ಬೆಂಗಳೂರು, ಜನವರಿ 24: ಈ ತಿಂಗಳು ನನ್ನ ನಿರ್ದೇಶಕ ಅವಧಿ ಮುಕ್ತಾಯವಾಗುತ್ತೆ. 16 ವರ್ಷಗಳಿಂದ ನಿರ್ದೇಶಕನಾಗಿ ಕೆಲಸ ಮಾಡಿದ್ದೇನೆ. ನನ್ನ ಮೊದಲ ಆಯ್ಕೆ ವೈದ್ಯಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸುವುದು. ನನಗೆ ರಾಜಕೀಯ ಕ್ಷೇತ್ರದ ಬಗ್ಗೆ ಯಾವುದೇ ಆಸಕ್ತಿ ಇಲ್ಲ. ನಾನು ಯಾವುದೇ ಲೋಕಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿ ಅಲ್ಲ ಎಂದು ಜಯದೇವ ನಿರ್ದೇಶಕ ಡಾ.ಸಿ.ಎನ್. ಮಂಜುನಾಥ್ (Jayadeva Hospital Director Manjunath) ಹೇಳಿದರು. ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನನ್ನ ಮೊದಲ ಆಯ್ಕೆ ವೈದ್ಯಕೀಯ ಸೇವೆ ಎಂದು ಸ್ಪಷ್ಟಪಡಿಸಿದರು.
ಶೇ.500ರಷ್ಟು ಅಭಿವೃದ್ಧಿ ನನ್ನ ಅವಧಿಯಲ್ಲಿಯೇ ಆಗಿದೆ. ನನ್ನ ಮುಂದುವರಿಸುವ ಬಗ್ಗೆ ಸರ್ಕಾರ ಅಂತಿಮ ನಿರ್ಧಾರ ಕೈಗೊಳ್ಳಲಿದೆ. ಮುಂದುವರೆಸುವ ಬಗ್ಗೆ ನನ್ನ ಅಭಿಪ್ರಾಯ ಪಡೆದಿಲ್ಲ. 300 ಹಾಸಿಗೆ ಇದ್ದ ಆಸ್ಪತ್ರೆ ಈಗ 2 ಸಾವಿರಕ್ಕೆ ಏರಿಕೆ ಆಗಿದೆ. ನನ್ನ ಅವಧಿಯಲ್ಲಿ 2 ಸಾವಿರ ಬೆಡ್ಗಳಿರುವ ಆಸ್ಪತ್ರೆ ಆಗಿದೆ. ವಿಶ್ವಭೂಪಟದಲ್ಲಿ ಜಯದೇವ ಆಸ್ಪತ್ರೆಗೆ ಮಾನ್ಯತೆ ಸಿಕ್ಕಿದೆ. ಜನ ಸಾಮಾನ್ಯರು ಗೌರವ ಯುತವಾಗಿ ನಿವೃತ್ತಿ ಕೊಡುತ್ತಿದ್ದಾರೆ. ನನ್ನ ಆಸ್ಪತ್ರೆಯ ಸಹುದ್ಯೋಗಿಗಳು ಗೌರವಯುತ್ತವಾಗಿ ನಡೆಸಿಕೊಂಡಿದ್ದಾರೆ ಎಂದರು.
ಇನ್ನೊಂದು ವಾರದಲ್ಲಿ ಹೊಸ ನಿರ್ದೇಶಕರು ಬರುತ್ತಾರೆ. ಯಾರು ಬರುತ್ತಾರೆ ಅಂತ ನನಗೆ ಗೊತ್ತಿಲ್ಲ. ಆಯ್ಕೆ ಕಮಿಟಿಯಲ್ಲಿ ನಾನಿರಲಿಲ್ಲ. ನನ್ನ ಅವಧಿ ಮುಕ್ತಾಯದ ನಿರ್ಧಾರ ಸರ್ಕಾರಕ್ಕೆ ಬಿಟ್ಟ ವಿಚಾರ. ಒತ್ತಡ ಹಾಕುವ ಜಾಯಮಾನ ನನಗಿಲ್ಲ. ಆಡಳಿತ ಮಂಡಳಿ ಸಭೆಯಲ್ಲಿ ನಾನು ಇರಲಿಲ್ಲ. ಸರ್ಕಾರ ಈಗಾಗಲೇ ಹೊಸ ನಿರ್ದೇಶಕರನ್ನು ನಿರ್ಧಾರ ಮಾಡಿದೆ. ಈಗಾಗಲೇ ನಿರ್ದೇಶಕರ ನಿಗದಿ ಪ್ರಸ್ತಾವನೆ ಕಾರ್ಯ ನಡೆಯುತ್ತಿದೆ. ಈ ಸ್ಥಾನದಲ್ಲಿ ಮುಂದುವರೆಯಲು ನಾನು ಯಾವ ಒತ್ತಡವೂ ಹಾಕಿಲ್ಲ. ಸರ್ಕಾರ ಒಂದು ವೇಳೆ ಮುಂದುವರೆಯಿರಿ ಎಂದರೆ ಎಂಬ ಪ್ರಶ್ನೆಗೆ NO REACTION ಎಂದು ಡಾ.ಸಿ.ಎನ್.ಮಂಜುನಾಥ್ ಉತ್ತರಿಸಿದರು.