ಪ್ರತಿನಿಧಿ ವರದಿ ಹೊಳೆನರಸೀಪುರ
ತಾಲೂಕಿನ ವೀರಶೈವ ಲಿಂಗಾಯತ ಮಹಾವೇದಿಕೆ ಸಮಾಜಮುಖಿಯಾಗಿ ಅನೇಕ ಕೆಲಸಗಳನ್ನು ಮಾಡುತ್ತಾ ಬಂದಿದೆ ಎಂದು ಹಳ್ಳಿ ಮೈಸೂರಿನ ಸಮಾಜ ಸೇವಕ ಹಾಗೂ ರಾಜ್ಯ ಪ್ರಶಸ್ತಿ ವಿಜೇತ ಪುರಸ್ಕೃತ ಡಾ.ಎಚ್.ಸಿ. ಪ್ರಕಾಶ್ ತಿಳಿಸಿದರು.
ತಾಲೂಕಿನ ನೆಗ್ಗಲಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲಾ ಮಕ್ಕಳಿಗೆ ನೀರಿನ ಬಾಟಲ್ ಗಳನ್ನು ವಿತರಿಸಿ ಮಾತನಾಡಿದರು. ಸರ್ಕಾರಿ ಶಾಲೆಗಳನ್ನು ಬಲವರ್ಧನೆ ಮಾಡುವ ದೃಷ್ಟಿಯಿಂದ ಸರ್ಕಾರಿ ಶಾಲಾ ಮಕ್ಕಳಿಗೆ ಅಗತ್ಯವಿರುವ ಎಲ್ಲ ಭೌತಿಕ ವ್ಯವಸ್ಥೆಗಳನ್ನು ಮಾಡಿಕೊಡುವ ಉದ್ದೇಶವಾಗಿದೆ. ಎಲ್ಲ ಪೋಷಕರು ತಮ್ಮ ಮಕ್ಕಳನ್ನು ಕಡ್ಡಾಯವಾಗಿ ಸರ್ಕಾರಿ ಶಾಲೆಗೆ ಸೇರಿಸಿ ಶಾಲೆಗಳಲ್ಲಿ ಮಕ್ಕಳಿಗೆ ಸಿಗುವ ಎಲ್ಲ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಳ್ಳುವುದರ ಜತೆಗೆ, ಸರ್ಕಾರಿ ಶಾಲೆಗಳ ಉಳಿವಿಗೆ ಮುಂದಾಗಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾಮದ ಮುಖಂಡರಾದ ಸೋಮಶೇಖರ್ ವಹಿಸಿದ್ದರು. ವೇದಿಕೆಯಲ್ಲಿ ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ರಾಜಶೇಖರ್, ವೀರಶೈವ ಲಿಂಗಾಯತ ಮಹಾವೇದಿಕೆಯ ಜಿಲ್ಲಾ ಸಂಚಾಲಕ ಧರ್ಮ, ಹಳ್ಳಿಮೈಸೂರು ಹೋಬಳಿ ಅಧ್ಯಕ್ಷರಾದ ಮಹಂತೇಶ್, ಶುಚಿ-ರುಚಿ ಹೋಟೆಲ್ ಮಾಲೀಕರಾದ ಸ್ವಾಮಣ್ಣ, ಗ್ರಾಮದ ಏಕಾಂತ ,ಪ್ರಕಾಶ್, ಹರೀಶ್, ರಮೇಶ್, ಸಂಪತ್, ಗೌರಮ್ಮ ಮತ್ತಿತರರು ಇದ್ದರು. ಸಹ ಶಿಕ್ಷಕ ರಮೇಶ್ ಕಾರ್ಯಕ್ರಮ ನಿರೂಪಿಸಿದರು. ಮುಖ್ಯ ಶಿಕ್ಷಕ ರಾಜಶೇಖರಪ್ಪ ವಂದಿಸಿದರು.