ಮಂಡ್ಯ: ಪಕ್ಷದ ಬಲವರ್ಧನೆಗೆ ಹಗಲಿರುಳು ಶ್ರಮಿಸಿರುವ ನಮ್ಮನ್ನು ಕಡೆಗಣಿಸಬೇಡಿ. ನಮಗೂ ಅವಕಾಶಗಳನ್ನು ಕೊಡಿ. ನಮ್ಮ ಹಾಗೂ ಪಕ್ಷದ ಶಕ್ತಿ ಏನೆಂಬುದನ್ನು ತೋರಿಸುತ್ತೇವೆ ಎಂದು ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಡಾ.ಸಿದ್ದರಾಮಯ್ಯ ಹೇಳಿದರು. ಶುಕ್ರವಾರ ನಗರದ ತಾವರೆಗೆರೆಯಲ್ಲಿ ಅಭಿಮಾನಿಗಳು ಮತ್ತು ಕಾರ್ಯಕರ್ತರ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ನನಗೆ ಅಧಿಕಾರದ ಆಸೆ ಇಲ್ಲ. ಆದರೆ, ಸಾರ್ವಜನಿಕವಾಗಿ ಕೆಲಸ ಮಾಡುವುದಕ್ಕೆ ಯಾವುದಾದರೊಂದು ಅಧಿಕಾರ ಮುಖ್ಯ. ಜಿಲ್ಲೆಯೊಳಗೆ ಪಕ್ಷವನ್ನು ಸದೃಢವಾಗಿ ಕಟ್ಟಿ ಬೆಳೆಸಿದ್ದೇವೆ. ಅದರ ಫಲವನ್ನು ನಮ್ಮ ಪಕ್ಷದವರು ಅನುಭವಿಸಲು ಅವಕಾಶ ಕೊಡಬೇಕು. ಬೇರೆಯವರಿಗೆ ಕೊಡುವುದರಿಂದ ನಿಷ್ಠೆಯಿಂದ ಪಕ್ಷಕ್ಕೆ ದುಡಿದ ಮುಖಂಡರು,ಕಾರ್ಯಕರ್ತರ ಮನಸ್ಸಿಗೆ ನೋವುಂಟಾಗುತ್ತದೆ ಎಂದು ತಿಳಿಸಿದರು.