ಪ್ರತಿನಿಧಿ ವರದಿ ಚಾಮರಾಜನಗರ
ಬಿಜೆಪಿ ಪಕ್ಷದಲ್ಲಿ ತಮ್ಮನ್ನು ಕಡೆಗಣನೆ ಮಾಡಲಾಗಿದೆ ಎಂದು ಆರೋಪಿಸಿ ನಾಯಕ ಸಮುದಾಯದ ಕೆಲವು ಮುಖಂಡರು ಸಮುದಾಯವನ್ನು ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಬಿಜೆಪಿ ಮುಖಂಡ ಕೆಲ್ಲಂಬಳ್ಳಿ ಸೋಮನಾಯಕ ಆರೋಪಿಸಿದರು.
ನಾಯಕ ಸಮುದಾಯದ ಕೆಲವು ಮುಖಂಡರು ಬಿಜೆಪಿ ಪಕ್ಷದಲ್ಲಿ ನಮ್ಮ ಸಮುದಾಯವನ್ನು ಕಡೆಗಣನೆ ಮಾಡಲಾಗಿದೆ ಎಂದು ಆರೋಪಿಸಿ ಎಸ್.ಟಿ ಸಮುದಾಯದ ಕೇಂದ್ರ ಪರಿಹಾರ ನಿಗಮದ ಮಾಜಿ ಅಧ್ಯಕ್ಷ ಎಂ.ರಾಮಚಂದ್ರ, ಎಂ.ಅಪ್ಪಣ್ಣ, ಮಾಜಿ ಮಹಾಪೌರ, ಶಿವಕುಮಾರ್, ಮಲ್ಲೇಶನಾಯಕ, ಮಾಜಿ ಎಂಎಲ್ಸಿ ಸಿದ್ದರಾಜು ಅವರು ಖಾಸಗಿ ಹೋಟೆಲ್ ವೊಂದರಲ್ಲಿ ಗೌಪ್ಯವಾಗಿ ಸಭೆ ನಡೆಸಿದ್ದಾರೆ. ಸಮುದಾಯದ ಜನರೆಲ್ಲರೂ ಕಾಂಗ್ರೆಸ್ನತ್ತ ಮುಖ ಮಾಡಿದ್ದಾರೆ ಎಂದು ಹೇಳುತ್ತಿದ್ದಾರೆ. ಇದು ಸರಿಯಲ್ಲ. ಇದರಿಂದ ಅವರು ಸಮುದಾಯದ ಜನರನ್ನು ದಿಕ್ಕುತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಸುದ್ದಿಗೋಷ್ಟಿಯಲ್ಲಿಅಸಮಾಧಾನ ಹೊರ ಹಾಕಿದರು.
ಬಿಜೆಪಿ ಪಕ್ಷದಲ್ಲಿದ್ದು, ಅಧಿಕಾರ ಪಡೆದಿದ್ದ ಅವರು, ಈಗ ಪಕ್ಷದ ವಿರುದ್ಧ ಮಾತನಾಡುತ್ತಿರುವುದು ಸರಿಯಲ್ಲ. ಅವರಿಗೆ ಕಾಂಗ್ರೆಸ್ ಪಕ್ಷಕ್ಕೆ ಹೋಗುವ ಇಚ್ಛೆ ಇದ್ದರೆ ಹೋಗಲಿ, ಅದನ್ನು ಬಿಟ್ಟು ಸಮುದಾಯದ ಜನರೆಲ್ಲರೂ ಕಾಂಗ್ರೆಸ್ನತ್ತ ಮುಖ ಮಾಡಿದ್ದಾರೆ ಎಂದು ಹೇಳುವುದು ಸರಿಯಲ್ಲ. ಇದು ಸತ್ಯಕ್ಕೆ ದೂರವಾದದ್ದುಎಂದು ತಿಳಿಸಿದರು.
ಬಿಜೆಪಿ ಸರಕಾರದ ಅವಧಿಯಲ್ಲಿ ಸಮುದಾಯದ ತಳವಾರ ಹಾಗೂ ಪರಿವಾರದವರನ್ನು ಎಸ್ಟಿಗೆ ಸೇರಿಸಲಾಯಿತು. ನಾಯಕ ಸಮುದಾಯದ ಅಭಿವೃದ್ಧಿಗೆ ಬಿಜೆಪಿ ಹಲವು ಕಾರ್ಯಕ್ರಮಗಳನ್ನು ನೀಡಿದೆ. ಆದ್ದರಿಂದ ಸಮುದಾಯ ಯಾವಾಗಲೂ ಬಿಜೆಪಿಯೊಂದಿಗೆ ಇರಲಿದೆ. ಬಿಜೆಪಿಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸುತ್ತಿರುವ ಈ 5 ನಾಯಕ ಮುಖಂಡರು ಕಾಂಗ್ರೆಸ್ ಪಕ್ಷಕ್ಕೆ ಹೋದರೆ ಸ್ವಾಗತ. ನಾನೇ ಅವರ ಹೆಸರಿನಲ್ಲಿ ಮೈಸೂರಿನ ಚಾಮುಂಡೇಶ್ವರಿ ತಾಯಿಗೆ ಪೂಜೆ ಸಲ್ಲಿಸುವೆ ಎಂದರು.
ಸುದ್ದಿಗೋಷ್ಟಿಯಲ್ಲಿ ಮುಖಂಡ ರಾಜುನಾಯಕ ಇದ್ದರು.