ಜಾಸ್ತಿಯಾದರೆ ಇದರಲ್ಲಿ ಸ್ವಲ್ಪವನ್ನು ಕೋಟ್ ಮಾಡಿಕೊಳ್ಳುವುದು
ರಾಮನಗರ : ದ್ವೇಷ ರಾಜಕಾರಣ ಮಾಡುತ್ತಾ, ಎದುರಾಳಿಗಳನ್ನು ಬೆದರಿಸಿಕೊಂಡು ಕ್ಷೇತ್ರದಲ್ಲಿ ಉಸಿರುಗಟ್ಟಿಸುವ ವಾತಾವರಣ ನಿರ್ಮಿಸಿರುವುದೇ ಡಿ.ಕೆ. ಸುರೇಶ್ ಅವರ ಸಾಧನೆ ಎಂದು ಬಿಜೆಪಿ ಶಾಸಕ ಡಾ.ಸಿ.ಎನ್. ಅಶ್ವತ್ಥನಾರಾಯಣ ತಿಳಿಸಿದರು.
ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ನಿಜವಾಗಿಯೂ ಅಭಿವೃದ್ಧಿ ಕೆಲಸಗಳಾಗಿದ್ದರೆ ಅದು ನಮ್ಮ ಕಾಲದಲ್ಲಿ. ಜನರು ಕೂಲಿ ಕೊಡಬೇಕಿರುವುದು ನಮಗೇ ಹೊರತು ಅವರಿಗಲ್ಲ ಎಂದರು.
ರಾಮನಗರದ ಕುಡಿಯುವ ನೀರಿನ ಯೋಜನೆ ಸೇರಿದಂತೆ ಹಲವು ಯೋಜನೆಗಳನ್ನು ಜಾರಿಗೆ ತಂದಿದ್ದು ನಾವು. ಆ ಯೋಜನೆಗಳನ್ನು ತಮ್ಮದೆಂದು ಹೇಳಿಕೊಳ್ಳುವವರು, ಸಂಸದರಾಗಿ ಹತ್ತು ವರ್ಷಗಳಲ್ಲಿ ತಾವು ಮಾಡಿರುವ ಸಾಧನೆಯ ರಿಪೋರ್ಟ್ ಕಾರ್ಡ್ ಬಿಡುಗಡೆ ಮಾಡಲಿ ಎಂದರು.
ರಾಷ್ಟ್ರೀಯ ಹೆದ್ದಾರಿಗಳ ನಿರ್ಮಾಣ, ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯ, ಸಂಸ್ಕೃತ ವಿಶ್ವವಿದ್ಯಾಲಯ, ಜಲ ಜೀವನ್ ಮಿಷನ್, ರಸ್ತೆಗಳ ನಿರ್ಮಾಣ, ಜಿಟಿಟಿಸಿ, ಸತ್ತೆಗಾಲ ನೀರಾವರಿ ಯೋಜನೆಗಳನ್ನು ನಾವು ಜಾರಿಗೆ ತಂದಿದ್ದೇ ವಿನಾ ಅವರಲ್ಲ ಎಂದರು.
ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್ಡಿಎ ನಿಚ್ಚಳ ಬಹುಮತ ಗಳಿಸಲಿದ್ದು, ಮೋದಿ ಅವರು ಮೂರನೇ ಸಲ ಪ್ರಧಾನಿಯಾಗುವುದರಲ್ಲಿ ಅನುಮಾನವೇ ಇಲ್ಲ. ದೇಶವನ್ನು ಅಭಿವೃದ್ಧಿ ಪಥದಲ್ಲಿ ಕೊಂಡೊಯ್ಯುವುದಕ್ಕಾಗಿ ಬಿಜೆಪಿಯ ಸಂಕಲ್ಪ ಪತ್ರದ ಹೆಸರಿನಲ್ಲಿ ಪ್ರಣಾಳಿಕೆ ಬಿಡುಗಡೆ ಮಾಡಿದೆ ಎಂದರು.
ನಾರಿಶಕ್ತಿ, ಯುವಶಕ್ತಿ, ರೈತ ಶಕ್ತಿ ಸೇರಿದಂತೆ ಹಲವು ಯೋಜನೆಗಳನ್ನು ಈಗಾಗಲೇ ಜಾರಿಗೆ ತಂದಿದ್ದು, ಪ್ರಣಾಳಿಕೆಯಲ್ಲಿ ಪ್ರಸ್ತಾಪಿಸಿರುವ ಅಂಶಗಳು ಹಿಂದಿನ ಯೋಜನೆಗಳಿಗೆ ಮತ್ತಷ್ಟು ಬಲ ತುಂಬಲಿದೆ. 70 ವರ್ಷ ದಾಟಿದ ವೃದ್ಧರಿಗೆ ಉಚಿತ ಆರೋಗ್ಯ ಸೇವೆ, ಯುವ ಸಮುದಾಯಕ್ಕೆ ಉದ್ಯೋಗಾವಕಾಶದೊಂದಿಗೆ ನಿರುದ್ಯೋಗ ಇಳಿಕೆಗೂ ಕ್ರಮ ಕೈಗೊಂಡಿದೆ ಎಂದರು.
ರೈತರನ್ನು ಆರ್ಥಿಕವಾಗಿ ಮತ್ತಷ್ಟು ಸ್ವಾವಲಂಬಿಗಳಾಗಿಸಲು ವೈಜ್ಞಾನಿಕ ಕೃಷಿ ಉತ್ತೇಜನಕ್ಕೆ ಯೋಜನೆಗಳನ್ನು ರೂಪಿಸಿದೆ. ಮಹಿಳೆಯರನ್ನು ಲಕ್ಷಾಧಿಪತಿಗಳಾಗಿಸುವ ಮೂಲಕ ಅವರಿಗೆ ಆರ್ಥಿಕ ಬಲ ತುಂಬಲು ಸ್ವಯಂ ಉದ್ಯೋಗ, ಮುದ್ರಾ ಯೋಜನೆ ಸೇರಿದಂತೆ ಹಲವು ಯೋಜನೆಗಳನ್ನು ಮೋದಿ ಸರ್ಕಾರ ಜಾರಿಗೆ ತಂದಿದೆ ಎಂದು ತಿಳಿಸಿದರು.
ಬಿಜೆಪಿಯ ಸಂಕಲ್ಪ ಪತ್ರಕ್ಕೂ, ಕಾಂಗ್ರೆಸ್ನ ನ್ಯಾಯಪತ್ರಕ್ಕೂ ಹೋಲಿಕೆ ಮಾಡಲಾಗದು. ಅವರ ಪ್ರಣಾಳಿಕೆಯಲ್ಲೂ ದೇಶದ ಚಿತ್ರಗಳ ಬದಲು, ವಿದೇಶಗಳ ಚಿತ್ರ ಬಳಸಲಾಗಿದೆ. ಇದರಲ್ಲೇ ಗೊತ್ತಾಗುತ್ತದೆ ದೇಶ ಮತ್ತು ಜನರ ಪರವಾದ ಅವರ ಕಾಳಜಿ ಎಂತಹದ್ದೆಂದು ಎಂದರು.
ಬಿಜೆಪಿ ಜಿಲ್ಲಾಧ್ಯಕ್ಷ ಆನಂದ ಸ್ವಾಮಿ, ಮುಖಂಡರಾದ ಡಿ. ಗಿರಿಗೌಡ, ಗೌತಮ್ ಗೌಡ, ಜಯಕುಮಾರ್, ಮೋಹನ್, ಅಶ್ವತ್ಥ, ಕಾಳಯ್ಯ, ಲೀಲಾವತಿ ಇತರರು ಇದ್ದರು.