*ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ
* ಹುಣಸೂರು ಘಟಕದಲ್ಲಿ ಚುನಾವಣಾ ಪ್ರಚಾರ ಸಭೆ
ಪ್ರತಿನಿಧಿ ವರದಿ ಹುಣಸೂರು
೧೦ ವರ್ಷಗಳಿಂದ ಸುಳ್ಳು ಭರವಸೆಗಳನ್ನೇ ನೀಡಿದ ಮೋದಿ ಸರ್ಕಾರ ಬೇಕಾ ಅಥವಾ ನುಡಿದಂತೆ ನಡೆಯುತ್ತಿರುವ ಕಾಂಗ್ರೆಸ್ ಸರ್ಕಾರ ಬೇಕಾ ಎನ್ನುವುದನ್ನು ಜನತೆ ತೀರ್ಮಾನಿಸುವ ಕಾಲ ಸನ್ನಿಹಿತವಾಗಿದೆ ಎಂದು ರಾಜ್ಯದ ಮುಖ್ಯಮಂತ್ರಿ ಸಿದ್ಧರಾಮಯ್ಯ ಅಭಿಪ್ರಾಯ ಪಟ್ಟರು.
ಲೋಕಸಭಾ ಚುನಾವಣೆಯ ಹಿನ್ನಲೆಯಲ್ಲಿ ಕಾಂಗ್ರೆಸ್ ಪಕ್ಷದ ಹುಣಸೂರು ಘಟಕದ ವತಿಯಿಂದ ಶನಿವಾರ ನಗರದ ಮುನೇಶ್ವರ ಕಾವಲ್ ಮೈದಾನದಲ್ಲಿ ಆಯೋಜಿಸಿದ್ದ ಚುನಾವಣಾ ಪ್ರಚಾರ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.
೧೦ ವರ್ಷಗಳ ಮೋದಿ ನೇತೃತ್ವದ ಎನ್ಡಿಎ ಸರ್ಕಾರಕ್ಕೆ ಮತ್ತೆ ಮತ ಯಾಕೆ ಹಾಕಬಾರದು ಎನ್ನುವುದನ್ನು ಜನತೆ ಕಾಂಗ್ರೆಸ್ ಮತ್ತು ಬಿಪಿಪಿ ಆಡಳಿತವನ್ನ ತುಲನೆ ಮಾಡಿ ನಿರ್ಧರಿಸಬೇಕು. ಮೋದೀಜಿಯವರಿಗೆ ಈ ದೇಶದ ನಿರುದ್ಯೋಗ ಸಮಸ್ಯೆ, ರೈತರ ಸಮಸ್ಯೆ, ಬರಗಾಲ ಇದ್ಯಾವುದರ ಬಗ್ಗೆಯೂ ಯೋಚಿಸುವಷ್ಟು ಪುರುಸೋತ್ತಿಲ್ಲ ಎಂದು ವ್ಯಂಗವಾಡಿದರು.
ರೈತ ಚಳುವಳಿಯಲ್ಲಿ ಮೃತಪಟ್ಟ ೭೫೦ ರೈತರ ಕುರಿತು ಚಕಾರ ಎತ್ತಿಲ್ಲ. ರಾಜ್ಯದಲ್ಲಿ ಬರಗಾಲ ಇದ್ದರೂ ಬಂದು ನೋಡಲಿಲ್ಲ. ಈ ಹಿಂದೆ ಅತಿವೃಷ್ಟಿಯಿಂದ ಆನಾಹುತವಾದರೂ ನೋಡಲು ಬರಲಿಲ್ಲ. ಆದರೆ ಕಾಂಗ್ರೆಸ್ ಪಕ್ಷ ನುಡಿದಂತೆ ನಡೆದಿದೆ. ರಾಜ್ಯ ಕಾಂಗ್ರೆಸ್ ನೀಡಿದ್ದ ಭರವಸೆಯಂತೆ ೫ ಗ್ಯಾರಂಟಿಗಳನ್ನು ಜಾರಿಗೊಳಿಸಿದೆ. ಸಮಾಜದ ಎಲ್ಲ ವರ್ಗಗಳಿಗೂ ಸಮಾನತೆಯನ್ನು ಸಂವಿಧಾನದ ಆಶಯದಂತೆ ನೀಡಿದೆ. ಇದನ್ನು ಬಿಜೆಪಿ ಅನುಸರಿಸುವುದಿಲ್ಲ ಎಂದು ಬೇಸರಿಸಿದರು.
ಮೋದೀಜಿ ಜನರಿಗೆ ಸುಳ್ಳು ಹೇಳಿ ದಾರಿ ತಪ್ಪಿಸುತ್ತಿದ್ದೀರಿ: ಬಿಜೆಪಿಯ ಕೆಲ ನಾಯಕರು ಸಂವಿಧಾನ ಬದಲಾವಣೆಯ ಕುರಿತು ಆಗಾಗ ಹೇಳಿಕೆ ನೀಡಿದರೂ ಅವರ ಮೇಲೆ ಮೋದಿ ಕ್ರಮಕೈಗೊಳ್ಳಲಿಲ್ಲ. ಸಂವಿಧಾನ ಬದಲಾವಣೆ ಬಿಜೆಪಿ ಹಿಡನ್ ಅಜೆಂಡಾ. ಬರಪರಿಹಾರ ನೀಡುವಲ್ಲೂ ವಿಳಂಬ ನೀತಿ ಅನುಸರಿಸಿ ರೈತರಿಗೆ ಅನ್ಯಾಯವೆಸಗುತ್ತಿದೆ. ಮೋದೀಜಿ ನೀವು ಜನರಿಗೆ ಸುಳ್ಳು ಹೇಳಿ ದಾರಿ ತಪ್ಪಿಸುತ್ತಿದ್ದೀರಿ. ಆದರೆ ಜನ ಈಗ ಅರ್ಥ ಮಾಡಿಕೊಂಡಿದ್ದಾರೆ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಜನತೆ ಬಿಜೆಪಿಯನ್ನು ಬೆಂಬಲಿಸುವುದಿಲ್ಲವೆನ್ನುವ ವಿಶ್ವಾಸ ನನ್ನದು. ಮೈಸೂರು ಕೊಡಗು ಲೋಕಸಭಾ ಕ್ಷೇತ್ರದ ಅಭ್ಯರ್ಥಿಯನ್ನು ತಾಲೂಕಿನ ಜನತೆ ೫೦ ಸಾವಿರ ಮತಗಳ ಲೀಡ್ ನೀಡುವ ಮೂಲಕ ಮಾಜಿ ಶಾಸಕ ಮಂಜುನಾಥ್ರಿಗೆ ಶಕ್ತಿ ತುಂಬಬೇಕು ಎಂದು ಕೋರಿದರು.
ಶೇ.೮೫ ರ ಪ್ರಮಾಣ ಮಹಿಳೆಯರು ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ: ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮಾತನಾಡಿ ಮೋದಿ ಸರ್ಕಾರದ ಅವಾಂತರಗಳಿಂದಾಗಿ ಜನತೆ ಹೈರಾಣಾಗಿದ್ದಾರೆ. ಕೋವಿಡ್ ಸಂದರ್ಭದಲ್ಲಿ ಆರ್ಥಿಕ ಸ್ಥಿತಿ ಪಾತಾಳಕ್ಕಿಳಿಯಿತು. ನಂತರದಲಿ ಕಾಂಗ್ರೆಸ್ ಪಕ್ಷ ಗ್ಯಾರಂಟಿ ಯೋಜನೆಗಳನ್ನು ರೂಪಿಸಿ ಜನರಿಗೆ ನೀಡುವ ಭರವಸೆ ನೀಡಿತು. ಅದರಂತೆ ಜನರಿಗೆ ಗ್ಯಾರಂಟಿ ಯೋಜನಗಳನ್ನು ನೀಡಿದ್ದೇವೆ. ನಾನು ಸರ್ವೇ ಮಾಡಿಸಿರುವ ಪ್ರಕಾರ ಶೇ.೮೫ ರ ಪ್ರಮಾಣದಲ್ಲಿ ಮಹಿಳೆಯರು ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಲಿದ್ದಾರೆ. ಪುರುಷರೇ ನೀವು ಹುಷಾರಾಗಿರಿ, ಗಡಿಬಿಡಿ ಮಾಡಬೇಡಿ. ನಮ್ಮ ಪಕ್ಷಕ್ಕೆ ಮತ ನೀಡಿರಿ ಎಂದು ಕೋರಿದರು.
ಜೆಡಿಎಸ್ನ್ನು ಬಿಜೆಪಿಗೆ ಮಾರಾಟ ಮಾಡಿದ್ದಾರೆ: ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರು ತಮ್ಮ ಸರ್ಕಾರವನ್ನು ಕೆಡವಿದವರೊಂದಿಗೆ ಸೇರಿಕೊಂಡು ಆದಿಚುಂಚನಗಿರಿ ಮಠಕ್ಕೆ ಭೇಟಿ ನೀಡಿದ್ದಾರೆ. ನಿಮಗೆ ನಾಚಿಕೆಯಾಗಬೇಕು. ಎಚ್.ಡಿ.ದೇವೇಗೌಡರು ತಮ್ಮ ಪುತ್ರ ವ್ಯಾಮೋಹದಿಂದ ಜೆಡಿಎಸ್ ಪಕ್ಷವನ್ನು ಬಿಜೆಪಿಗೆ ಮಾರಿಬಿಟ್ಟಿದ್ದಾರೆ. ಇನ್ನು ಜೆಡಿಎಸ್ ಅನ್ನು ಮರೆತುಬಿಡಿ. ೪೭ ವರ್ಷಗಳ ನಂತರ ಕಾಂಗ್ರೆಸ್ ಪಕ್ಷ ಈ ಭಾಗದಲ್ಲಿ ಒಕ್ಕಲಿಗ ಸಮಾಜದ ಸರಳ ಸಜ್ಜನಿಕೆಯ ವ್ಯಕ್ತಿಗೆ ಅವಕಾಶ ನೀಡಿದ. ಜೆಡಿಎಸ್ನ ಒಕ್ಕಲಿಗೆ ಬೆಂಬಲಿಗರೇ ನಿಮಗೆ ಸ್ವಾಭಿಮಾನವಿದ್ದರೆ ಶ್ರಮ ವ್ಯಯಿಸದೇ ಕಾಂಗ್ರಸ್ ಅಭ್ಯರ್ಥಿಗೆ ಮತಹಾಕಿರಿ. ಬಿಜೆಪಿ ಅಭ್ಯರ್ಥಿ ಮಹರಾಜರು ಎಲ್ಲೆಂದರಲ್ಲಿ ಓಡಾಡಿ ನಿಮ್ಮ ಸಮಸ್ಯೆ ಬಗೆಹರಿಸಲು ಸಾಧ್ಯವೇ? ನಮ್ಮ ಅಭ್ಯರ್ಥಿ ನಿಮ್ಮ ಮನೆಯ ಸೇವಕನಾಗಿ ದುಡಿಯಲಿದ್ದಾನೆ ಎಂಬುದನ್ನು ತಿಳಿಯಿರಿ. ನನ್ನ ಪ್ರಕಾರ ದೇಶದಲ್ಲಿ ಮೋದಿ ಅಲೆ ಎಂಬುದಿಲ್ಲ. ರಾಜ್ಯದಲ್ಲಿ ಕಾಂಗ್ರೆಸ್ ೨೦ಕ್ಕೂ ಹೆಚ್ಚು ಸ್ಥಾನಗಳಲ್ಲಿ ಜಯಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಜೆಡಿಎಸ್ ಅವಕಾಶವಾದಿ ಪಕ್ಷ:ಜಿಲ್ಲಾ ಉಸ್ತುವಾರಿ ಸಚಿವ ಎಚ್.ಸಿ.ಮಹದೇವಪ್ಪ ಮಾತನಾಡಿ, ಬಿಜೆಪಿ ಮತ್ತು ಕಾಂಗ್ರೆಸ್ನಿಂದ ಸಮಾನ ಅಂತರ ಕಾಯ್ದುಕೊಳ್ಳುತ್ತೇವೆಂದ ಜೆಡಿಎಸ್ ಇದೀಗ ಅವಕಾಶವಾದಿ ಪಕ್ಷ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಬಿಜೆಪಿ ಸಂವಿಧಾನ ವಿರೋದಿಪಕ್ಷವಾಗಿದೆ. ಸಂವಿಧಾನಕ್ಕೆ ಬೆಲೆ ನೀಡುವುದಾದರೆ ಬಿಜೆಪಿಯು ಒಂದು ದೇಶ ಒಂದು ಚುನಾವಣೆ, ಒಂದು ದೇಶ ಒಂದು ಧರ್ಮ ಎಂಬಿತ್ಯಾದಿ ಘೋಷಣೆಗಳನ್ನು ಹೊರಡಿಸುತ್ತಿರುವುದು ಏಕೆ? ಸರ್ವಾಧಿಕಾರಿ ಆಡಳಿತ ನಡೆಸಲು ಬಿಜೆಪಿ ಹೂಡಿರುವ ತಂತ್ರ ಇದಾಗಿದೆ. ಕಾಂಗ್ರೆಸ್ ಸಂವಿಧಾನದ ಆಶಯದಂತೆ ಆಡಳಿತ ನಡೆಸುತ್ತಿದ್ದು, ಕಾಂಗ್ರೆಸ್ ಅಭ್ಯರ್ಥಿಗೆ ಮತ ನೀಡುವಂತೆ ಕೋರಿದರು.
ಸಚಿವ ವೆಂಕಟೇಶ್ ಮಾತನಾಡಿ, ಜೆಡಿಎಸ್ ಯಾವುದೇ ತತ್ವ ಸಿದ್ಧಾಂತವಿಲ್ಲದ ಪಕ್ಷ. ಆ ಪಕ್ಷದಲ್ಲಿ ಯಾವುದೇ ನೀತಿಗಳಿಲ್ಲ. ಅಧಿಕಾರಕ್ಕಾಗಿ ಅವಕಾಶವಾದಿ ರಾಜಕಾರಣ ಮಾಡುವ ಸಿದ್ಧಾಂತ ಹೊಂದಿರುವ ಪಕ್ಷವಾಗಿ ಅದು ಒಂದು ರೀತಿಯಲ್ಲಿ ಕಲಬೆರಕೆ ಪಕ್ಷವಾಗಿದೆ ಎಂದು ಕುಹಕವಾಡಿದರು.
ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೋಳಿ, ಕೆಪಿಸಿಸಿ ಕಾರ್ಯಾದ್ಯಕ್ಷ ತನ್ವೀರ್ ಸೇಠ್ ಮಾತನಾಡಿದರು. ಸಭೆಯಲ್ಲಿ ಮಾಜಿ ಶಾಸಕ ಯತೀಂದ್ರ ಸಿದ್ದರಾಮಯ್ಯ, ಜಿಲ್ಲಾ ಗ್ರಾಮಾಂತರ ಅಧ್ಯಕ್ಷ ಡಾ.ಬಿ.ಜೆ.ವಿಜಯಕುಮಾರ್, ಗ್ಯಾರಂಟಿ ಯೋಜನೆಗೆಳ ರಾಜ್ಯ ಉಪಾಧ್ಯಕ್ಷೆ ಡಾ.ಪುಷ್ಪ ಅಮರನಾಥ್, ವಿಧಾನ ಪರಿಷತ್ ಸದಸ್ಯ ಡಾ.ತಿಮ್ಮಯ್ಯ, ಪ್ರೇಮ್ಕುಮಾರ್ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಚಂದ್ರಮಣಿ, ಸ್ಥಳೀಯ ಘಟಕಗಳ ಬ್ಲಾಕ್ ಅಧ್ಯಕ್ಷರು ಮತ್ತು ಪಕ್ಷದ ಕಾರ್ಯಕರ್ತರು, ಅಬಿಮಾನಿಗಳು ಹಾಜರಿದ್ದರು.
೫೦ ಸಾವಿರ ಲೀಡ್ ಆದರೆ ಮಂಜುನಾಥ್ ಎಮ್ಮೆಲ್ಸಿ
ಪಶುಸಂಗೋಪನಾ ಸಚಿವ ಕೆ.ವೆಂಕಟೇಶ್ ಮಾತನಾಡುವ ವೇಳೆ ಮಾಜಿ ಶಾಸಕ ಮಂಜುನಾಥ್ರಿಗೆ ಎಂಎಲ್ಸಿ ಸ್ಥಾನ ನೀಡಿರಿ ಎಂದು ಕೂಗು ಕೇಳಿ ಬಂದಾಗ, ಲೋಕಸಭಾ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗೆ ಹುಣಸೂರಿನ ಮತದಾರರು ೫೦ ಸಾವಿರ ಲೀಡ್ ನೀಡಿದಲ್ಲಿ ಮಂಜುನಾಥ್ರನ್ನು ಎಂಎಲ್ಸಿ ಮಾಡುವುದಾಗಿ ಘೋಷಿಸಿದಾಗ, ಮುಖ್ಯಮಂತ್ರಿ ಸಿದ್ದರಾಮಯ್ಯ ವೆಂಕಟೇಶ್ ಕಡೆಗೆ ನೋಡುತ್ತಿದ್ದದು ಕಂಡುಬಂತು.
೧೩ಊUಓ೧: ಹುಣಸೂರು ನಗರದ ಮುನೇಶ್ವರ ಕಾವಲ್ ಮೈದಾನದಲ್ಲಿ ಆಯೋಜಿಸಿದ್ದ ಚುನಾವಣಾ ಪ್ರಚಾರ ಸಭೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಿದರು. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಯಂತೀAದ್ರ ಸಿದ್ದರಾಮಯ್ಯ, ಎಚ್.ಪಿ,ಮಂಜುನಾಥ್, ಪುಷ್ಪ ಅಮರನಾಥ್ ಇತರರು ಇದ್ದಾರೆ