ಸಂಸದ ಶ್ರೇಯಸ್ ಪಟೇಲ್ ಸೂಚನೆ
ಪ್ರತಿನಿಧಿ ವರದಿ ಹಾಸನ
ದಶಕಗಳ ಬಳಿಕ ಜನರ ಆಶೀರ್ವಾದದಿಂದ ಎಂಪಿ ಚುನಾವಣೆ ಗೆದ್ದಿದ್ದು ಮೈಮರಿಯದೆ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಹೆಚ್ಚು ಸ್ಥಾನಗಳನ್ನು ಗೆಲ್ಲುವ ನಿಟ್ಟಿನಲ್ಲಿ ಗಮನ ಹರಿಸಬೇಕು ಎಂದು ಕಾರ್ಯಕರ್ತರಿಗೆ ಸಂಸದ ಶ್ರೇಯಸ್ ಪಟೇಲ್ ತಿಳಿಸಿದರು.
ನಗರದ ಕಾಂಗ್ರೆಸ್ ಕಚೇರಿಯಲ್ಲಿ ಜಿಲ್ಲಾ ಎಸ್.ಸಿ, ಎಸ್.ಟಿ ಘಟಕದ ವತಿಯಿಂದ ಸನ್ಮಾನ ಸ್ವೀಕರಿಸಿ ಮಾತನಾಡಿ, 2.5 ದಶಕಗಳ ಬಳಿಕ ಕಾಂಗ್ರೆಸ್ ಪಕ್ಷ ಜಿಲ್ಲೆಯಲ್ಲಿ ಗೆಲುವು ಸಾಧಿಸಿದ್ದು, ಈ ಬಾರಿಯ ಚುನಾವಣೆಯಲ್ಲಿ ಹೆಚ್ಚು ಮತ ನೀಡಿ ಜನರು ನನ್ನನ್ನು ಆಯ್ಕೆ ಮಾಡಿದ್ದಾರೆ. ದಲಿತರ ಮತಗಳು ಸಹ ನನ್ನ ಗೆಲುವಿಗೆ ಸಹಕಾರ ನೀಡಿದ್ದು, ಬೂತ್ ಮಟ್ಟದಿಂದಲೂ ಜನ ನನ್ನ ಕೈ ಹಿಡಿದ ಹಿನ್ನೆಲೆಯಲ್ಲಿ ಜಯ ಲಭಿಸಿದೆ. ಪ್ರಾಮಾಣಿಕವಾಗಿ ಜನಸೇವೆ ಮಾಡುವುದಾಗಿ ಹೇಳಿದರು.
ಮುಂದಿನ ದಿನಗಳಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆ ಬರಲಿದ್ದು ಕಾರ್ಯಕರ್ತರು ಯಾವುದೇ ಅಸಮಾಧಾನಕ್ಕೆ ಒಳಗಾಗದೆ ತಾಳ್ಮೆಯಿಂದ ಇರಬೇಕು, ಎಲ್ಲರಿಗೂ ಅಧಿಕಾರ ಸಿಗಲಿದೆ. ಸಾಮಾಜಿಕ ನ್ಯಾಯದಡಿ ಅಧಿಕಾರ ಹಂಚಿಕೆ ಆಗಲಿದ್ದು ಪಕ್ಷದ ಬಲವರ್ಧನೆಗೆ ಎಲ್ಲರೂ ಕೆಲಸ ಮಾಡುವಂತೆ ಸಲಹೆ ನೀಡಿದರು.
ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಬೇರು ಮಟ್ಟದಿಂದ ಕಟ್ಟಬೇಕಿದೆ ಯಾವುದೇ ಭಿನ್ನಾಭಿಪ್ರಾಯಕ್ಕೆ ಕಿವಿಗೊಡದೆ ಕಾರ್ಯಕರ್ತರು ಒಗ್ಗಟ್ಟಿನಿಂದ ಕೆಲಸ ಮಾಡಬೇಕು, ಜಿಪಂ 25 ಸ್ಥಾನಕ್ಕೂ ಹೆಚ್ಚು ಗೆಲುವು ಪಡೆಯುವ ಮೂಲಕ ಅಧಿಕಾರ ಹಿಡಿಯುವ ಮಟ್ಟಕ್ಕೆ ಬೆಳೆಯಬೇಕು ಎಂದು ಹೇಳಿದರು.
ಜಿಲ್ಲೆಯ ಜನರ ಆಶೀರ್ವಾದದಂತೆ ಮುಂದಿನ ದಿನಗಳಲ್ಲಿ ಅಭಿವೃದ್ಧಿ ಕಡೆ ಹೆಚ್ಚು ಗಮನಹರಿಸಲಾಗುವುದು ಗೆದ್ದಿರುವ ಖುಷಿ ಯೊಂದಿಗೆ ಸವಾಲು, ನಿರೀಕ್ಷೆ, ಜವಾಬ್ದಾರಿ ಹೆಚ್ಚಿದೆ. ಸಾರ್ವಜನಿಕವಾಗಿ ಸಿಗುವ ಮೂಲಕ ಮನೆಯ ಮಗನಾಗಿ ಸೇವೆ ಸಲ್ಲಿಸುವುದಾಗಿ ಭರವಸೆ ನೀಡಿದರು.
ಮುಖಂಡರಾದ ಮಲ್ಲಿಗೆವಾಳು ದೇವಪ್ಪ, ಅಶೋಕ್, ಪ್ರಕಾಶ್, ರಾಜು, ಲಕ್ಷ್ಮಣ್ ಸೇರಿದಂತೆ ಇನ್ನಿತರರು ಇದ್ದರು.