ಪ್ರತಿನಿಧಿ ವರದಿ ಮಡಿಕೇರಿ
ವಿಷ್ಣು ಸೇನಾ ಸಮಿತಿಯಿಂದ ಖ್ಯಾತ ಕನ್ನಡ ಚಲನ ಚಿತ್ರ ನಟ ಡಾ.ವಿಷ್ಣುವರ್ಧನ್ಅವರ 74ನೇ ಹುಟ್ಟುಹಬ್ಬವನ್ನು ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ಸೆ.22ರಂದು ನಗರದಲ್ಲಿ ಆಚರಿಸಲಾಗುತ್ತದೆ ಎಂದು ಸಮಿತಿಯ ಅಧ್ಯಕ್ಷ ರಫೀಕ್(ದಾದಾ) ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು, ನಗರದ ಉಕ್ಕುಡ ರಸ್ತೆಯ ಸಾಲುಮರದ ತಿಮ್ಮಕ್ಕ ಪಾರ್ಕ್ ಮುಂಭಾಗದ ಅಂಬೇಡ್ಕರ್ ಭವನದಲ್ಲಿ ಸೆ.22ರ ಮಧ್ಯಾಹ್ನ 2 ಗಂಟೆಗೆ ಡಾ.ವಿಷ್ಣುವರ್ಧನ್ ಹುಟ್ಟು ಹಬ್ಬವನ್ನು ಮಡಿಕೇರಿ ನಗರ ಸಭೆಯ ನಿವೃತ್ತ ಪೌರಾಯುಕ್ತರು ಹಾಗೂ ಜೆಡಿಎಸ್ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷ ಬಿ.ಬಿ.ಪುಷ್ಪಾವತಿ ಅವರು ಉದ್ಘಾಟಿಸಲಿದ್ದಾರೆಂದು ತಿಳಿಸಿದರು.
ಸಮಾರಂಭಕ್ಕೆ ಜೂನಿಯರ್ ವಿಷ್ಣುವರ್ಧನ್ ಎಂದೇ ಖ್ಯಾತರಾದ ಬೆಂಗಳೂರಿನ ಶ್ಯಾಂ ಅವರು ಆಗಮಿಸಲಿದ್ದಾರೆ. ಮಂಗಳೂರಿನ ಗೊಂಬೆ ಕುಣಿತ ಕಲಾವಿದರ ಕಾರ್ಯಕ್ರಮ ಸೇರಿದಂತೆ ಸ್ಥಳೀಯ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ರಾತ್ರಿ 9 ಗಂಟೆಯವರೆಗೆ ಅದ್ಧೂರಿಯಿಂದ ನಡೆಸಲಾಗುತ್ತದೆ. ಸಂಜೆ ಸಮಿತಿಯಿಂದ ಅನ್ನದಾನವನ್ನು ಏರ್ಪಡಿಸಲಾಗಿದೆ. ಕಾರ್ಯಕ್ರಮದಲ್ಲಿ ಜಿಲ್ಲೆಯ ಎಲ್ಲ ವಿಷ್ಣು ಅಭಿಮಾನಿಗಳು ಪಾಲ್ಗೊಳ್ಳುವಂತೆ ಮನವಿ ಮಾಡಿದರು.
ಸಮಿತಿಯ ಖಜಾಂಚಿ ಪಿ.ಐ.ಅನ್ಸಾರ್, ಸಹ ಕಾರ್ಯದರ್ಶಿ ಪ್ರವೀಣ್ ಲೋಬೋ, ನಿರ್ದೇಶಕ ಬಿ.ಜಿ.ರಮೇಶ್ ರೈ, ಕೆ.ಕೆ.ಜಾನ್ಸನ್ ಉಪಸ್ಥಿತರಿದ್ದರು.