ಅಳತೆ ತಿದ್ದುಪಡಿಯಲ್ಲಿ ಕರ್ತವ್ಯಲೋಪ ಸಾಬೀತು ಪ್ರಕರಣ
ಚಿಕ್ಕಮಾಳಿಗೆ ಕೊಳ್ಳೇಗಾಲ
ಪಟ್ಟಣದ ಈಡಿಗರ ಬೀದಿಯಲ್ಲಿರುವ ಆಸ್ತಿವೊಂದರ ಅಳತೆ ತಿದ್ದುಪಡಿಗೊಳಿಸುವಲ್ಲಿ ಕರ್ತವ್ಯಲೋಪವೆಸಗಿರುವ ದೂರಿಗೆ ಸಂಬಂದಿಸಿದಂತೆ ನಗರಸಭೆಯ ಹಿಂದಿನ ಪೌರಾಯುಕ್ತ ಸೇರಿ ನಾಲ್ವರು ಅಧಿಕಾರಿಗಳ ವಿರುದ್ಧ ಇಲಾಖಾ ವಿಚಾರಣೆ ನಡೆಸಲು ಪ್ರಕರಣವನ್ನು ನಗರಾಭಿವೃದ್ಧಿ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಪಿ.ಮಂಜುನಾಥ ಅವರು ಉಪ ಲೋಕಾಯುಕ್ತರಿಗೆ ವಹಿಸಿ ಆದೇಶಿಸಿದ್ದಾರೆ.
ಕೊಳ್ಳೇಗಾಲ ನಗರಸಭೆಯ ಹಿಂದಿನ ಪೌರಾಯುಕ್ತ, ಹಾಲಿ ಮೈಸೂರು ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಡಿ.ಕೆ.ಲಿಂಗರಾಜು, ನಿವೃತ್ತ ಪ್ರಥಮ ದರ್ಜೆ ಕಂದಾಯ ನಿರೀಕ್ಷಕ ಎಸ್.ಮಲ್ಲು, ನಗರಸಭೆಯ ಹಾಲಿ ಪ್ರಭಾರ ಕಂದಾಯ ನಿರೀಕ್ಷಕ ಆರ್.ಪ್ರದೀಪ್ ಕುಮಾರ್ ಹಾಗೂ ಹಿಂದಿನ ಕಂದಾಯಾಧಿಕಾರಿ, ಹಾಲಿ ಹನೂರು ಪಪಂ ಮುಖ್ಯಾಧಿಕಾರಿ ಅಶೋಕ್ ಉಪ ಲೋಕಾಯುಕ್ತರಿಂದ ಇಲಾಖೆ ತನಿಖೆಗೆ ಗುರಿಯಾದವರು.
ಪಟ್ಟಣದ ನಿವಾಸಿ ಓ.ಕೆ.ನಾಗೇಂದ್ರ ಹಾಗೂ ಆರ್.ಬಾಲರಾಜು ಪ್ರಕರಣದ ದೂರುದಾರು. ಇವರು 2019ರಲ್ಲಿ ಈ ನಾಲ್ವರು ಅಧಿಕಾರಿಗಳ ವಿರುದ್ಧ ಸರ್ಕಾರಿ ಪುದು ಜಾಗವನ್ನು ಸೇರಿಸಿ ವ್ಯಕ್ತಿಯೊಬ್ಬರ ಆಸ್ತಿಗೆ ಅಕ್ರಮವಾಗಿ ಸೇರಿಸಿ ನಮೂನೆ-3 ನೀಡಿದ್ದಾರೆ ಎಂದು ಚಾ.ಗರದ ಲೋಕಾಯುಕ್ತ ಇನ್ಸ್ ಪೆಕ್ಟರ್ ಗೆ ದೂರು ನೀಡಿದ್ದರು. ಈ ಕುರಿತು ಲೋಕಾಯುಕ್ತ ಇನ್ಸ್ ಪೆಕ್ಟರ್ ಇಲಾಖೆ ಕಾಯಿದೆ ಅನ್ವಯ ತನಿಖೆ ನಡೆಸಿ, ಮೇಲ್ನೋಟಕ್ಕೆ ದೂರಿನ ಆರೋಪ ದೃಢಪಟ್ಟಿರುವ ಬಗ್ಗೆ ಹಾಗೂ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮಕ್ಕಾಗಿ ಉಪ ಲೋಕಾಯುಕ್ತರಿಗೆ ಹಾಗೂ ನಗರಾಭಿವೃದ್ಧಿ ಇಲಾಖೆಗೆ ವರದಿ ಸಲ್ಲಿಸಿದ್ದರು. ಇದನ್ನು ಪರಿಶೀಲಿಸಿದ ಉಪ ಲೋಕಾಯುಕ್ತರು 2023 ಜೂ.22 ರಂದು ಸರ್ಕಾರಕ್ಕೆ ಪತ್ರ ಬರೆದಿದ್ದರು. ಅದರನ್ವಯ ಕರ್ನಾಟಕ ನಾಗರೀಕ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಗಳು, 1957ರ ನಿಯಮ 11ರಡಿ ಇಲಾಖಾ ವಿಚಾರಣೆ ನಡೆಸಲು ಪ್ರಕರಣವನ್ನು ಇದೇ ನಿಯಮಾವಳಿಯ ನಿಯಮ 14(ಎ)ರಡಿ ಪ್ರಕರಣವನ್ನು ಉಪ ಲೋಕಾಯುಕ್ತರಿಗೆ ವಹಿಸಲು ಸರ್ಕಾರ ತೀರ್ಮಾನಿಸಿದೆ.
ಹಾಗಾಗಿ, ಜು.2 ರಂದು ನಗರಾಭಿವೃದ್ಧಿ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಪಿ.ಮಂಜುನಾಥ ಅವರು ಉಪ ಲೋಕಾಯುಕ್ತರಿಗೆ ಪ್ರಕರಣವನ್ನು ವಹಿಸಿ ಆದೇಶಿಸಿದ್ದಾರೆ.
ಪ್ರಕರಣದ ಹಿನ್ನೆಲೆ ಹೀಗಿದೆ: ಕೊಳ್ಳೇಗಾಲ ಪಟ್ಟಣದ ಈಡಿಗರ ಬೀದಿಯಲ್ಲಿ ಅನುಕ್ರಮ ನಂ.432 ನಿವೇಶನ ಸಂಖ್ಯೆ 10/238 ಎಬಿಸಿರ ಸ್ವತ್ತಿನ ಅಳತೆಯು ನಗರಸಭೆಯ ಕಚೇರಿ ದಾಖಲೆಗಳಲ್ಲಿ 7.20×12 ಮೀಟರ್ (ಕ್ರಯಪತ್ರದ ಅಳತೆ ಪೂರ್ವ-ಪಶ್ಚಿಮ 47x ಉತ್ತರ-ದಕ್ಷಿಣ 35¾ ಅಡಿಗಳು) ಎಂದು ನಮೂದಿಸಿದ್ದು, ಲೇಟ್ ಎಂ.ಆರ್.ರಂಗಸ್ವಾಮಿ ಅವರ ಪತ್ನಿ ಮಹದೇವಮ್ಮ ಅವರಿಂದ ಪೌತಿ ಖಾತೆ ಬದಲಾವಣೆ ಸಮಯದಲ್ಲಿ ಅವರ ಪುತ್ರ ಆರ್.ನಾಗರಾಜು ಅವರು ನೀಡಿದ ಮನವಿ ಪತ್ರದಲ್ಲಿ ನಮೂದಿಸಿರುವ ಪೂರ್ವ-ಪಶ್ಚಿಮ 24xಉತ್ತರ-ದಕ್ಷಿಣ 49 ಅಡಿಗಳಿಗೆ ನಗರಸಭೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಈ ನಾಲ್ಕು ಅಧಿಕಾರಿಗಳು ಯಾವುದೇ ದಾಖಲಾತಿಗಳನ್ನು ಪರಿಶೀಲಿಸದೆ ಕ್ರಯಪತ್ರದ ಅಳತೆಗಿಂತ ಹೆಚ್ಚುವರಿಯಾಗಿ ಪೂರ್ವ-ಪಶ್ಚಿಮ 24 ಅಡಿ, ಉತ್ತರ-ದಕ್ಷಿಣ 13ಳಿ ಅಡಿಗಳು (ಒಟ್ಟು ವಿಸ್ತೀರ್ಣ ಸುಮಾರು 324 ಚದುರ ಅಡಿ) ಪುದುವಿನ ಜಾಗ ಸರ್ಕಾರಿ ಸ್ಥಳಕ್ಕೆ ನಮೂನೆ-3ಅನ್ನು ನಮೂದಿಸಿ, ಕರ್ತವ್ಯದಲ್ಲಿ ಲೋಪವೆಸಗಿದ್ದಾರೆ ಎನ್ನಲಾಗಿದೆ.