ಪ್ರತಿನಿಧಿ ವರದಿ ಹುಣಸೂರು
ತಾಲೂಕಿನ ಗೋವಿಂದನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಾಚಳ್ಳಿ ಅಂಬೇಡ್ಕರ್ ನಗರದಲ್ಲಿ ೩೦ಕ್ಕೂ ಹೆಚ್ಚು ಕುಟುಂಬಗಳಿಗೆ ಮನೆಯ ಹಕ್ಕುಪತ್ರ ವಿತರಿಸಲು ಆಗ್ರಹಿಸಿ ದಲಿತ ಸಂಘರ್ಷ ಸಮಿತಿ ಸದಸ್ಯರು ಒತ್ತಾಯಿಸಿದರು.
ನಗರದ ತಾಲೂಕು ಕಚೇರಿ ಆವರಣದಲ್ಲಿ ಈ ಕುರಿತು ಶುಕ್ರವಾರ ಉಪ ತಹಸೀಲ್ದಾರ್ ನರಸಿಂಹಯ್ಯರಿಗೆ ಮನವಿ ಸಲ್ಲಿಸಿ ಮಾತನಾಡಿದ ಸಮಿತಿ ಜಿಲ್ಲಾ ಸಂಚಾಲಕ ನಿಂಗರಾಜ ಮಲ್ಲಾಡಿ, ಬಾಚಳ್ಳಿ ರಸ್ತೆಯ ಬಳಿಯಿರುವ ಅಂಬೇಡ್ಕರ್ ನಗರದಲ್ಲಿ ಸುಮಾರು ೮೦ ಬಡ ಕುಟುಂಬಗಳು ಸರ್ಕಾರಿ ಜಾಗದಲ್ಲಿ ಕಚ್ಚಾ ಮನೆಗಳನ್ನು ನಿರ್ಮಿಸಿಕೊಂಡು ಯಾವುದೇ ಮೂಲ ಸೌಲಭ್ಯಗಳಿಲ್ಲದೆ ಅತ್ಯಂತ ಸಂಕಷ್ಟದ ಬದುಕನ್ನು ಸಾಗಿಸುತ್ತಿದ್ದಾರೆ.
ಈ ಪೈಕಿ ೫೦ ಕುಟುಂಬಗಳಿಗೆ ೯೪ ಸಿಸಿ ಯೋಜನೆಯಡಿ ಮನೆಗಳ ಹಕ್ಕುಪತ್ರಗಳನ್ನು ಕೊಡಲಾಗಿದೆ. ಉಳಿದ ೩೦ ಬಡ ಕುಟುಂಬಗಳಿಗೆ ಹಕ್ಕುಪತ್ರ ನೀಡಿಲ್ಲ. ಕೂಡಲೇ ಈ ಕುಟುಂಬಗಳಿಗೆ ೯೪ ಸಿಸಿ ಮನೆಗಳ ಹಕ್ಕು ಪತ್ರ ಕೊಟ್ಟು, ಕುಡಿಯುವ ನೀರು, ಬೀದಿ ದೀಪ, ರಸ್ತೆ, ಚರಂಡಿ ಮುಂತಾದ ಸೌಲಭ್ಯಗಳನ್ನು ಕಲ್ಪಿಸಿಕೊಟ್ಟು ಬಡವರ ಸಂಕಷ್ಟದ ಬದುಕಿಗೆ ನೆರವಾಗಬೇಕು, ಅಧಿಕಾರಿಗಳು ಬಡವರ ಕಷ್ಟಗಳಿಗೆ ಇಚ್ಚಾಶಕ್ತಿಯಿಂದ ಸ್ಪಂದಿಸುತ್ತಿಲ್ಲವೆಂದು ಬೇಸರಿಸಿದರು.
ಮನವಿ ಸ್ವೀಕರಿಸಿದ ಉಪ ತಹಸೀಲ್ದಾರ್ ನರಸಿಂಹಯ್ಯ ಮಾತನಾಡಿ, ಈ ಬಗ್ಗೆ ಚುನಾವಣೆ ಮುಗಿದ ನಂತರ ನಮ್ಮ ಅಧಿಕಾರಿಗಳನ್ನು ಸ್ಥಳಕ್ಕೆ ಕಳುಹಿಸಿ ವರದಿ ತರಿಸಿಕೊಂಡು ಉಳಿದ ಬಡ ಕುಟುಂಬಗಳಿಗೆ ಮನೆಗಳ ಹಕ್ಕು ಪತ್ರವನ್ನು ಕೊಡಲು ಕ್ರಮ ಕೈಗೊಳ್ಳಲಾಗುವುದು ಎಂದರು.
ಈ ವೇಳೆ ಸಮಿತಿ ಮುಖಂಡ ಬಲ್ಲೇನಹಳ್ಳಿ ಕೆಂಪರಾಜು, ಹುಣಸೂರು ನಗರದ ಬೀದಿ ಬದಿ ವ್ಯಾಪಾರಿಗಳ ಸಂಘದ ಅಧ್ಯಕ್ಷರಾದ ನಾಗಣ್ಣ ದೇವಾಡಿಗ, ನಗರಸಭೆ ಮಾಜಿ ಅಧ್ಯಕ್ಷ ಲಕ್ಷ್ಮಣ್, ಪೌರಕಾರ್ಮಿಕ ಸಂಘದ ಮುರುಗೇಶ, ಮಾದು, ಅಂಬೇಡ್ಕರ್ ನಗರದ ವಾಸಿಗಳಾದ ದಾಸಪ್ಪ, ಶೋಭಾ, ಪಾರ್ವತಮ್ಮ, ಗಾಯಿತ್ರಿ ಮುಂತಾದವರು ಹಾಜರಿದ್ದರು.