ಸಿಎಂ ಸಿದ್ದರಾಮಯ್ಯ ತವರಲ್ಲಿ ಆಡಳಿತ ಹಾಗೂ ವಿಪಕ್ಷಗಳ ಗುದ್ದಾಟ ತಾರಕಕ್ಕೇರಿದೆ.
ಜನಾಂದೋಲನ ಸಮಾವೇಶದಲ್ಲಿ ಜೆಡಿಎಸ್ ನಾಯಕರ ವಿರುದ್ಧ ಹಾಕಿರುವ ಫ್ಲೆಕ್ಸ್ ದೊಡ್ಡ ವಿವಾದ ಸೃಷ್ಟಿಮಾಡಿದೆ. ಮುಡಾದಿಂದ ಮಾಜಿ ಪ್ರಧಾನಿ ದೇವೇಗೌಡ ಕುಟುಂಬ ಅಕ್ರಮವಾಗಿ 20 ಸೈಟ್ ಪಡೆದಿದೆ ಎಂಬ ಬರಹದ ಫ್ಲೆಕ್ಸ್ ಎಲ್ಲೆಡೆ ರಾರಾಜಿಸುತ್ತಿದ್ದು, ಇದೇ ವಿಚಾರ ಜೆಡಿಎಸ್ ಕಾರ್ಯಕರ್ತರ ಆಕ್ರೋಶಕ್ಕೆ ಕಾರಣವಾಗಿದೆ.
ವಿವಾದಿತ ಫ್ಲೆಕ್ಸ್ ಗಳು ಮೈಸೂರಿನ ಪ್ರಮುಖ ಸರ್ಕಲ್ ಗಳಲ್ಲಿ ಹಾಕಲಾಗಿದ್ದು, ತೆರವು ಮಾಡುವಂತೆ ಜೆಡಿಎಸ್ ನಾಯಕರುಗಳು ಆಗ್ರಹಿಸಿದ್ದಾರೆ. ಈ ವೇಳೆ ಪೊಲೀಸರು ಹಾಗೂ ಮಾಜಿ ಸಚಿವ ಸಾರಾ ಮಹೇಶ್ ನಡುವೆ ವಾಗ್ಯುದ್ಧ ನಡೆದಿದೆ. ಈ ವೇಳೆ ಪರಿಸ್ಥಿತಿ ಹದಗೆಟ್ಟಿದ್ದು, ಪೋಲೀಸರು ಮಾಜಿ ಶಾಸಕ ಸಾರಾ ಮಹೇಶ್ ಮತ್ತು ಜೆಡಿಎಸ್ ಕಾರ್ಯಕರ್ತರನ್ನ ವಶಕ್ಕೆ ಪಡೆದಿದ್ದಾರೆ. ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಕುಟುಂಬವನ್ನ ಟಾರ್ಗೆಟ್ ಮಾಡಿ ಫ್ಲೆಕ್ಸ್ ಹಾಕಲಾಗಿದೆ. ಹೆಚ್ ಡಿ ದೇವೇಗೌಡ ಕುಟುಂಬ ಮುಡಾ ಸೈಟ್ ಗಳನ್ನ ಅಕ್ರಮವಾಗಿ ಪಡೆದಿದೆ ಎಂದು ಆರೋಪಿಸಿ ನಗರದೆಲ್ಲೆಡೆ ಕಾಂಗ್ರೆಸ್ಸಿಗರು ಫ್ಲೆಕ್ಸ್ ಗಳನ್ನು ಹಾಕಿದ್ದಾರೆ.
ಮಾಜಿ ಪ್ರಧಾನಿ ದೇವೇಗೌಡರ ಕುಟುಂಬದ ಭೂ ಕಬಳಿಕೆಯ ಪಕ್ಷಿ ನೋಟ ಎಂಬ ಹೆಸೆರಿನಲ್ಲಿ ಫ್ಲೆಕ್ಸ್ ಅಳವಡಿಸಲಾಗಿದ್ದು, ಫೆಬ್ರವರಿ ತಿಂಗಳಿನಲ್ಲಿ ಬಿಜೆಪಿ ನೀಡಿರುವ ಜಾಹೀರಾತು ಎಂದು ಮುದ್ರಿಸಲಾಗಿದೆ. ಮಾಜಿ ಪ್ರಧಾನಿ ದೇವೇಗೌಡರ ಕುಟುಂಬದವರ 20 ಹೆಸರುಗಳನ್ನು ಬರೆದು ಎಷ್ಟು ಅಳತೆಯ ನಿವೇಶನ ಮಂಜೂರಾಗಿದೆ ಎಂಬ ಮಾಹಿತಿಯನ್ನು ಫ್ಲೆಕ್ಸ್ ಗಳಲ್ಲಿ ಪ್ರಕಟಿಸಲಾಗಿದೆ. ಹೆಚ್ ಡಿ ಕುಮಾರಸ್ವಾಮಿಯವರೇ ಹೇಳಿ, ಇನ್ನೂ ನೀವು ಬೇರೆಯವರ ಬಗ್ಗೆ ಪ್ರಶ್ನಿಸುವ ನೈತಿಕ ಹಕ್ಕು ಉಳಿಸಿಕೊಂಡಿದ್ದೀರಾ? ಎಂದು ಡಿ-ನೋಟಿಫಿಕೇಷನ್ ವಿವರಗಳನ್ನು ಫ್ಲೆಕ್ಸ್ ಗಳಲ್ಲಿ ಹಾಕಿ ಕೈ ನಾಯಕರು ಕೌಂಟರ್ ಕೊಡೋ ಪ್ರಯತ್ನ ಮಾಡಿದ್ದಾರೆ.
ಬಿಜೆಪಿ ಹಿರಿಯ ನಾಯಕ ಹಾಗೂ ಎಂ ಎಲ್ ಸಿ ಎನ್.ರವಿಕುಮಾರ್ ಮತ್ತು ಶಾಸಕ ಶ್ರೀವತ್ಸ ಅವರು ಶಾಸಕ ಸಾರಾ ಮಹೇಶ್ ಮತ್ತು ಬೆಂಬಲಿಗರನ್ನ ಪೋಲೀಸರು ವಶಕ್ಕೆ ಪಡೆದಿರುವುದನ್ನ ಖಂಡಿಸಿ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.