ತಮ್ಮ ವಿರುದ್ಧ ಸಿಬಿಐ ತನಿಖೆಗೆ ನೀಡಿದ್ದ ಅನುಮತಿ ರದ್ದುಗೊಳಿಸುವಂತೆ ಶಿಫಾರಸು ಮಾಡಲು ಕರ್ನಾಟಕ ಸಚಿವ ಸಂಪುಟ ತೆಗೆದುಕೊಂಡಿರುವ ತೀರ್ಮಾನದ ಬಗ್ಗೆ ಮೌನ ಮುರಿದಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ‘ಈ ನಿರ್ಣಯ ತೆಗೆದುಕೊಂಡಿರುವ ಸಂಪುಟ ಸಭೆಗೆ ನಾನು ಹೋಗಿರಲಿಲ್ಲ. ಅದು ಸರ್ಕಾರ ಕೈಗೊಂಡ ನಿರ್ಧಾರವಾಗಿದೆ’ ಎಂದು ಸ್ಪಷ್ಟಪಡಿಸಿದ್ದಾರೆ.
‘ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಕಷ್ಟು ಲೋಪದೋಷಗಳಿವೆ. ನನಗೆ ನಾನೇ ವಕೀಲನಾಗಲು ಬಯಸುವುದಿಲ್ಲ. ಅಂದು ನಾನು ಸಚಿವ ಸಂಪುಟ ಸಭೆಗೆ ಹಾಜರಾಗಿಲ್ಲ. ಅದು ಸರ್ಕಾರ ತೆಗೆದುಕೊಂಡ ನಿರ್ಧಾರ. ನನ್ನ ವಿರುದ್ಧದ ತನಿಖೆಗೆ ಯಾವುದೇ ಅನುಮತಿ ನೀಡಿದರೂ ಅದು ಅಸಿಂಧು ಎಂದು ನಾನು ಅರ್ಜಿ ಸಲ್ಲಿಸಿದ್ದೆ. ನನ್ನ ವಿರುದ್ಧ ತನಿಖೆಗೆ ಅಂದಿನ ಅಡ್ವೋಕೇಟ್ ಜನರಲ್ ಅನುಮತಿ ನೀಡಿದ್ದು ಸರಿಯಲ್ಲ. ಈಗಿನ ನಿರ್ಧಾರದ ಬಗ್ಗೆ ನಾನೇನೂ ಹೆಚ್ಚು ಪ್ರತಿಕ್ರಿಯೆ ನೀಡುವುದಿಲ್ಲ’ ಎಂದರು.
‘ಇದು ಕಾಂಗ್ರೆಸ್ ಸರ್ಕಾರದ ಪಕ್ಷಪಾತಿ ನಿರ್ಧಾರ’ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ‘ನಾನು ಏನೂ ತಪ್ಪು ಮಾಡಿಲ್ಲ. ಅಂದಿನ ಸರ್ಕಾರ ಕೈಗೊಂಡಿದ್ದು ರಾಜಕೀಯ ನಿರ್ಧಾರ. ಇಂದಿನ ಸರ್ಕಾರ ಕೈಗೊಂಡಿದ್ದು ಕಾನೂನಾತ್ಮಕ ನಿರ್ಧಾರ’ ಎಂದು ಸ್ಪಷ್ಟಪಡಿಸಿದರು. ಇದೇ ವೇಳೆ ‘ಜಾತಿಗಣತಿ ಮೂಲವರದಿ ನಾಪತ್ತೆಯಾಗಿದ್ದು, ರಾಜಕೀಯ ತಂತ್ರವೇ, ವರದಿಯನ್ನು ಮುಚ್ಚಿಡಲಾಗುತ್ತಿದೆಯೇ?’ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು ‘ನಾವು ಘೋಷಿಸಿರುವ ಜಾತಿಗಣತಿ ಅಥವಾ ಸಾಮಾಜಿಕ ಮತ್ತು ಆರ್ಥಿಕ ಸಮೀಕ್ಷೆಗೆ ನಾವು ಬದ್ಧರಾಗಿದ್ದೇವೆ. ಅದು ವ್ಯವಸ್ಥಿತವಾಗಿ ನಡೆಯಬೇಕಿದೆ. ಈ ಬಗ್ಗೆ ನಾನು ಹೆಚ್ಚೇನೂ ಹೇಳಲ್ಲ’ ಎಂದರು.