ಪ್ರತಿನಿಧಿ ವರದಿ ಯಳಂದೂರು
ಆದಿವಾಸಿಗಳ ಇತಿಹಾಸ ಮತ್ತು ಅವರ ಸಂಸ್ಕೃತಿಯನ್ನು ಕೃತಿಯ ಮೂಲಕ ತಿಳಿಸಿಕೊಡಲು ಕಾನು ಎನ್ನುವ ಹೆಸರಿನಲ್ಲಿ ಆರಂಭವಾಗಿರುವ ಗ್ರಂಥಾಲಯವನ್ನು ಸದ್ಬಳಕೆ ಮಾಡಿಕೊಳ್ಳುವಂತೆ ಬಿಆರ್ ಹಿಲ್ಸ್ನ ವೈದ್ಯಕೀಯ ಮತ್ತು ಸಾರ್ವಜನಿಕ ಆರೋಗ್ಯ ಸಂಶೋಧಕ ಡಾ.ಪ್ರಶಾಂತ್ ಹೇಳಿದರು.
ತಾಲೂಕಿನ ಬಿಳಿಗಿರಿರಂಗನಬೆಟ್ಟದಲ್ಲಿ ಹಮ್ಮಿಕೊಳ್ಳಲಾಗಿದ್ದ “ಕಾನು” ಗ್ರಂಥಾಲಯ ಉದ್ಘಾಟನೆಯ ವೇದಿಕೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿ, ನಿತ್ಯ ಹರಿದ್ವರ್ಣ ಅರಣ್ಯವನ್ನು ಕಾನು ಎಂದು ಕರೆಯುತ್ತಾರೆ. ಇದು ಆದಿವಾಸಿಗಳ ಇತಿಹಾಸ ಮತ್ತು ಅವರ ಸಂಸ್ಕೃತಿಯ ಜ್ಞಾನ ಕೇಂದ್ರವಾಗಿದೆ. ಇದರಿಂದ ಆದಿವಾಸಿಗಳ ವಿಷಯಗಳಿಗೆ ಸಂಬಂಧಿಸಿದ ಸಮಗ್ರ ದಾಖಲೆಗಳು ಹಾಗೂ ಜ್ಞಾನವನ್ನು ಕಲೆಹಾಕಿ ಸಂರಕ್ಷಿಸುವ ಕೆಲಸ ಮಾಡಲು ಕಾನು ಸ್ಥಾಪಿಸಲಾಗಿದೆ. ಇದನ್ನು ಸೋಲಿಗರ, ಬುಡಕಟ್ಟು ಸಮುದಾಯದ ಮೂಲಗಳ ರಕ್ಷಣೆಗಾಗಿ ಸ್ಥಾಪಿಸಲಾಗಿದೆ ಎಂದು ತಿಳಿಸಿದರು.
ಬುಡಕಟ್ಟು ಸಮುದಾಯದ ಮುಖಂಡ ಜಡೇಸ್ವಾಮಿ ಮಾತನಾಡಿ, ನಾವು ಇತರೆ ಸಂಘಟನೆಗಳ ಹೋರಾಟಗಳ ಮೂಲಕ ಸರ್ಕಾರದ ಸೌಲಭ್ಯಗಳನ್ನು ಪಡೆದುಕೊಳ್ಳುತ್ತಿದ್ದೇವೆ. ಆದರೆ ನಾವು ನಮ್ಮ ಸಂಸ್ಕೃತಿಯನ್ನು ಉಳಿಸಿಕೊಳ್ಳಲು ಆಗುತ್ತಿಲ್ಲ. ಅವುಗಳನ್ನ ಉಳಿಸಿ, ಮುಂದಿನ ಪೀಳಿಗೆಗೆ ನೀಡಬೇಕಿದೆ ಎಂದರು.
ಜಿಪಂ ಮಾಜಿ ಸದಸ್ಯೆ ಕೇತಮ್ಮ ಮಾತನಾಡಿ, ನಾವು ನಿತ್ಯ ಹಸಿರಿನಿಂದ ಕೂಡಿರುವ ಅರಣ್ಯಕ್ಕೆ ಕಾನು ಎಂದು ಕರೆಯುತ್ತೇವೆ. ಕಾನುವನ್ನು ನಾವು ಕಾಡಿನಲ್ಲಿ ನೋಡುತ್ತಿದ್ದೆವು. ಈಗ ಗ್ರಂಥಾಲಯದ ಮುಖಾಂತರ ನೋಡುತ್ತೇವೆ. ನಮ್ಮ ಸಂಸ್ಕೃತಿ, ಕಾಡು, ಪರಿಸರ ಉಳಿಯಬೇಕೆಂದರೆ ಎಲ್ಲ ಬುಡಕಟ್ಟು ಸಮುದಾಯದ ಮುಖಂಡರು ವಿಜ್ಞಾನಿಗಳೊಂದಿಗೆ ಸೇರಿ ಸಂರಕ್ಷಣೆ ಮಾಡುವ ಕೆಲಸ ಮಾಡಬೇಕು ಎಂದು ತಿಳಿಸಿದರು.
ಜಿಲ್ಲಾ ಬುಡಕಟ್ಟು ಗಿರಿಜನ ಅಭಿವೃದ್ದಿ ಸಂಘದ ಕಾರ್ಯದರ್ಶಿ ಡಾ.ಸಿ.ಮಾದೇಗೌಡ ಗ್ರಂಥಾಲಯವನ್ನು ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ವಿದ್ವಾಂಸರಾದ ಎನ್.ಶ್ರೀನಿವಾಸ್, ಜರ್ಮನಿಯ ವ್ರನರ್, ಆದಿವಾಸಿ ಬುಡಕಟ್ಟು ಸಮುದಾಯದ ಮುಖಂಡರು ಇದ್ದರು.
25ವೈಎಲ್ಡಿ.1: ಯಳಂದೂರು ತಾಲೂಕಿನ ಬಿಳಿಗಿರಿರಂಗನಬೆಟ್ಟದಲ್ಲಿ ಹಮ್ಮಿಕೊಳ್ಳಲಾಗಿದ್ದ “ಕಾನು” ಗ್ರಂಥಾಲಯ ಉದ್ಘಾಟನೆಯ ವೇದಿಕೆ ಕಾರ್ಯಕ್ರಮವನ್ನು ಬಿಆರ್ ಹಿಲ್ಸ್ನ ವೈದ್ಯಕೀಯ ಮತ್ತು ಸಾರ್ವಜನಿಕ ಆರೋಗ್ಯ ಸಂಶೋಧಕ ಡಾ.ಪ್ರಶಾಂತ್ ಉದ್ಘಾಟಿಸಿದರು.