ಪ್ರತಿನಿಧಿ ವರದಿ ತಲಕಾಡು
ತಾಲೂಕು ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಪರಭಾರೆ ನೋಂದಣಿ ನಡೆಸಿರುವ ಆಸ್ತಿಗಳಿಗೆ ಸಕಾಲದಲ್ಲಿ ನೂತನ ಋಣಭಾರ ಪ್ರಮಾಣಪತ್ರ ದೊರೆತಿಲ್ಲ. ಪರಿಣಾಮ, ನೋಂದಣಿ ಮಾಡಿಸಿರುವ ಸಾರ್ವಜನಿಕರು ಉಪ ನೊಂದಣಾಧಿಕಾರಿ ಕಚೇರಿಗೆ ನಿತ್ಯ ಅಲೆಯುವ ತೊಂದರೆ ಅನುಭವಿಸುತ್ತಿದ್ದಾರೆ.ಆದರೆ ಜನರ ಸಂಕಟ, ನೋವು ಕೇಳೋರೇ ದಿಕ್ಕಿಲ್ಲದಂತಾಗಿದೆ.
ಬ್ಯಾಂಕ್ ಮತ್ತಿತರ ಸಾಲ ಸೌಲಭ್ಯಕ್ಕೆ ಸ್ವತ್ತಿನ ಮಾಲೀಕರು ನೂತನ ಋಣಭಾರ ಪ್ರಮಾಣಪತ್ರ ಪಡೆಯಬೇಕಿದ್ದು, ಇದು ಸಕಾಲದಲ್ಲಿ ದೊರೆಯದೆ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಇಲ್ಲಿನ ಉಪ ನೊಂದಣಾಧಿಕಾರಿ ಕಚೇರಿಯಲ್ಲಿ ಹೊಸದಾಗಿ ಪಡೆಯುವ ಋಣಭಾರ ಪತ್ರದಲ್ಲಿ ನೂತನವಾಗಿ ನಡೆಸಿದ ವಹಿವಾಟು ನಮೂದಾಗಬೇಕಿದ್ದು, ಕೆಲಸಗಳು ತೀರಾ ವಿಳಂಬವಾಗಿದ್ದು ಸ್ವತ್ತಿನ ಮಾಲೀಕರಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ.
ಕೆಲಸ ಇಂದು ಆಗುತ್ತದೆ, ನಾಳೆ ಆಗುತ್ತದೆ ಎಂಬ ನಿರೀಕ್ಷೆಯಲ್ಲಿ ದೈನಂದಿನ ಕೆಲಸ ಕಾರ್ಯ ಬಿಟ್ಟು, ಹದಿನೈದು ದಿನಗಳಿಂದ ದೂರದ ತಾಲ್ಲೂಕು ಕೇಂದ್ರಕ್ಕೆ ಗ್ರಾಮೀಣ ಜನರು ಅಲೆದಾಟ ನಡೆಸಿದ್ದಾರೆ.
ರಾಜ್ಯಾದ್ಯಂತ ಸಬ್ ರಿಜಿಸ್ಟ್ರಾರ್ ಕಚೇರಿಗಳಲ್ಲಿ ಉಂಟಾಗಿರುವ ಸರ್ವರ್ ಸಮಸ್ಯೆ ಇದಕ್ಕೆ ಕಾರಣ ಎನ್ನಲಾದರೂ ಸಮಸ್ಯೆಗೆ ಪರಿಹಾರ ಯಾವಾಗ ಎಂದು ತಿಳಿಯದೆ ಜನ ಬೆಳಗ್ಗೆಯಿಂದ ಸಂಜೆವರೆಗೂ ನೊಂದಣಿ ಕೇಂದ್ರಗಳ ಬಳಿ ಕಾಯುತ್ತಿದ್ದಾರೆ. ಸಂಬಂಧಪಟ್ಟವರು ಇತ್ತಕಡೆ ಗಮನಹರಿಸಿ ಶೀಘ್ರ ಸಮಸ್ಯೆ ಪರಿಹರಿಸಿಕೊಡುವಂತೆ ಬೇಸತ್ತ ನೊಂದಣಿದಾರರು ಒತ್ತಾಯಿಸಿದ್ದಾರೆ.
ಹೇಳಿಕೆ
ರಾಜ್ಯಾದ್ಯಂತ ಸರ್ವರ್ ಸಮಸ್ಯೆಯಿಂದ ಹೊಸದಾಗಿ ಇಸಿ ಪಡೆಯುವ ಗ್ರಾಹಕರಿಗೆ ತೊಂದರೆಯಾಗಿದೆ. ಸಮಸ್ಯೆ ಶೀಘ್ರ ಪರಿಹಾರಕ್ಕೆ ಬೆಂಗಳೂರಿನ ನೋಂದಣಿ ಹಿರಿಯ ಅಧಿಕಾರಿಗಳ ಗಮನಕ್ಕೆ ತರಲಾಗಿದೆ.
ಸಹನಾ
ಉಪನೊಂದಣಾಧಿಕಾರಿ, ತಿ.ನರಸೀಪುರ