ಪ್ರತಿನಿಧಿ ವರದಿ ಚಾಮರಾಜನಗರ
ನಗರದ ಜಿಲ್ಲಾಡಳಿತ ಭವನದ ಎದುರಿರುವ ಡಾ.ಬಿ.ಆರ್.ಅಂಬೇ ಡ್ಕರ್ ಅವರ ಪುತ್ಥಳಿ ಎದುರು ಬಸವೇಶ್ವರರ ರಾಜ ಪ್ರಭುತ್ವ ಸಂಕೇತವುಳ್ಳ ಪುತ್ಥಳಿ ನಿರ್ಮಾಣ ಕಾಮಗಾರಿ ಸ್ಥಗಿತಗೊಳಿಸಿ, ಸ್ಥಳಾಂತರ ಮಾಡಬೇಕು ಎಂದು ಡಾ.ಅಂಬೇಡ್ಕರ್ ಪೀಪಲ್ಸ್ ಪಾರ್ಟಿ ಯುವ ಘಟಕದ ರಾಜ್ಯಾಧ್ಯಕ್ಷ ಸಿ.ಎಂ.ಕೃಷ್ಣ ಒತ್ತಾಯಿಸಿದರು.
ಸರ್ಕಾರಿ ಹಾಗೂ ಸಾರ್ವಜನಿಕ ಇತರೆ ಯಾವುದೇ ಸ್ಥಳಗಳಲ್ಲಿ ಸಂತರು, ಶರಣರು, ಗಣ್ಯ ವ್ಯಕ್ತಿಗಳ ಪ್ರತಿಮೆ ನಿರ್ಮಾಣ ಮಾಡುವುದಕ್ಕೆ ಸಂಬಂಧಿಸಿದಂತೆ ದೇಶದ ಸರ್ವೋಚ್ಚ ನ್ಯಾಯಾಲಯದ ಆದೇಶ ಮತ್ತು ಕರ್ನಾಟಕ ಸರ್ಕಾರದ ಸುತ್ತೋಲೆ ಹಾಗೂ ನಿರ್ದೇಶನಗಳಿದ್ದರೂ ಜಿಲ್ಲಾಡಳಿತ ಸರ್ಕಾರದ ನಿಯಮಗಳನ್ನು ಪಾಲಿಸದೆ ಅನಧಿಕೃತವಾಗಿ ಪುತ್ತಳಿ ನಿರ್ಮಾಣ ಮಾಡುತ್ತಿದೆ. ಜಿಲ್ಲಾಡಳಿತ ಈಗಲಾದರೂ ಎಚ್ಚೆತ್ತುಕೊಂಡು ಪುತ್ತಳಿ ನಿರ್ಮಾಣ ಕಾಮಗಾರಿಯನ್ನು ಸ್ಥಗಿತಗೊಳಿಸ ಬೇಕಿದೆ ಎಂದು ಸುದ್ದಿಗೋಷ್ಠಿಯಲ್ಲಿ ಅವರು ಆಗ್ರಹಿಸಿದರು.
ಅಂಬೇಡ್ಕರ್ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಸಿ.ಕೆ.ಮಂಜುನಾಥ ಮಾತನಾಡಿ, ಅಂಬೇಡ್ಕರ್ ಅವರು ನೀಡಿದ ಸಂವಿಧಾನದಡಿಯಲ್ಲಿ ದೇಶ ಇನ್ನೂ ಸುಭದ್ರವಾಗಿದೆ. ಇದು ಪ್ರಜಾಪ್ರಭುತ್ವ ಮೌಲ್ಯಗಳನ್ನು ಒಳಗೊಂಡ ಸಂವಿಧಾನವಾಗಿದೆ. ಆದರೆ ಕತ್ತಿ, ಗುರಾಣಿ ಹಿಡಿದುಕೊಂಡಿರುವ ಬಸವಣ್ಣ ಅವರ ಪ್ರತಿಮೆ ರಾಜಪ್ರಭುತ್ವವನ್ನು ಸೂಚಿಸುವ ಪ್ರತೀಕವಾಗಿದೆ. ಜಿಲ್ಲಾಡಳಿತ ಭವನದ ಮುಂಭಾಗದಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಅವರ ಪುತ್ಥಳಿ ಪ್ರಜಾಪ್ರಭುತ್ವವನ್ನು ಪ್ರತೀಕಗೊಳಿಸುವ ಶಿಲ್ಪವಾಗಿದೆ. ಆದರ ಎದುರು ಬಸವೇಶ್ವರರ ರಾಜಪ್ರಭುತ್ವ ಸಂಕೇತವುಳ್ಳ ವಿನ್ಯಾಸ ಸೂಕ್ತವಲ್ಲ. ಬಿಜ್ಜಳನ ಆಸ್ಥಾನದ ವಿನ್ಯಾಸದ ಪುತ್ಥಳಿ ಬಿಟ್ಟು, ಸಾಮಾಜಿಕ ಸಮಾನತೆ, ಸ್ವಾಮ್ಯ ಸ್ವಭಾವದ ಸಾಂಸ್ಕೃತಿಕ ನಾಯಕ ಬಸವೇಶ್ವರರ ಮೂರ್ತಿ ಸ್ಥಾಪಿಸಲಿ ಎಂದರು.
ಮುಖಂಡರಾದ ಸೋಮಸುಂದರ್, ಅಂಬರೀಶ್, ನಾಗೇಶ್ ಇದ್ದರು.