ಕಾರ್ಯನಿರ್ವಹಿಸುತ್ತಿವೆ. ನಗರದಲ್ಲಿ ಇವುಗಳ ಸೇವೆಯಿಂದ ಆಟೋ ಚಾಲಕರ ಜೀವನೋಪಾಯಕ್ಕೆ ತೊಂದರೆಯಾಗುತ್ತಿದೆ. ಅಲ್ಲದೇ ಹಲವು ಸಂದರ್ಭಗಳಲ್ಲಿ ರಾಪಿಡೋ ಬೈಕ್ ಚಾಲಕರು ಮತ್ತು ರಿಕ್ಷಾ ಚಾಲಕರ ನಡುವಿನ ಘರ್ಷಣೆಗಳು ಕೂಡ ಹೆಚ್ಚುತ್ತಿದೆ ಎಂದು ವಿವಿಧ ಘೋಷಣೆಗಳನ್ನು ಕೂಗುವ ಮೂಲಕ ಪ್ರತಿಭಟನಾಕಾರರು ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಕೋವಿಡ್ ಸಮಯದಲ್ಲಿ ಆಟೋ ಚಾಲಕರು ಜೀವನ ನಿರ್ವಹಣೆಗೂ ಸಾಕಷ್ಟು ಕಷ್ಟಪಡುವ ಪರಿಸ್ಥಿತಿ ಎದುರಾಗಿತ್ತು. ಈಗ ಸರ್ಕಾರ ಬೈಕ್ ಟ್ಯಾಕ್ಸಿಗಳಿಗೆ ಅನುಮತಿ ನೀಡಿರುವ ಕಾರಣ ಮತ್ತಷ್ಟು ಸಂಕಷ್ಟಕ್ಕೆ ಒಳಗಾಗಿದ್ದಾರೆ. ನಗರದಲ್ಲಿ ಹಲವರು ತಮ್ಮ ವೈಯಕ್ತಿಕ ದ್ವಿಚಕ್ರ ವಾಹನಗಳನ್ನು ಬೈಕ್ ಟ್ಯಾಕ್ಸಿಯಾಗಿ ಬಳಸುತ್ತಿದ್ದು, ಆಟೋ ಚಾಲಕರ ಅದಾಯಕ್ಕೆ ಮತ್ತಷ್ಟು ಹೊಡೆತ ನೀಡಿದೆ. ದೇಶದ ದೆಹಲಿ, ಮಹಾರಾಷ್ಟ್ರ, ತೆಲಂಗಾಣ ರಾಜ್ಯಗಳಲ್ಲಿ ಬೈಕ್ ಟ್ಯಾಕ್ಸಿ ನಿಷೇಧಿಸಲಾಗಿದೆ. ಇದೇ ಮಾದರಿಯಲ್ಲಿ ರಾಜ್ಯದಲ್ಲಿಯೂ ಬೈಕ್ ಟ್ಯಾಕ್ಸಿ ಸೇವೆ ನಿಷೇಧಿಸಬೇಕು ಎಂದು ಆಗ್ರಹಿಸಿದರು.
ಇದಲ್ಲದೆ ಆಟೋ ರೀಕ್ಷಾ ಚಲಾಯಿಸುವ ಅಥವಾ ಕೊಂಡುಕೊಳ್ಳಲು ಚಾಲನಾ ಪರವಾನಗಿ ಜೊತೆ ಬ್ಯಾಡ್ಜ್ ಖಡ್ಡಾಯವಾಗಬೇಕು. ಬೇರೆ ರಾಜ್ಯ ಹಾಗೂ ಜಿಲ್ಲೆಯ ಪರ್ಮಿಟ್ ಹೊಂದಿರುವ ವಾಹನಗಳನ್ನು ನಿಲ್ಲಿಸಬೇಕು. ನಗರದ ಆಟೋ ರೀಕ್ಷಾದ ಆನ್ಲೈನ್ ದರ ಪರಿಷ್ಕೃತ ಮಾಡಬೇಕು, ನಗರದಲ್ಲಿ ೨೫ ಕಿ.ಮೀ.ರವರೆಗೆ ಅಂತರದ ಪರಿಮಿತಿ ಹೆಚ್ಚಿಸಬೇಕು ಎಂದು ಒತ್ತಾಯಿಸಿದರು.
ಕರ್ನಾಟಕ ಚಾಲಕರ ಒಕ್ಕೂಟದ ಜಿಲ್ಲಾ ಉಪಾಧ್ಯಕ್ಷ ಶಿವಕುಮಾರ್ ಮಾತನಾಡಿ, ಕಾನೂನು ಬಾಹಿರವಾಗಿ ರ್ಯಾಪಿಡೊ ಬೈಕ್ ಟ್ಯಾಕ್ಸಿ ಸಂಚಾರ ಮಾಡುತ್ತಿದ್ದ ೬ ವಾಹನಗಳನ್ನು ಆರ್ಟಿಓ ಅಧಿಕಾರಿ ಈಚೆಗೆ ವಶಕ್ಕೆ ಪಡೆದು ನ್ಯಾಯಾಲಯಕ್ಕೆ ಹಾಜರು ಪಡಿಸದೇ ಸುಮ್ಮನೇ ಬಿಟ್ಟಿ ಕಳಿಹಿಸಿದ್ದಾರೆ. ಈ ಮೂಲಕ ಕಾನೂನು ಪಾಲಿಸಬೇಕಾದ ಅಧಿಕಾರಿಗಳು ಕಾನೂನು ವಿರುದ್ಧವಾಗಿ ಕೆಲಸ ಮಾಡಿದ್ದಾರೆ ಎಂದು ದೂರಿದರು.
ಇದೇ ವೇಳೆ ಸ್ಥಳಕ್ಕಾಗಮಿಸಿದ ಆರ್ಟಿಒ ಅಧಿಕಾರಿ ದೇವಿಕಾ ಅವರಿಗೆ ಪ್ರತಿಭಟನಾಕಾರರು ತಮ್ಮ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಮನವಿ ಸಲ್ಲಿಸಿದರು. ಮನವಿ ಸ್ವೀಕರಿಸಿ ಮಾತನಾಡಿದ ಅವರು, ರಾಪಿಡೋ ವಾಹನಗಳ ಚಾಲನೆಯಿಂದ ಆಟೋ ಚಾಲಕರಿಗೆ ಅನಾನೂಕೂಲವಾಗಿದೆ ಎಂದು ಮನವಿ ನೀಡಲಾಗಿದೆ. ಆದರೆ ರ್ಯಾಪಿಡೋ ಕಂಪನಿಯವರು ಇದರ ಬಗ್ಗೆ ನ್ಯಾಯಾಲಯಕ್ಕೆ ಹೋಗಿದ್ದು, ನ್ಯಾಯಾಲಯದಲ್ಲಿ ಪ್ರಕರಣ ಇರುವುದರಿಂದ ನಾವು ಯಾವುದೇ ರೀತಿ ಕ್ರಮ ಜರುಗಿಸಲು ಆಗುವುದಿಲ್ಲ. ಆದರೂ ಎಲೆಕ್ಟ್ರಿಕ್ ವೈಟ್ ಬೋರ್ಡ್ ವಾಹನಗಳನ್ನು ತಪಾಸಣೆ ಮಾಡಿ ಅವರಿಗೆ ಎಚ್ವರಿಕೆ ನೀಡಲಾಗುತ್ತಿದೆ ಎಂದರು.
ಪ್ರತಿಭಟನೆಯಲ್ಲಿ ಕರ್ನಾಟಕ ಚಾಲಕರ ಒಕ್ಕೂಟದ ಅಧ್ಯಕ್ಷ ಜಿ.ನಾರಾಯಣ, ಜಿಲ್ಲಾಧ್ಯಕ್ಷ ಮುರುಗನ್, ನಗರಾಧ್ಯಕ್ಷ ಸತ್ಯನಾರಾಯಣ, ನಗರ ಉಪಾಧ್ಯಕ್ಷ ಸುರೇಶ್, ಮಹಿಳಾ ಚಾಲಕಿ ಛಾಯಾ, ಸಿದ್ದರಾಜು ಸೇರಿದಂತೆ ನೂರಾರು ಮಂದಿ ಪ್ರತಿಭಟನೆಯಲ್ಲಿ ಹಾಜರಿದ್ದರು.